March 29, 2019

ಪ್ರಾರ್ಥನೆ
ಪ್ರಾರ್ಥನೆ ಎಂದರೆ ನಿಜಕ್ಕೂ ಏನು?
" ನಾವು ಯಾವ ಮೂಲದಿಂದ ಬಂದಿದ್ದೇವೆಯೋ ಅದೇ ಮೂಲವನ್ನು ನಮ್ಮೊಳಗೇ ಮೌನದಲ್ಲಿ ಹುಡುಕುವ ಪ್ರಕ್ರಿಯೆಯೇ ಪ್ರಾರ್ಥನೆ " ಎನ್ನುತ್ತಾರೆ ಭಗವಾನ ರಮಣ ಮಹರ್ಷಿಗಳು.
" ಅತ್ಯುತ್ತಮವಾದ ಪ್ರಾರ್ಥನೆ ಎಂದರೆ, ದೇವರ ಇಚ್ಛೆಗೆ ಸಂಪೂರ್ಣವಾಗಿ ಶರಣಾಗುವುದು." ಎನ್ನುತ್ತಾರೆ ಸ್ವಾಮೀ ಶಿವಾನಂದರು.
" ಪ್ರಾರ್ಥನೆಯ ಸಾಲುಗಳಲ್ಲಿ ಪದಗಳ ನಡುವಿನ ಮೌನದ ಅಂತರಗಳಲ್ಲೇ ನಿಜವಾದ ಪ್ರಾರ್ಥನೆ ಇರುತ್ತದೆ." ಎನ್ನುತ್ತಾರೆ ಖಲೀಲ್ ಗಿಬ್ರಾನ್.
" ಮನುಷ್ಯರು ತಮ್ಮ ತಮ್ಮ ಸಣ್ಣ ಇಚ್ಛೆಗಳನ್ನು ಪರಮಾತ್ಮನ ಅನಂತವಾದ ಇಚ್ಚೆಯಲ್ಲಿ ಐಕ್ಯವಾಗಿಸುವ ಪ್ರಕ್ರಿಯೆಯೇ ಪ್ರಾರ್ಥನೆ." ಎನ್ನುತ್ತಾರೆ ಸ್ವಾಮೀ ವಿವೇಕಾನಂದರು.
ಹೀಗೆ ಪ್ರಾಜ್ಞರು ಅನೇಕ ರೀತಿಯಲ್ಲಿ ಪ್ರಾರ್ಥನೆಯನ್ನು ವಿಶ್ಲೇಷಿಸಿದರೂ ಗುರಿ ಒಂದೇ! ನಮ್ಮನ್ನು ನಾವು ಹೊರಗಡೆಯ ಜಡ ಜೀವನ ಜಗತ್ತಿನಿಂದ ಕಳಚಿಕೊಂಡು, ಕ್ಷಣಕಾಲವಾದರೂ ನಮ್ಮೊಳಗೇ ನಾವು ನೆಲೆ ನಿಲ್ಲಲು ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸುವ ಮನೋವೇದಿಕೆಯನ್ನೇ ಪ್ರಾರ್ಥನೆ ಅಥವಾ ಧ್ಯಾನ ಎನ್ನುತ್ತಾರೆ. ಧ್ಯಾನ ಅಥವಾ ಪ್ರಾರ್ಥನೆ ಮನುಷ್ಯನ ಆಂತರ್ಯದಲ್ಲಿ ಇರುವ ಅಪಾರ ಶಕ್ತಿಯನ್ನು ಉಜ್ಜೀವನಗೊಳಿಸುತ್ತದೆ. ಇದೊಂದು ರೀತಿಯಲ್ಲಿ ನಮ್ಮೊಳಗಿನ ಬ್ಯಾಟರಿ ಚಾರ್ಜ್ ಮಾಡಿದಂತೆ ಆಗುತ್ತದೆ. ಅಂತರ್ಮುಖವಾಗಿ ನಮ್ಮೊಳಗಿನ ಶಾಂತಿಯ ಶಕ್ತಿಯನ್ನು ನಾವು ಮರಳಿ ಪಡೆಯುವ ಒಂದು ದಿವ್ಯವಾದ ಸಾಧನೆಯೇ ಧ್ಯಾನ. ಪ್ರಾರ್ಥನೆಯು ಯಾವಾಗಲೂ ವೈಯುಕ್ತಿಕವೇ ಆಗಿರುತ್ತದೆ. ಶ್ರದ್ಧೆ ಮತ್ತು ನಂಬಿಕೆಯಿಂದ ಸಾಧಿಸಿ ಪಡೆಯುವಂತಹ ಜಾಗೃತ ಸ್ಥಿತಿ. ಶ್ರದ್ಧೆ ಎಂದರೆ ಕೇವಲ ದೃಢವಾದ ನಂಬಿಕೆ ಮಾತ್ರವಲ್ಲ, ಬದಲಿಗೆ ಶಕ್ತಿ, ವಿಶ್ವಾಸ, ಉತ್ಸಾಹ, ಉಲ್ಲಾಸ, ದೃಢತೆ, ಧೃತಿ, ಸ್ಮೃತಿ ಹಾಗೂ ಜ್ಞಾನಗಳನ್ನು ನಮ್ಮ ಅಂತರಂಗದಿಂದ ಉದ್ದೀಪನೆಗೊಳಿಸಿ ಊರ್ಧ್ವಮೂಲವಾಗಿ ಚಿಮ್ಮಿಸುವ ಮೂಲಗುಣವೇ ಈ ಶ್ರದ್ಧೆ. ಮನೋಬಲವನ್ನು ವೃದ್ಧಿಸುತ್ತಾ ಆತ್ಮನಿರೀಕ್ಷಣೆ ಹಾಗು ವಿವೇಕಗಳನ್ನು ಸಂಪಾದನೆ ಮಾಡುವಲ್ಲಿ ಪ್ರಾರ್ಥನೆಯು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ.
" ಶ್ರದ್ಧಾವಾನ್ ಲಭತೇ ಜ್ಞಾನಂ " ಎನ್ನುತ್ತದೆ ಗೀತೋಕ್ತಿ. ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆಯಿಂದ ಎಲ್ಲವೂ ಸಾಧ್ಯವಾಗುತ್ತದೆ. " ಯಾವ ನಿನ್ನ ಪ್ರಾರ್ಥನೆಯು ವ್ಯರ್ಥವಲ್ಲ. ನಿನ್ನ ಎಲ್ಲಾ ಪ್ರಾರ್ಥನೆಯು ಸರಿಯಾದ ಕಾಲಕ್ಕೆ ಉತ್ತರಿಸಲ್ಪಡುತ್ತದೆ " ಎನ್ನುತ್ತದೆ ಬೈಬಲ್. ಧ್ಯಾನದ ಮೂಲಕ ಮಾಡುವ ಪ್ರಾರ್ಥನೆಯ ಅಭ್ಯಾಸವನ್ನು ನಮ್ಮ ಋಷಿಮುನಿಗಳು ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದು ಪ್ರಾರ್ಥನೆಯ ಮಹತ್ವವನ್ನು ಈ ಜಗತ್ತಿಗೆ ಸಾರಿದ್ದಾರೆ. ನಾವು ದಿನನಿತ್ಯದಲ್ಲಿ ಭಗವಂತನ ಪ್ರಾರ್ಥನೆಯನ್ನು ನಿಯಮಿತವಾಗಿ ಮಾಡುವ ಅಭ್ಯಾಸವನ್ನು ರೂಡಿಸಿಕೊಂಡಾಗ , ತನ್ನೊಳಗೆ ತಾನು ಒಂದು ರೀತಿಯ ಅಪೂರ್ವವಾದ ಶಾಂತಿಯನ್ನು ಅನುಭವಿಸುತ್ತಾನೆ. ಆಗ ಸಾಧಕನು ಯಾವ ಆತಂಕ, ಆವೇಶ, ಆತುರ , ರಾಗ ದ್ವೇಷಗಳಿಗೆ ಮನಸ್ಸು ಕೊಡದೆ ನಿರ್ಮಲವಾಗಿ, ನಿರಾತಂಕವಾಗಿ ಬದುಕುತ್ತಾನೆ.
