August 31, 2012

ನಕ್ಕು ಬಿಡಿ ...............4


ನಾನಿನ್ನು ಬದುಕಿದ್ದಿನಾ?
 
ರಂಗಪ್ಪ ಜೇವನದಲ್ಲಿ ಜಿಗುಪ್ಸೆಯಾಗಿ ದೊಡ್ಡ ಕಟ್ಟಡದ 5 ನೆ ಅಂತಸ್ತಿನಿಂದ ಕೆಳಗೆ ಹಾರಿಬಿಟ್ಟ. ಮರುದಿನ ಆಸ್ಪತ್ರೆಯಲ್ಲಿ ಎಚ್ಚರವಾದಾಗ ಆಶ್ಚರ್ಯದಿಂದ ದಾದಿಯನ್ನು ರಂಗಪ್ಪ ಕೇಳಿದ " ನಾನಿನ್ನು ಬದುಕಿದ್ದೇನೆಯೇ? "
" ನೀನು ಬದುಕಿದ್ದಿಯಪ್ಪಾ! ಹೆಚ್ಚು ತೊಂದರೆ ಏನೂ ಆಗಿಲ್ಲ.  ಆದರೆ ಕೆಳಗಿದ್ದ ನಾಲ್ಕು ಜನರ ಮೇಲೆ ನೀನು ಬಿದ್ದ ಕಾರಣ, ನಾಲ್ಕೂ ಜನರು ಸ್ತಳದಲ್ಲೇ ಮೃತ ಪಟ್ಟಿದ್ದಾರೆ!" 

ಈಗ ಸತ್ಯಾನೆ ಹೇಳ್ತೀನಿ  
" ಮದುವೆಗೆ ಮುಂಚೆ ನನ್ನನ್ನ ರಂಭೆ, ಊರ್ವಶಿ, ಮೇನಕೆ ಎಂತೆಲ್ಲಹೊಗಳಿ ಅಟ್ಟಕ್ಕೆ ಏರಿಸುತ್ತಾ ಇದ್ರಿ.  ಈಗ ಆ ಮಾತೆಲ್ಲ   ಎಲ್ಲಿ ಹೋಯ್ತು ? " ಎಂದು ಹೆಂಡತಿ ಗಂಡನ್ನ ಕೇಳಿದಳು.
" ಮದುವೆ ಆದಮೇಲೆ ಸುಳ್ಳು ಹೇಳೋದನ್ನ ಬಿಟ್ಟು ಬಿಟ್ಟಿದ್ದೇನೆ."
ನಾನು ಅಲ್ಲೂ ಇದ್ದೇರಿ !!!!!!!!!!

" ಲಂಡನ್, ಪ್ಯಾರಿಸ್, ನ್ಯೂಯಾರ್ಕ್ ,ನೋಡಿ ಬಂದ ಸರ್ದಾರ್ಜಿ ಚೆನ್ನಾಗಿ ಕೊಚ್ಚಿಕೊಳ್ಳುತ್ತಿದ್ದ.
" ಹಾಗಾದರೆ ನಿಮಗೆ ಭೋಗೋಳ ಚೆನ್ನಾಗಿ ಗೊತ್ತು ಅನಿಸುತ್ತೆ " ಎಂದ ಅವನ ಸ್ನೇಹಿತ.
" ಸುಮ್ಮನೆ ಇರ್ರಿ, ಅಲ್ಲೂ ಎರಡು ದಿನ ಇದ್ದು ಮಜಾ ಮಾಡಿ ಬಂದಿದೀನಿ ಗೊತ್ತಾ? " ಎಂದಾಗ ಸ್ನೇಹಿತ ಬೇಹೋಶ್.

ಗಣಿತದಲ್ಲೂ ವೀಕು

ಕನ್ನಡದಲ್ಲಿ ಕಡಿಮೆ ನಂಬರ್ ಪಡೆದ ಗುಂಡನಿಗೆ ನೂರು ಸಲ ಪಾಠ ಬರೆಯಲು ಹೇಳಿದರು ಮೇಷ್ಟ್ರು.  ಬರೆದದ್ದನ್ನ ಗುಂಡ ಮೇಷ್ಟರಿಗೆ ತೋರಿಸಿದ.
"  ಅಲ್ವೋ ಗುಂಡ, ನಾನು ನೂರುಸಾರಿ ಬರೆಯೋಕ್ಕೆ ಹೇಳಿದರೆ ನೀನು ನಲವತ್ತೆ ಸಾರಿ ಬರೆದ್ದಿದ್ದೀಯಲ್ಲಾ? "
"  ನಾನೇನು ಮಾಡ್ಲಿ ಸಾರ್,  ನಾನು ಗಣಿತದಲ್ಲೂ ವೀಕು!" ಎಂದ.


