August 4, 2012

ಶವಸಂಸ್ಕಾರ


ಗಂಗಾದತ್ತ ಒಬ್ಬ ಶಿಸ್ತಿನ ವಾಹನ ಚಾಲಕ .  ಈತ ಪುಣೆಯ ಪ್ರಖ್ಯಾತ ಕೈಗಾರಿಕೊದ್ಯಮಿಯಾದ ಶ್ರೀ ಝಾವೇರಿ ಪೂನವಾಲ ಎಂಬುವರ ದುಬಾರಿ ಕಾರಿನ ಚಾಲಕನಾಗಿದ್ದ.  ಈತ ತನ್ನ ಮಾಲಿಕರಿಗಾಗಿ ಹಗಲೂ ರಾತ್ರಿ ದುಡಿಯುತ್ತಿದ್ದ. ಈತ ಮಾಲಿಕರಿಂದಲೂ  ಒಳ್ಳೆಯ ಹೆಸರು ಗಳಿಸಿದ್ದ.  ಗಂಗಾದತ್ತ ತನ್ನ ವಾಹನ ಚಾಲನೆ ಪ್ರಾರಂಭ ಮಾಡಿದ್ದೆ ದುಬಾರಿ ವಾಹನದಿಂದ.  ಒಮ್ಮೆಯೂ ಯಾವ ಒಂದು ಚಿಕ್ಕ ಗೆರೆಯ ಗುರುತೂ ತನ್ನ ಕಾರಿಗೆ ಬೀಳದಂತೆ ಅತ್ಯಂತ ಜೋಪಾನವಾಗಿ ನೋಡಿಕೊಂಡಿದ್ದ.  ಜೀವನದಲ್ಲೂ ಸಾಕಷ್ಟು ಕಷ್ಟಪಟ್ಟು ತನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದ.  ಒಬ್ಬ ಮಗಳನ್ನು ಚಾರ್ಟೆಡ್ ಅಕೌನ್ಟೆಂಟ್ ಕೂಡ ಮಾಡಿದ್ದ.

ಗಂಗಾದತ್ತ ಒಂದು ದಿನ ಹೃದಯಾಘಾತದಿಂದ ನಿಧನಾದ.  ಆ ಸಮಯದಲ್ಲಿ ತನ್ನ ಮಾಲೀಕರು  ಮುಂಬೈನಲ್ಲಿದ್ದರು .  ಈ ವಿಚಾರ ತಿಳಿದ ಮಾಲೀಕರು  ತಕ್ಷಣ ತನ್ನೆಲ್ಲ ಕೆಲಸಗಳನ್ನು ಸ್ತಗಿತಗೊಳಿಸಿ ಮುಂಬೈಗೆ ವಾಪಸು ಬರುವ ಮುಂಚೆ ಗಂಗಾದತ್ತನ ಮನೆಗೆ ಫೋನ್ ಮಾಡಿ ತಾನು ಬರುವವರೆಗೂ ಗಂಗಾದತ್ತನ ಪಾರ್ಥಿವ ಶರೀರವನ್ನು ಇಡಬೇಕೆಂದು ತಾನೇ ಶವಸಂಸ್ಕಾರದ ವ್ಯವಸ್ತೆ ಮಾಡುವುದಾಗಿ ಝಾವೇರಿ ತಿಳಿಸಿದರು .  ಹೆಲಿಕಾಪ್ಟರ್  ಮೂಲಕ ಪೂನಾಕ್ಕೆ ಬಂದರು .

ಬಂದವರೆ  ಗಂಗಾದತ್ತ ಓಡಿಸುತ್ತಿದ ಆ ದುಬಾರಿ ಕಾರಿಗೆ ಪುಷ್ಪಾಲಂಕಾರ ಮಾಡಿಸಿದರು . ಈ ಕಾರಿನಲ್ಲೇ ಗಂಗಾದತ್ತನ ಶವ ಯಾತ್ರೆ ನಡೆಸಬೇಕೆಂದು ಮತ್ತು ಆ ಕಾರಿನ ಚಾಲನೆ ತಾನೇ ಮಾಡುತ್ತೇನೆಂದು ಇದಕ್ಕೆ ಅನುಮತಿ ನೀಡಬೇಕೆಂದು ಝಾವೇರಿ ಗಂಗಾದತ್ತನ ಕುಟುಂಬದವರಲ್ಲಿ ವಿನಂತಿಸಿಕೊಂಡರು .   ಕುಟುಂಬದ ಸದಸ್ಯರು ಮೂಕ ವಿಸ್ಮಿತರಾದರು.  ತಮ್ಮ ಯಜಮಾನ ತನ್ನ ಕಾರಿನ ಚಾಲಕನಿಗೆ ತೋರಿಸುತ್ತಿರುವ ಗೌರವದ ಬಗ್ಗೆ ಏನು ಹೇಳಲೂ ತೊಚದಾದರು.  ಎಲ್ಲರ ಕಣ್ಣುಗಳಲ್ಲಿ  ಧಾರಾಕಾರ ನೀರು ಹರಿಯಿತು. ಗಂಗಾದತ್ತನ ಪಾರ್ಥಿವ ಶರೀರದ ಜೊತೆಯಲ್ಲಿ  ಅಪಾರ ಸಂಖ್ಯೆಯಲ್ಲಿ ಬಂಧು- ಮಿತ್ರರು ಬಂದು ಸಂಸ್ಕಾರ ಕಾರ್ಯ ನೆರವೇರಿಸಲು ಸಹಕರಿಸಿದರು. ಮನ ಮಿಡಿಯುವ  ಮತ್ತು ಗೌರವಪೂರ್ಣ ಅಂತ್ಯ ಸಂಸ್ಕಾರ ನೆರವೇರಿತು.  ಝಾವೇರಿ ತೋರಿಸಿದ ಔದಾರ್ಯ ಎಲ್ಲರ ಬಾಯಲ್ಲೂ ಹರಿದಾಡಿತು.
                             