ದೃಢ ನಂಬಿಕೆ ಮತ್ತು ವಿಶ್ವಾಸ
ಡಾ . ಬೆನ್ಸನ್, ಬಾಸ್ಟನ್ ನಗರದ ಪ್ರಖ್ಯಾತ ವೈದ್ಯರು. ತಮ್ಮ ನಲವತ್ತು ವರ್ಷದ ಸಂಶೋಧನೆಯ ಸಾರಾಂಶವನ್ನು ೨೬ ನೇ ಜೂನ್ ೧೯೭೯ ರ " ದಿ ಹಿಂದೂ " ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಡಾಕ್ಟರ್ ಗಳ ವ್ಯಕ್ತಿತ್ವ, ಅವರು ನೀಡುವ ಸಲಹೆ ಸೂಚನೆಗಳ ಪ್ರಭಾವ, ರೋಗಿಗಳು ಡಾಕ್ಟರ್ ಗಳಲ್ಲಿ ಇರಿಸುವ ವಿಶ್ವಾಸ, ಯಾವ ಔಷಧೀಯ ದ್ರವ್ಯ ಗುಣವಿಲ್ಲದ ಔಷಧಿಗಳನ್ನೂ ಸೇವಿಸಿಯೂ " ಈ ಮಾತ್ರೆ ಬಹಳ ಒಳ್ಳೆಯ ಗುಣ ಹೊಂದಿದೆ. ಒಳ್ಳೆ ಕೆಲಸ ಮಾಡುತ್ತದೆ." ಎಂದು ನಂಬಿ ಎದೆನೋವು, ಹೃದಯರೋಗಗಳಂತಹ ಖಾಯಿಲೆಯಿಂದ ಪಾರಾದ ಸತ್ಯ ಘಟನೆಗಳ ಬಗ್ಗೆ ಡಾಕ್ಟರ್ ವಿವರಿಸುತ್ತಾರೆ. ಇಂತಹ ಅನೇಕ ಘಟನೆಗಳಲ್ಲಿ ಇದೊಂದು.
ದೆಹಲಿ ಸಮೀಪದ ಒಂದು ಹಳ್ಳಿಯಲ್ಲಿ ಹೊಲದ ಕೆಲಸಗಾರನಾಗಿ ದುಡಿಯುತ್ತಿದ್ದ ಒಬ್ಬಾತ ಆಸ್ತಮಾ ರೋಗದಿಂದ ನರಳುತ್ತಿದ್ದ. ರೋಗ ಉಲ್ಬಣಿಸಿದಾಗ ನಗರಕ್ಕೆ ಹೋಗಿ ಡಾಕ್ಟರ್ ಬಳಿ ತನ್ನ ಸಮಸ್ಯೆ ಹೇಳಿಕೊಂಡು ಔಷಧ ನೀಡುವಂತೆ ಬೇಡಿದ. ಈತನ ಪರಿಸ್ಥಿಯನ್ನು ನೋಡಿದ ಡಾಕ್ಟರ್ ಸಂಯಮದಿಂದ ಪರೀಕ್ಷಿಸಿ, ತಮ್ಮ ಕ್ಲಿನಿಕ್ ಚೀಟಿಯಲ್ಲಿ ಔಷಧವನ್ನು ಬರೆದು " ಈ ಚೀಟಿಯಲ್ಲಿರುವ ಔಷಧವನ್ನು ಹದಿನಾಲ್ಕು ಭಾಗವಾಗಿ ಮಾಡಿ ಬೆಳಿಗ್ಗೆ ಸಂಜೆ ಬಿಡದಂತೆ ಸೇವನೆ ಮಾಡು. ಒಂದು ವಾರ ಕಳೆದುಕೊಂಡು ಬಾ. ನಿನ್ನ ಆರೋಗ್ಯ ಖಂಡಿತಾ ಸುಧಾರಣೆ ಆಗಿರುತ್ತದೆ. " ಎಂದು ವಿಶ್ವಾಸ ತುಂಬಿ ಕಳುಹಿಸಿದರು. ಆತ ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ, ಒಂದು ವಾರದ ನಂತರ ಡಾಕ್ಟರ್ ಬಳಿಗೆ ಬಂದು ಸಂತಸದಿಂದ " ನೀವು ಕೊಟ್ಟ ಚೀಟಿ ಔಷಧಿ ರಾಮಬಾಣದಂತೆ ಕೆಲಸಮಾಡಿದೆ. " ಎಂದ. ಡಾಕ್ಟರ್ ಸಂತೋಷದಿಂದ " ಹೌದೇ! ಆ ಚೀಟಿಕೊಡು