ನಕ್ಕು ಬಿಡಿ................5


ಸರ್ದಾರ್ಜಿಗಳು  ಯಾಕೆ ದಡ್ಡರು ?

 ಸರ್ದಾರ್ಜಿಗೆ ಒಂದು ಪ್ರಶ್ನೆಗೆ ಉತ್ತರ ಬೇಕಾಗಿತ್ತು.  ಹತ್ತಿರದ ಬೀಡಿ ಅಂಗಡಿಯವನಲ್ಲಿ ವಿಚಾರಿಸಿದ.
" ಎಲ್ಲರು ಸರ್ದಾರ್ಜಿನ ದಡ್ಡರು ಅಂತಾರೆ, ಯಾಕೆ?"
" ಹಾಗೇನಿಲ್ಲ,  ನೀವು ಕೇಳಿದ ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ ಯಾರು ನಿಮ್ಮನ್ನ ದಡ್ಡರು ಅನ್ನೋಲ್ಲ" ಎಂದ ಅಂಗಡಿಯವ.
" ಹಾಗಾದರೆ ಪ್ರಶ್ನೆ ಕೇಳು ಉತ್ತರ ಕೊಡ್ತೀನಿ." ಎಂದ ಸರ್ದಾರ್ಜಿ.
" ತುಂಬಾ ಸಿಂಪಲ್ಲು. ನಮ್ಮ ತಂದೆಗೆ ಇಬ್ಬರು ಮಕ್ಕಳು, ಒಬ್ಬ ಡೆಲ್ಲಿಲಿ ಇದಾನೆ. ಹಾಗಾದರೆ ಇನ್ನೊಬ್ಬ ಯಾರು?" ಎಂದ.
ತುಂಬಾ ಹೊತ್ತು ಯೋಚಿಸಿ  "ಗೊತ್ತಾಗಲಿಲ್ಲ " ಎಂದ.
" ನೋಡು ಅದಕ್ಕೆ ನಿಮ್ಮನ್ನ ದಡ್ಡರು ಅನ್ನೋದು, ಒಬ್ಬ ಡೆಲ್ಲಿ ನಲ್ಲಿ ಇದ್ದರೆ ಮತ್ತೊಬ್ಬ ನಾನೇ ಅಲ್ಲವೇ? " ಎಂದು ನಕ್ಕ.
ಸರ್ದಾರ್ಜಿಗೆ ಬಹಳ ಬೇಜಾರಾಯಿತು. ಪೆಚ್ಚುಮೋರೆ ಹಾಕಿ ಹೋರಟ. ದಾರಿಯಲ್ಲಿ  ಮತ್ತೊಬ್ಬ ಸರ್ದಾಜಿ ಸಿಕ್ಕ. ತಕ್ಷಣ ಮೊದಲನೇ ಸರ್ದಾರ್ಜಿಗೆ ಖುಷಿಯಾಯಿತು. ಅವನನ್ನ ನಿಲ್ಲಿಸಿ " ನಾನೊಂದು ಸಿಂಪಲ್ ಪ್ರಶ್ನೆ ಕೇಳುತ್ತಿನಿ, ಉತ್ತರ ಹೇಳುತ್ತಿಯಾ ? " ಎಂದ.  "ಆಗಲಿ " ಎಂದು ತಲೆ ಆಡಿಸಿದ
"ತುಂಬಾ ಸಿಂಪಲ್ಲು. ನಮ್ಮ ತಂದೆಗೆ ಇಬ್ಬರು ಮಕ್ಕಳು, ಒಬ್ಬ ಡೆಲ್ಲಿಲಿ ಇದಾನೆ. ಹಾಗಾದರೆ ಇನ್ನೊಬ್ಬ ಯಾರು?"  ಎಂದ
ಅವನು ತುಂಬಾ ಹೊತ್ತು ಯೋಚಿಸಿ  " ಗೊತ್ತಾಗಲಿಲ್ಲ " ಎಂದು ತಲೆ ಆಡಿಸಿದ.
" ಇಷ್ಟು ಗೊತ್ತಾಗಲಿಲ್ಲವ! ಅದಕ್ಕೆ ಸರದಾರ್ಜಿಗಳನ್ನ ದಡ್ಡರು ಅನ್ನೋದು! ಆ ಇನ್ನೊಬ್ಬ ಯಾರು ಗೊತ್ತ ?  ಅದೇ ಬೀಡಿ  ಅಂಗಡಿಯವನು."  ಎಂದು ಬೀಗಿದ.