ಅಲ್ಲಿ ಬಂದಿದ್ದ ಒಬ್ಬ ಗಣ್ಯರು ಝಾವೆರಿಯವರ  ಔದಾರ್ಯವನ್ನು ಮೆಚ್ಚುತ್ತ ಇದು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಕೇಳಿದರು. ಆಗ ಝಾವೆರಿ ಕೊಟ್ಟ ಉತ್ತರ ಮಾತ್ರ ಅತ್ಯಂತ ಮನೋಜ್ಞವಾಗಿತ್ತು.
" ಗಂಗಾದತ್ತ ಒಬ್ಬ ಆದರ್ಶವ್ಯಕ್ತಿ.  ಆತನು ತನ್ನ ಜೀವನ ಆರಂಭಿಸಿದ್ದು ಈ ಕಾರಿನಲ್ಲೇ, ಅಂತಿಮ ಯಾತ್ರೆಯು ಈ ಕಾರಿನಲ್ಲೇ ಆಗ ಬೇಕೆಂದು  ನನಗನಿಸಿತು.  ಇಷ್ಟು ದಿನ ನನನ್ನು ಕರೆದುಕೊಂಡು ಹೋಗುತ್ತಿದ್ದ ಗಂಗಾದತ್ತನನ್ನು ಈ ದಿನವಾದರೂ ನಾನು  ಆತನನ್ನು ಕರೆದು ಕೊಂಡು ಹೋಗಬೇಕೆಂದು ನನಗೆ ಅನಿಸಿತು .  ಪ್ರತಿಯೊಬ್ಬರೂ ಹಣ ಸಂಪಾದನೆ ಮಾಡುತ್ತಾರೆ, ಇದರಲ್ಲಿ ಯಾವ ದೊಡ್ದಸ್ತಿಕೆಯು ಇಲ್ಲ. ಆದರೆ, ಈ ಹಣ ಸಂಪಾದನೆ ಮಾಡಲು ಸಹಕರಿಸಿದ ಪ್ರತಿಯೊಬ್ಬರನ್ನು ಕೃತಜ್ಞತೆಯಿಂದ ಸ್ಮರಿಸುವುದೇ ದೊಡ್ಡಸ್ತಿಕೆ.  ನಾನು ನನ್ನ ಗಂಗಾದತ್ತನಿಗೆ ಸಲ್ಲಿಸಬಹುದಾದ ಅಂತಿಮ ನಮನ ಮತ್ತು ಗೌರವ ಎಂದರೆ ಇದೆ.  ಇದರಲ್ಲಿ ನನ್ನ ದೊಡ್ಡತನವೇನೂ ಇಲ್ಲ " ಎಂದು ವಿನಯದಿಂದ ಹೇಳಿದರು.

ನಿಜವಾದ ದೊಡ್ಡತನ ಮತ್ತು ಶ್ರೀಮಂತಿಕೆ, ಮಾನವೀಯ ಮೌಲ್ಯಗಳಲ್ಲಿ ಇದೆಯೇ ಹೊರತು ಬಂಗಲೆ, ಕಾರು, ಅಂತಸ್ತು, ಅಧಿಕಾರದಲ್ಲಿ ಖಂಡಿತ ಇಲ್ಲ ಎಂಬ ಸತ್ಯವನ್ನು ಸ್ವತಹ ಮಾಡಿ ತೋರಿಸಿದ ಝಾವೆರಿ ಉನ್ನತ ಸ್ಥಾನದಲ್ಲಿ ನಿಂತ ಆದರ್ಶ ವ್ಯಕ್ತಿ ಯಾಗಿದ್ದಾರೆ.

( ಪುಣೆಯಿಂದ ನನ್ನ ಮಿತ್ರರು  ಈ ವಿಚಾರ ತಿಳಿಸಿದನ್ನು ಓದುಗರ ಗಮನಕ್ಕೆ ತಂದಿದ್ದೇನೆ.)