ನೋಡೋಣ. " ಎಂದರು. ಆದರೆ, ಅವರಿಗೊಂದು ಆಶ್ಚರ್ಯ ಕಾಡಿತ್ತು. ಆ ರೋಗಿಯು ಡಾಕ್ಟರ್ ಕೊಟ್ಟ ಆ ಚೀಟಿಯನ್ನೇ ಹದಿನಾಲ್ಕು ಸಮಭಾಗ ಮಾಡಿ ದಿನಕ್ಕೆ ಎರಡು ಬಾರಿಯಂತೆ ಸೇವಿಸಿಬಿಟ್ಟಿದ್ದ. ಡಾಕ್ಟರ್ ಕ್ಷಣಕಾಲ ಚಕಿತರಾಗಿ ಪರೀಕ್ಷೆಗೆ ಮುಂದಾಗಿ , ವಿವರವಾಗಿ ಪರೀಕ್ಷಿಸಿದರು. ಆತನ ರೋಗ ತಕ್ಕಮಟ್ಟಿಗೆ ಗುಣವೂ ಆಗಿತ್ತು. ಆ ಡಾಕ್ಟರ್ ಕ್ಷಣಕಾಲ ಚಿಂತಿಸಿ " ಈಗ ನೀನು ಗುಣಮುಖನಾಗಿದ್ದೀಯ, ಆಹಾರದಲ್ಲಿ ಕ್ರಮವಾಗಿರು " ಎಂದು ಹೇಳಿ ಕಳುಹಿಸಿದರು.
" ರೋಗಿ ಇರಿಸುವ ನಂಬಿಕೆಗೆ ಆಘಾತ ಉಂಟುಮಾಡದೇ ಇದ್ದರೆ ಸಾಕು " ಎನ್ನುವುದು ಡಾಕ್ಟರ್ ಅಭಿಪ್ರಾಯವಾಗಿದೆ. ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಕೆಲಸಮಾಡಿದ ಶಕ್ತಿ ಅಥವಾ ನಿಯಮ ಎಂದರೆ ದೃಢ ನಂಬಿಕೆ ಮತ್ತು ವಿಶ್ವಾಸ. ಈ ದೃಢವಾದ ನಂಬಿಕೆಯು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಉತ್ಪಾದನೆ ಮಾಡುತ್ತದೆ ಎಂದು ಡಾ. ಬೆನ್ಸನ್ ಖಚಿತವಾಗಿ ಅಭಿಪ್ರಾಯ ಪಡುತ್ತಾರೆ.
ನಂಬಿಕೆ
ನಂಬಿಕೆಯೆನ್ನುವುದು ಅತಿ ಅದ್ಭುತವಾದ ವಿಚಾರ. " ನಂಬಿ ಕೆಟ್ಟವರು ಇಲ್ಲವೋ. ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ" ಎನ್ನುತ್ತಾರೆ ಪುರಂದರ ದಾಸರು. ನಂಬಿಕೆಯೆನ್ನುವುದು ಒಂದು ಬಗೆಯ ದಿವ್ಯವಾದ ಔಷಧಿ. ನಂಬಿದವನ ಬಾಳು ಸುಸೂತ್ರ. ನಂಬದೇ ಬದುಕುವುವವನ ಬಾಳು ಘೋರ ಎಂದರೆ ತಪ್ಪೇನೂ ಇಲ್ಲ. ಏಕೆಂದರೆ, ನಂಬದೆ ಹೋದವರು ಜೀವನದ ಪ್ರತಿಕ್ಷಣವೂ ಒಂದಲ್ಲಾ ಒಂದು ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಕಷ್ಟ ನಷ್ಟಗಳಿಗೆ ಕೊರಗುತ್ತಲೇ ಇರುತ್ತಾರೆ. ನಂಬಿದವನಿಗೆ ಕಷ್ಟ ನಷ್ಟ ಇಲ್ಲವೆಂದೇನೂ ಅಲ್ಲ, ಆದರೆ ಕಷ್ಟ ನಷ್ಟಗಳು ಹೆಚ್ಚು ಬಾಧಿಸುವುದಿಲ್ಲ.