August 28, 2012

ನಕ್ಕು ಬಿಡಿ .............3


ಊಟ ಹಾಕಿ !

" ಅಮ್ಮಾ ,  ಊಟ ಹಾಕಿ ತಾಯಿ!" ಎಂದು ಕೆಟ್ಟದಾಗಿ ಮನೆಮುಂದೆ ಬಿಕ್ಷುಕ ಅರಚಿದ.
" ಆಯ್ತು , ಅಕ್ಕಿ, ಬೆಳೆ, ತರಕಾರಿ ತಂದುಕೊಡು ಬೇಯಿಸಿ ಹಾಕ್ತೀನಿ " ಎಂದು ಅದಕ್ಕಿಂತ ಜೋರಾಗಿ ಕಿರುಚಿದಳು
 ಬಿಕ್ಷುಕ ನಾಪತ್ತೆ

ಬುದ್ಧಿ ಬರೋದು ?

ಗಂಡ ಹೆಂಡತಿ ಜಗಳ ತಾರಕಕ್ಕೆ ಏರಿತ್ತು.
" ನಾನು ಸತ್ತಮೇಲೆ ಕಣ್ರೀ ನಿಮಗೆ ಬುದ್ಧಿ  ಬರೋದು!  ಅಲ್ಲಿವರೆಗೆ ನಿಮಗೆ ಬುದ್ಧಿ ಬರೋಲ್ಲ. "  ಎಂದು ಮಡದಿ ಎಂದಿನಂತೆ ಕಿರುಚಾಡಿದಳು. 
" ನಿತ್ಯಾನು  ಇದೆ ಮಾತು ಹೇಳ್ತಾನೆ ಇದಿಯಾ." ಎಂದು ಗಂಡ ನಿರಾಶೆಯಿಂದ ಹೇಳಿದ
" ಮತ್ತಿನ್ನೇನು ಹೇಳೋದು ಹೇಳಿ? " ಎಂದು ಹೆಂಡತಿ ಕೂಗಿದಳು
" ನನಗೆ ಯಾವಾಗ ಬುದ್ಧಿ ಬರುತ್ತೆ ? ಅಂತ ಒಂದು ದಿನ ಅಥವಾ ತಾರೀಖಾದರು ಹೇಳಬಾರದೇನೆ? "  ಎಂದು ಕಾತುರನಾಗಿ ಪ್ರಶ್ನಿಸಿದ ಪತಿ ಮಹಾರಾಯ.


August 26, 2012

ನಕ್ಕುಬಿಡಿ ............2




ನಿದ್ರೆ ಮಾತ್ರೆ 

ಮೂರನೇ ಮದುವೆ ಮಾಡಿಕೊಂಡ ರಂಗಪ್ಪ ಡಾಕ್ಟರ್ ಬಳಿ ಬಂದು " ಇತ್ತೀಚಿಗೆ ಮದುವೆ ಮಾಡಿಕೊಂಡಿದ್ದೇನೆ. ಆದರೆ, ರಾತ್ರಿ ಸಮಯ ದಿಂಬಿಗೆ ತಲೆ ಕೊಟ್ಟ ಕೂಡಲೇ ನಿದ್ರೆ ಬಂದು ಬಿದುತ್ತಲ್ಲ ! ಏನು ಮಾಡಲಿ? "
ಎಲ್ಲವನ್ನು ಕೂಲಂಕುಶವಾಗಿ ಪರಿಕ್ಷೆ  ಮಾಡಿದ ನಂತರ ಕೆಲವು ಮಾತ್ರೆಗಳನ್ನು ಬರೆದು ರಂಗಪ್ಪನ ಕೈಲಿಟ್ಟರು .
" ಈ ಮಾತ್ರೆಗಳನ್ನು ಯಾವಾಗ ತೆಗೆದುಕೊಳ್ಳಬೇಕು? " ಎಂದ ರಂಗಪ್ಪ
" ಇದು ನಿಮಗಲ್ಲ.  ನಿಮ್ಮ ಹೆಂಡತಿಗೆ.  ನಿಮ್ಮ ಜೊತೆ ಅವರಿಗೂ ನಿದ್ದೆ ಬರಲೀ ಅಂತ."  ಎಂದ ವೈದ್ಯ.