6 comments:

  1. ಋಣವನ್ನು ಯಾವ ಕಾಲಕ್ಕೂ ಯಾರು ಯಾರಿಗೂ ತೀರಿಸಲಾಗದು. ಕೃತಜ್ಞತೆ ಸಲ್ಲಿಸಿ ಹಗುರಾಗಿಸಿಕೊಳ್ಳಬಹುದಷ್ಟೇ.

    "ಒಬ್ಬ ವ್ಯಕ್ತಿಯು ತನ್ನ ಋಣಭಾರವನ್ನು ಇದಕ್ಕಿಂತಲೂ ಹಗುರಾಗಿಸಿಕೊಳ್ಳಲು ಸಾಧ್ಯವೇ!"

    (ಘಟನೆಯ ಸ್ಮರಣೆ ತುಂಬ ಚೆನ್ನಾಗಿದೆ ಮಾವ.)

    ReplyDelete
    Replies
    1. ಆತ್ಮೀಯ ರಜನೀಶ,
      ಸಿಕ್ಕ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಸರಿಯಾದ ವಿವೇಕ ಭಗವಂತ ದಯಪಾಲಿಸಬೇಕು. ಅದಕ್ಕೆ ನಮ್ಮ ಸಂಸ್ಕಾರ ಸರಿಯಾಗಿರಬೇಕು. "ಒಬ್ಬ ವ್ಯಕ್ತಿಯು ತನ್ನ ಋಣಭಾರವನ್ನು ಇದಕ್ಕಿಂತಲೂ ಹಗುರಾಗಿಸಿಕೊಳ್ಳಲು ಸಾಧ್ಯವೇ!" ತುಂಬಾ ಒಳ್ಳೆಯ ಮಾತು.
      ನಿನ್ನ ಸದಭಿಲಾಷೆಗೆ ನಾನು ಕೃತಜ್ಞ.

      Delete
  2. ಸಂಸ್ಕಾರ ಮನದಲ್ಲಿದ್ದರೆ..ಒಳ್ಳೆಯ ವಿಚಾರಗಳು ಸಂಸ್ಕರಣವಾಗುತ್ತಲೇ ಇನ್ನಷ್ಟು ಹೊಳಪು ಬರುತ್ತದೆ...ಎತ್ತರವಾದ ಬೆಟ್ಟವನ್ನು ಹತ್ತಿದರೂ ಕೂಡ ನಾವು ಇನ್ನೊಂದರ ಆಧಾರದ ಮೇಲೆ ನಿಂತಿರುವುದುಅಷ್ಟೇ ನಮಗೆ ಮನವರಿಕೆಯಾಗಬೇಕು..ಮೆಟ್ಟಿ ನಿಂತಿದ್ದೇನೆ ಅನ್ನುವ ಅಹಂ ಅಲ್ಲ..ಈ ಸುಂದರವಾಗಿ ಬಿತ್ತರಿಸುತ್ತದೆ ನಿಮ್ಮ ಲೇಖನ...ಧನ್ಯವಾದಗಳು ಚಿಕ್ಕಪ್ಪ..

    ReplyDelete
    Replies
    1. ಆತ್ಮೀಯ ಶ್ರೀಕಾಂತ,
      ಮೆಟ್ಟಿ ನಿಂತಿದ್ದೇವೆ ಎನ್ನುವ ಮಾತು ಅಹಂಕಾರ . ನಿಜ. ನಮ್ಮ ಅಹಂಕಾರವೇ ನಮ್ಮನ್ನು ಸುಡುತ್ತದೆ. ಆದರೆ ಅಹಂಕಾರದ ಬದಲಿಗೆ ವಾಸ್ತವವನ್ನು ಅರಿತು ಮುನ್ನೆಡೆದರೆ ನಮ್ಮ ನಿಜ ಸ್ತಿತಿ ತನಗೆತಾನೆ ತಿಳಿಯುತ್ತದೆ. ಉತ್ತಮ ವಿಚಾರಗಳು ಸಂಸ್ಕಾರವಾದಂತೆ ಅರಿವಾಗುತ್ತ ಹೋಗುತ್ತದೆ. ನಿನ್ನ ವಿಚಾರಪೂರ್ಣ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete
  3. ಜೀವನದಲ್ಲಿ ಇಂತಹ ಆದರ್ಶಗಳನ್ನು ಅಳವಡಿಸಿಕೊಂದವನೇ ಧನ್ಯ,... ತುಂಬಾ ಒಳ್ಳೆಯ ವಿಚಾರ... ಹಂಚಿದಕ್ಕೆ ಧನ್ಯವಾದಗಳು.....

    ReplyDelete
    Replies
    1. ನಿಜ ವಿನ್ನು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಇರುವನ್ನು ಧನ್ಯನಾಗಿಸಿ ಕೊಳ್ಳುವ ಪರಿ ಎಷ್ಟು ಜನರಿಗೆ ಲಭ್ಯ? ನಿನ್ನ ಯೋಚನೆಗೆ ಧನ್ಯವಾದಗಳು.

      Delete