ನಾವೊಂದು ವಾಹನದಲ್ಲಿ ಹೋಗುವಾಗ ಆ ಚಾಲಕನ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಆ ಚಾಲಕ ನಮಗೆ ಅಪರಿಚಿತನೆ ಆದರೂ ತಾತ್ಕಾಲಿಕವಾಗಿಯಾದರೂ ನಂಬಬೇಕಾಗುತ್ತದೆ. ಎಲ್ಲೋ ಇದ್ದ ಹೆಣ್ಣಿಗೆ ಎಲ್ಲೋ ಇರುವ ಗಂಡಿಗೆ ಮದುವೆ. ಈ ದಂಪತಿಗಳು ಬಂಧನದಲ್ಲಿ ಬಂಧಿಯಾಗುವಾಗ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಬದುಕಬೇಕಾಗುತ್ತದೆ. ಇಲ್ಲಿ ಕೂಡಾ ಈ ದಂಪತಿಗಳ ನಂಬಿಕೆಯೇ ಮುಖ್ಯವಾಗುತ್ತದೆ. ನಾವು ತಿನ್ನುವ ಆಹಾರವನ್ನು ಯಾವುದೇ ಭಯವಿಲ್ಲದೆ ಸೇವಿಸುವುದು ಆರೋಗ್ಯಪೂರ್ಣವಾಗಬೇಕಾದರೆ ನಂಬಿಕೆ ಮುಖ್ಯವಾಗುತ್ತದೆ. ದಾರಿಯಲ್ಲಿ ನಡೆಯಬೇಕಾದರೂ ಸುರಕ್ಷಿತವಾಗಿ ಸೇರಬೇಕಾದ ಸ್ಥಳವನ್ನು ತಲಪುತ್ತೇನೆ ಎಂಬ ಭರವಸೆ ಮತ್ತು ನಂಬಿಕೆಯಿಂದಲೇ ನಡೆಯುತ್ತೇವೆ. ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಿಗೆ ತೋರಣಗಳಿಂದ ಸಿಂಗರಿಸುವುದರಿಂದ ಒಳ್ಳೆಯ ಭಾವನೆಗಳು ಜಾಗೃತವಾಗುತ್ತವೆಂದು ಭರವಸೆಯಿಂದ ನಂಬುತ್ತೇವೆ. ನಮ್ಮೆದುರು ಹಿರಿಯರು ಕಂಡಾಗ ನಾವು ಶಿರಬಾಗಿ ನಮಸ್ಕರಿಸುವುದರಿಂದ ನಮಗೆ ಒಳ್ಳೆಯ ಆಶೀರ್ವಾದ ದೊರೆತು ನಮಗೆ ಒಳ್ಳೆಯದಾಗುತ್ತೆಂದು ನಂಬುತೇವೆ. ನಮ್ಮ ಕಾಲು ಸೊಟ್ಟಗಾಗಿ, ಶಕ್ತಿ ಕಳೆದುಕೊಂಡು , ಕಣ್ಣು ಮಂಜಾಗಿದ್ದರೂ ನಮ್ಮ ಕೈಯಲ್ಲಿರುವ ಊರುಗೋಲಿನ ಮೇಲೆ ನಾವು ಭರವಸೆ ಇಡುತ್ತೇವೆ, ನಂಬುತ್ತೇವೆ.