ಬುಟ್ಟಿಯಲ್ಲಿ ಏನಿದೆ?

ಬುಟ್ಟಿ ಹಿಡಿದು ಬರುತ್ತಿದ್ದ ರಂಗಪ್ಪನನ್ನು  ಕಂಡ ಸರ್ದಾರ್ಜಿ " ಬುಟ್ಟಿಯಲ್ಲಿ ಏನಿದೆ?" ಎಂದ.
" ಇದರಲ್ಲಿ ಏನಿದೆ ಅಂತ ಹೇಳಿದ್ರೆ ನಿನಗೆ ಎರಡು ಸೇಬು ಕೊಡಿತೀನಿ. ಇದರಲ್ಲಿ ಎಷ್ಟು ಸೇಬಿದೆ ಅಂತ ಹೇಳಿದರೆ ಇರುವ ಎಲ್ಲ ಹನ್ನೆರಡು ನಿನಗೆ ಕೊಡ್ತೀನಿ " ಎಂದು ರಂಗ ಬಡಬಡಿಸಿದ.
" ಏನೂ ಆಧಾರವಿಲ್ಲದೆ ಹೇಗೆ ಹೇಳುವುದು? ಒಂದು ಕ್ಲೂ ನಾದರು ಕೊಟ್ಟರೆ ಹೇಳಬಹುದು " ಎಂದು ತಲೆ ಕೆರೆದುಕೊಂಡ.

ತಲೆ-ಹರಟೆ ಪ್ರಶ್ನೋತ್ತರ.



* ಮುತ್ತಿಗೂ ಮತ್ತಿಗೂ ಏನು ವ್ಯತ್ಯಾಸ?
   ಒಂದು  ಕೊಂಬು  ಅಷ್ಟೇ!
*ಬದುಕು ಜಟಕಾ ಬಂಡಿ ಎನ್ನುವ ಈ ಮಂದಿ ರಾಕೆಟ್ ವೇಗದಲ್ಲಿ ಸಾಗಿದ್ದರಲ್ಲ?
   "ಜೆಟ್ ಕಾ ಬಂಡಿ " ಎಂದು ಬದಲಾಯಿಸಿ.
* ತಾಯಿಗಿಂತ ದೇವರಿಲ್ಲ, ಹೆಂಡತಿಗಿಂತ?
   ಬಾಯಿ ಇಲ್ಲಾ .
*ಮದುವೆಯಾದ ಪ್ರತಿ ಗಂಡು ತನ್ನಲ್ಲೇ ಆಗಾಗ ಹೇಳಿಕೊಳ್ಳುವ, ಅಂದು ಕೊಳ್ಳುವ ಮಾತು ಯಾವುದು?
   ಬೇಡರ ಕಣ್ಣಪ್ಪ ಚಿತ್ರದ ಹಾಡು " ಶಿವಪ್ಪ ಕಾಯೋ ತಂದೆ !"
* ಬೆಳಕು ಸೆಕೆಂಡಿಗೆ ಒಂದು ಲಕ್ಷ ಎಂಬತ್ತಾರು ಮೈಲಿ ಚಲಿಸುತ್ತದೆ. ಈ ವೇಗ ಏನು ಹೇಳುತ್ತದೆ? 
   ಆಕಾಶ " ಅಪ್ " ನಲ್ಲಿದೆ. ಭೂಮಿ " ಡೌನ್" ನಲ್ಲಿದೆ . ಅದಕ್ಕೆ ಸ್ಪೀಡ್ ಜಾಸ್ತಿ.
* ಹೆಂಡತಿ ಮನೆಯೊಳಗಿದ್ದರೆ ನನಗದು ಕೋಟಿ  ರುಪಾಯಿ,  ಗಂಡ ಮನೆಯೊಳಗಿದ್ದರೆ?
   ಸಿಕ್ಕಿಹ ಬಡಪಾಯಿ!!
* ನೀವು ದೇವರನ್ನು ನೋಡಿದ್ದಿರಾ? 
   ನೋಡಿದ್ದೇನೆ! ಕ್ಯಾಲೆಂಡರಿನಲ್ಲಿ !!
* ಹೆಂಡತಿಯ ಮಾತನ್ನು ಕೇಳದಿದ್ದರೆ ಗಂಡನ ಕಥೆ ಏನಾಗುತ್ತದೆ? 
   ಕಥೆ?  ಉಹುಂ ! ಕಾದಂಬರಿ ಆಗುತ್ತೆ!
* ರಾಮನು ಮರದ ಕೆಳಗೆ ಇದ್ದ.  ಇದು ಯಾವ ಕಾಲವಾಗುತ್ತದೆ?
   ರಾಮಾಯಣದ ಕಾಲ!
* ಹೆಂಗಸರ ಮನಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಅಲ್ಲವೇ?
   ತುಂಬಾ ಕಷ್ಟ ಏನಿಲ್ಲ. ನೀವು ಅರ್ಥ ಮಾಡಿಕೊಳ್ಳುವಷ್ಟರಲ್ಲೇ ಆಕೆ ಮನಸನ್ನೇ ಬದಲಾಯಿಸಿರುತ್ತಾಳೆ , ಅಷ್ಟೇ!






August 25, 2012

ರಾಜಕೀಯ ಎಂದರೆ ಇದೇನೇ ??????????



           ಒಮ್ಮೆ ಅಮೆರಿಕಾದ ಅಧ್ಯಕ್ಷ ಬುಶ್ ಶಾಲೆಯೊಂದಕ್ಕೆ ಹೋಗಿ ಚಿಕ್ಕದೊಂದು ಭಾಷಣ ಮಾಡಿ ಪ್ರಶ್ನೆಗಳೆನಾದರು ಇದ್ದಲ್ಲಿ ಕೇಳಬಹುದು ಎಂದು ಹೇಳಿದ.

ಒಬ್ಬ ಹುಡುಗ ತನ್ನ ಕೈ ಎತ್ತಿದ 
ಬುಶ್ : ನಿನ್ನ ಹೆಸರೆನು?
ಜಾನ್ :  ಜಾನ್ 
ಬುಶ್ : ನಿನ್ನ ಪ್ರಶ್ನೆಗಳೇನು?
ಜಾನ್ :  1.  UNO  ಅನುಮತಿಯಿಲ್ಲದೆ ಇರಾಕಿನ ಮೇಲೆ ಅಮೆರಿಕ ಧಾಳಿ ಮಾಡಿದ್ದು ಏಕೆ?
            2.  ಒಸಾಮಾ ಎಲ್ಲಿದ್ದಾನೆ?
            3.   ಅಮೆರಿಕ ಪಾಕಿಸ್ತಾನಕ್ಕೆ ಏಕೆ ಅಷ್ಟೊಂದು ಬೆಂಬಲ ಕೊಡುತ್ತದೆ?
ಬುಶ್ :  ನೀನು ತುಂಬಾ ಬುದ್ಧಿವಂತ ವಿದ್ಯಾರ್ಥಿ ಜಾನ್ ......( ಅವಧಿ ಮುಗಿದ ಘಂಟೆ ಬಾರಿಸುತ್ತದೆ )
ಪ್ರಿಯ ವಿಧ್ಯಾರ್ಥಿಗಳೇ, ಮುಂದಿನ ಅವಧಿಯಲ್ಲಿ ನಮ್ಮ ಚರ್ಚೆ ಮುಂದುವರೆಸೋಣ.

ಮುಂದಿನ ಅವಧಿಯಲ್ಲಿ ....
ಬುಶ್ :  ಆಯಿತು ಮಕ್ಕಳೇ ನಾವು ಎಲ್ಲಿಗೋ  ನಿಲ್ಲಿಸಿದ್ದೆವು , ಈಗ ಪ್ರಾರಂಭಿಸೋಣ. ನಿಮ್ಮ ಪ್ರಶ್ನೆ ಕೇಳಿ.