ಭಗವಂತನ ನಾಮಸ್ಮರಣೆಯಲ್ಲಿ ಭರವಸೆ ಇಡುತ್ತಾ ಪ್ರತಿಕ್ಷಣ ಭಗವಂತನನ್ನು ನೆನೆಯುತ್ತಾ ಇರುವಾಗ ನಮ್ಮೆಲ್ಲಾ ಕಷ್ಟ ನಿಷ್ಟೂರಗಳು ದೂರವಾಗುವುದಿಲ್ಲವೇ? ಎಂದು ನಂಬುತ್ತೇವೆ. ನಮಗೆ ನಂಬಿಕೆ ಇಡಲು ಒಂದಲ್ಲ ಎರಡಲ್ಲ ಸಾವಿರಾರು ದಾರಿಗಳಿವೆ. ಈ ಎಲ್ಲಾ ದಾರಿಗಳಲ್ಲಿ ಸಂಪೂರ್ಣ ವಿಶ್ವಾಸದಿಂದ, ಶರಣಾಗತಿಯ ಭಾವದಲ್ಲಿ ಮುನ್ನೆಡೆದಾಗ ನಮ್ಮ ನಂಬಿಕೆ ಸುಳ್ಳಾಗುವುದೇ ಇಲ್ಲ. ನಂಬಿದವರಿಗೆ ಒಂದೇ ದಾರಿ, ನಂಬದೆ ಇರುವವರಿಗೆ ಸಾವಿರಾರು ದಾರಿ ಕಾಣುತ್ತವೆ. ನಂಬಿಕೆ ಇರುವವರಿಗೆ ಜೀವನ ಸುಖಕರ, ನಂಬಿಕೆ ಇಲ್ಲದವನಿಗೆ ಪ್ರತಿಕ್ಷಣವೂ ಆತಂಕ.
-- 
ನಿತ್ಯ ಮುಕ್ತರು
ಈ ಬದುಕೇ ಒಂದು ನಾಟಕ ರಂಗ. ಇದರಲ್ಲಿ ನಾವೇ ಪಾತ್ರಧಾರಿಗಳು. ನಮ್ಮ ಸ್ವರೂಪ, ಬಣ್ಣ, ಮೇಕಪ್ ,ಉಡಿಗೆ ಮತ್ತು ತೊಡಿಗೆಗಳೆಲ್ಲವೂ ಸಂಧರ್ಭ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ನಾವು ಸಿರಿತನದಲ್ಲಿ ಒಂದು ಸ್ವರೂಪ, ಬಡತನದಲ್ಲಿ ಮತ್ತೊಂದು ರೂಪ, ಸೋತಾಗ ಒಂದು ವೇಷ, ಗೆದ್ದಾಗ ಮತ್ತೊಂದು ವೇಷ. ಹೀಗೆ ನಮ್ಮ ಸ್ವರೂಪ, ವೇಷಗಳನ್ನು ಬದಲಿಸುತ್ತಲೇ ಇರುತ್ತೇವೆ. ಆದರೆ, ಕೆಲವರು ಮಾತ್ರ ನಿತ್ಯ ಜೀವನದಲ್ಲಿ ಬರುವ ಸುಖ - ದುಃಖ, ಸಿರಿತನ - ಬಡತನ, ಸೋಲು - ಗೆಲುವುಗಳೆಲ್ಲವೂ ಇದ್ದೇ ಇರುತ್ತದೆ ಎಂದು ಭಾವಿಸುತ್ತಾ ಇಂತಹ ಸಮಯದಲ್ಲಿ ಏನೇ ಬಂದರೂ ಸ್ವಲ್ಪವೂ ವಿಚಲಿತರಾಗದೆ ತಮ್ಮ ಮನಸ್ಸನ್ನು ಏಕರೂಪದಲ್ಲಿ ಇಟ್ಟುಕೊಂಡಿರುತ್ತಾರೆ. ಶ್ರೀ ಕೃಷ್ಣ ಹೇಳಿದಂತೆ " ಸುಖ ದುಃಖ ಸಮೇಕೃತ್ವಾ ಲಾಭಾ ಲಾಭೌ ಜಯಾ ಜಯಃ " ಎನ್ನುವಂತೆ ಇರುತ್ತಾರೆ. ಇಂತಹವರನ್ನೇ ಮಹಾತ್ಮರು, ಮುಕ್ತಾತ್ಮರು ಎನ್ನುವುದು.