ಪೀಟರ್ ಕೈ ಎತ್ತಿದ, ನಾನು ಪೀಟರ್. ನನ್ನದು 5 ಪಶ್ನೆಗಳಿವೆ.
           1. UNO  ಅನುಮತಿಯಿಲ್ಲದೆ ಇರಾಕಿನ ಮೇಲೆ ಅಮೆರಿಕ ಧಾಳಿ ಮಾಡಿದ್ದು ಏಕೆ?
           2.  ಒಸಾಮಾ ಎಲ್ಲಿದ್ದಾನೆ?
           3.   ಅಮೆರಿಕ ಪಾಕಿಸ್ತಾನಕ್ಕೆ ಏಕೆ ಅಷ್ಟೊಂದು ಬೆಂಬಲ ಕೊಡುತ್ತದೆ?
           4.  ನಿಗಧಿತ ಅವಧಿಗಿಂತ 20 ನಿಮಿಷ ಮುಂಚೆಯ ಘಂಟೆ ಹೊಡೆದದ್ದು ಯಾಕೆ?
           5.   ಜಾನ್ ಎಲ್ಲಿ?

( ಅವಧಿ ಮುಗಿದ ಘಂಟೆ ಬಾರಿಸುತ್ತದೆ )

August 24, 2012

ಸಾಧನೆ ............ಒಂದಷ್ಟು ಹರಟೆ.



ಜೀವನದಲ್ಲಿ ಪ್ರಗತಿ ಸಾಧಿಸುವುದು ಕೆಲವು ದಿನಗಳ ಪ್ರಯತ್ನಮಾತ್ರದಿಂದ ಸಾಧ್ಯವಿಲ್ಲ.    ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇರಬೇಕು. ಆಗ ಸಾಧನೆ  ಒಂದು ಹಂತಕ್ಕೆ ಮುಟ್ಟುತ್ತದೆ. ನಿತ್ಯದಲ್ಲಿ ನಾವು ಮಾಡುವ ಪ್ರತಿ ಕೆಲಸವೂ ಒಂದು ರೀತಿಯಲ್ಲಿ ಸಾಧನೆಯೇ!  ಪ್ರತಿ ದಿನವು ನಾವು ಶ್ರಮಿಸಲೇ ಬೇಕು. ಏಕೆಂದರೆ,  ಯಾವುದೇ  ಸಾಧನೆಯು   ನಮ್ಮಲ್ಲಿ ಪೂರ್ಣಕಾಲ ಹಾಗೆಯೇ ಉಳಿಯುವುದಿಲ್ಲ. ಉದಾಹರೆಣೆಗೆ, ನಿತ್ಯದ ಬದುಕಿನಲ್ಲಿ,   ಸ್ನಾನ ಮಾಡಿದ ಕೆಲವೇ ಗಂಟೆಗಳಲ್ಲಿ ನಮ್ಮ ದೇಹಕ್ಕೆ ಕೊಳೆ  ಬಂದು ಪುನಃ  ಸೇರುತ್ತದೆ, ಊಟದ ನಂತರ ಹಸಿವು ಕಾಣಿಸಿಕೊಳ್ಳುತ್ತದೆ. ಇನ್ನು ಜೀವನದಲ್ಲಿ  ಗಳಿಸಿದ ಹಣ ಕರಗಿ ಪುನಃ ಗಳಿಸಬೇಕಾದ ಅನಿವಾರ್ಯತೆ ಕಾಡುತ್ತದೆ.  ಅಂತೆಯೇ, ರೂಪ, ಯೌವನ, ಆಸ್ತಿ ಅಂತಸ್ತು, ಯಶಸ್ಸು,  ಇತ್ಯಾದಿ  ಎಲ್ಲವು ಬದಲಾಗುತ್ತಲೇ ಇರುತ್ತದೆ, ಇದು ಪ್ರಕೃತಿಯ ನಿಯಮವು ಹೌದು.   ಬದಲಾಗುವ ಪ್ರತಿಯೊಂದನ್ನು  ಆಯಾಯ ಸಮಯದಲ್ಲಿ  ಉಳಿಸಿ ಬೆಳೆಸಬೇಕಾದರೆ  ಶ್ರಮಸಾಧನೆ  ಅಗತ್ಯವಾಗುತ್ತದೆ.  ಈ ಪ್ರಗತಿಯೇ ಸಾಧನೆಯ ಯಶಸ್ಸು.