ಈ ದೇಹದ ದೃಷ್ಟಿಯಿಂದ ನಾವು ಸ್ತ್ರೀ - ಪುರುಷ, ಬಡವ - ಬಲ್ಲಿದ, ಸಶಕ್ತ - ಅಶಕ್ತ, ಹೀಗೆಲ್ಲಾ ವಿಂಗಡಿಸುತ್ತೇವೆ. ನಾವು ಎಲ್ಲರಲ್ಲೂ ಇಲ್ಲ , ಸಲ್ಲದ ಬೇಧ ಎಣಿಸುತ್ತೇವೆ. ಜಾತಿ ಪಂಗಡಗಳಾಗಿ ವಿಂಗಡಿಸುತ್ತೇವೆ. ಇದರ ಫಲವಾಗಿ ನಾವು ಸಮಾಜದಲ್ಲಿ ದುಃಖವನ್ನು ತಂದುಕೊಳ್ಳುತ್ತೇವೆ. ಜೀವನ ಪೂರ್ತಿ ಮಾನಸಿಕ ನೆಮ್ಮದಿ ಇಲ್ಲವೆಂದು, ಶಾಂತಿ ಬೇಕೆಂದು ಗೋಳಾಡುತ್ತೇವೆ. ಆದರೆ, ಪರಮಾತ್ಮನ ದೃಷ್ಟಿಯಿಂದ ನಾವೆಲ್ಲಾ ಒಂದೇ. ಇದನ್ನು ಅರಿಯದೆ ಸುಮ್ಮನೆ ಬಡಿದಾಡುತ್ತೇವೆ.
ದೀಪವು ಅರಮನೆಯಲ್ಲಿರಲಿ, ಗುಡಿಸಿನಲ್ಲಿ ಇರಲಿ ಅದು ಒಂದೇ ರೀತಿಯಲ್ಲಿ ಬೆಳಗುತ್ತಿರುತ್ತದೆ. ದೀಪದ ಅರಿವಿನಂತೆ ಪರಮಾತ್ಮನ ಅರಿವು ಯಾರಿಗಿದೆಯೋ, ಅವರು ಈ ಆಸೆ - ಆಮಿಷಗಳ ಸುಳಿಗೆ ಸಿಕ್ಕಿ ಬೀಳದೆ ಜೀವನವನ್ನು ಬಂದಂತೆ ಅನುಭವಿಸುತ್ತಾ ಶಾಂತಿ ಮತ್ತು ನೆಮ್ಮದಿಯಿಂದ ಬದುಕುತ್ತಾರೆ. ಇವರು ಕಷ್ಟಗಳಿಗೆ ಎದೆ ಗುಂದದೆ, ಸುಖಗಳಿಗೆ ಹಿಗ್ಗದೇ ಒಂದೇ ಸಮನೆ ಬಾಳಿ ಬದುಕುತ್ತಾರೆ. ಇಂತಹವರ ಬದುಕೇ ನಮಗೆ ಆದರ್ಶವಾಗಬೇಕು. ಇಂತಹವರ ಒಡನಾಟವೇ ನಮಗೆ ಮಾರ್ಗದರ್ಶನವಾಗಬೇಕು. ಇಂತಹವರ ಮಾತುಗಳೇ ನಿತ್ಯ ಸತ್ಸಂಗವಾಗಬೇಕು. ಇಂತಹ ಮಹಾತ್ಮರುಗಳೇ ನಿತ್ಯ ಮುಕ್ತರು.
ಸುಖ - ದುಃಖ
" ಸುಖದಿಂದ ಸುಖವು ಎಂದಿಗೂ ಸಿಗುವುದಿಲ್ಲ." ಎನ್ನುತ್ತದೆ ವ್ಯಾಸ ಭಾರತ. ಅಂದರೆ, ಈ ಜೀವನದಲ್ಲಿ ಯಾವುದೂ ಶಾಶ್ವತವೆನ್ನುವ ಸುಖವಾಗಲಿ, ದುಃಖವಾಗಲಿ ಇಲ್ಲ. ಈ ಸುಖ ದುಃಖಗಳು ಬಂದು ಹೋಗುವಂತವುಗಳು. ಇದನ್ನು ತಿಳಿಯದೆ ನಾವುಗಳು ಸುಖ ಬಂದಾಗ ಹಿರಿ ಹಿರಿ ಹಿಗ್ಗಿ, ಕಷ್ಟ ಬಂದಾಗ ಕುಗ್ಗಿ ಹೋಗುತ್ತೇವೆ. ವ್ಯಾಸ ಮಹರ್ಷಿಗಳು ಸುಖವನ್ನು ಪಡೆಯುವ ವಿಧಾನವನ್ನು ತಿಳಿಸುತ್ತಾರೆ. " ಕಷ್ಟ ಪಟ್ಟ ನಂತರ ಸಿಗುವ ಸುಖವೇ ಸುಖ, ಯಾವ ರೀತಿ ಮರಳಿನಲ್ಲಿ ಎಣ್ಣೆ ತೆಗೆಯಲು ಸಾಧ್ಯವಿಲ್ಲವೋ, ಅದೇ ರೀತಿ ಸುಖದಿಂದ ಸುಖ ಪಡೆಯಲು ಸಾಧ್ಯವಿಲ್ಲ. " ಎನ್ನುತ್ತಾರೆ.
ಸುಖ ಎನ್ನುವುದು ಯಾವುದೇ ವಸ್ತುವಿನಲ್ಲಿಲ್ಲ. ಹಾಗೇನಾದರೂ ಸುಖವು ವಸ್ತುವಿನಲ್ಲಿ ಇರುವುದಾದರೆ, ಆ ವಸ್ತುವಿನಿಂದ ಎಲ್ಲರಿಗೂ, ಎಲ್ಲ ಕಾಲಕ್ಕೂ ಸುಖ ಸಿಗಬೇಕಲ್ಲವೇ? ಒಂದು ಕಾಲಕ್ಕೆ ಸುಖ ಎನಿಸಿದ್ದು ಇನ್ನೊಂದು ಕಾಲಕ್ಕೆ ಸುಖ ಎನಿಸದೆ ಕಷ್ಟ ಎನಿಸುತ್ತದೆ. ಚಳಿಗಾಲದಲ್ಲಿ ಸಿಗುವ ಬಿಸಿನೀರಿನ ಸುಖ , ಬೇಸಿಗೆಯಲ್ಲಿ ಸಿಗದು. ಈ ಸುಖ ದುಃಖ ಎನ್ನುವುದು ಒಂದು ಮನೋಧರ್ಮ. ಮನಸ್ಸು ಸುಖವಾಗಿದ್ದರೆ, ಈ ಜಗತ್ತೇ ಸುಂದರವಾಗಿ ಕಾಣುತ್ತದೆ.
ಸುಖಕ್ಕೂ ಒಂದು ಕಾರಣವಿರುತ್ತದೆ, ಅದೇ ರೀತಿ ದುಃಖಕ್ಕೂ ಒಂದು ಕಾರಣವಿರುತ್ತದೆ. ಈ ಕಾರಣ ನಮಗೆ ಹೆಚ್ಚಿನಪಾಲು ತಿಳಿದೇ ಇರುತ್ತದೆ. ಸುಖವನ್ನು ಪಡೆದ ಕಾರಣ ಕಷ್ಟದ ಜೀವನವಾಗಿದ್ದರೆ, ದುಃಖ ಬಂದಾಗ ಮನಸಿಗೆ ಹೆಚ್ಚು ನೋವಾಗುವುದಿಲ್ಲ. ಬಿಸಿಲಿನಲ್ಲಿ ನಡೆದವನಿಗೆ ಮರದ ನೆರಳು ದೊರೆತಾಗ ಅದೇ ಅವನ ಪರಮ ಸುಖ. ಇದೆ ರೀತಿ ಪ್ರಾಮಾಣಿಕ ಬದುಕು ನಡೆಸಿದವನಿಗೆ ಸುಖ ದುಃಖ ಇವೆರಡು ಸಮಾನ ಪ್ರಕಾರದ್ದಾಗಿರುತ್ತದೆ. ಭಗವಂತನಲ್ಲಿ ನಂಬಿಕೆ, ಶ್ರದ್ಧೆ ಇರುವವನಿಗೆ ದುಃಖ ಸುಖಗಳು ಭಗವಂತನ ವರಪ್ರಸಾದವಾಗುತ್ತದೆ. ಆಗ ಸುಖ ದುಃಖವಾಗಲಿ ಸಾಧಕನನ್ನು ಬಾಧಿಸುವುದಿಲ್ಲ.