 ಹೀಗೆಯೇ, ಪ್ರಗತಿಯ ಸಾಧನೆಯ  ಹಿಂದೆ ಸೋಲಿನ  ಭಯ  ಇದೆ. ಪ್ರತಿ ಸೋಲನ್ನು ಗೆಲ್ಲಲು ಸಾಧನೆಯ ಪ್ರಯತ್ನ ಜಾರಿಯಲ್ಲಿ ಇಡಲೇಬೇಕು. ನಿರಂತರ ಹೋರಾಟ ಮಾಡಬೇಕಾಗುತ್ತದೆ. ತಾಳ್ಮೆ, ಸಂಯಮ ಅತ್ಯಂತ ಅಗತ್ಯ.  ನಾವು ಎಷ್ಟೇ ಲೆಕ್ಕಾಚಾರ ಹಾಕಿ, ಸಂಯಮದಿಂದ ಕಾರ್ಯವನ್ನು ನಿಭಾಯಿಸಿದರು,  ಇನ್ನು ಎಷ್ಟೋ ಭಾಗ ಸಂಪೂರ್ಣ ಆಗದೆ ಉಳಿದು ಹೋಗಿರುತ್ತದೆ.  ಸಾಧನೆಯಲ್ಲಿ ಪ್ರಗತಿಯ ಹಾದಿ ಸ್ವಲ್ಪ ದೂರವೇ ಉಳಿದಿದೆ ಎಂದು ಭಾಸವಾದರೂ, ಅದು ತುಂಬಾ ದೂರದಲ್ಲೇ ಇರುತ್ತದೆ.   ಸಾಧಕರು ನಿರಾಶರಾದರೆ ಪ್ರಗತಿ ಮತ್ತಷ್ಟು ಕುಂಟಿತವಾಗುತ್ತದೆ.  ಪೂರ್ಣ ಸಾಧನೆ ಅಷ್ಟು ಸುಲಭವಲ್ಲ.  

ಕೆಲವರು ಆರಂಭ ಶೂರತ್ವ ಮಾಡಿ,  ಹಲವು ದಿನ ಪ್ರಯತ್ನ ಮಾಡಿ ಗಳಿಸಿದ ಒಂದು ಚಿಕ್ಕ ಅಂಶವನ್ನೇ ಸಾಧನೆಯ ಪ್ರಗತಿಯೆಂದು ಕೊಚ್ಚಿಕೊಳ್ಳುವ ಮಂದಿಗೆ  ಸಾಧನೆ  ಎಂದರೆ ಏನೆಂದೇ ಗೊತ್ತಿರುವುದಿಲ್ಲ. ಇನ್ನು ಕೆಲವರು ಬದುಕಿನಲ್ಲಿ  ನಿರುತ್ಸಾಹದಿಂದ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲ ವ್ಯಯ ಮಾಡುವವರಿಗೆ ಏನೂ  ಬೇಕಾಗಿಲ್ಲ.

ನಿತ್ಯದ ಬದುಕಿನಲ್ಲಿ ಬರುವ ಕಷ್ಟಗಳು ಸಾಧನೆಯ  ಹಾದಿಯಲ್ಲಿ ಒಡ್ಡುವ ಪರೀಕ್ಷೆಗಳು.  ಸಹನೆ ಸಂಯಮವನ್ನು ಕಳೆದು ಕೊಳ್ಳದೆ ನಿರಂತರ ಪ್ರಯತ್ನಶೀಲನಾಗಿರುವುದು ಒಂದು ನಿತ್ಯ ಕರ್ಮವೇ ಆಗಿರುತ್ತದೆ.   ಇಂತಹ ಪರೀಕ್ಷೆಗಳನ್ನು ದಿನ ನಿತ್ಯದ ಬದುಕಿನಲ್ಲಿ ಸೈರಿಸಿಕೊಂಡು, ಪ್ರಗತಿಯ ಹಾದಿಯಲ್ಲಿ ನಡೆಯುವುದು ಒಂದು ರೀತಿಯ ತಪಸ್ಸು. ನಿತ್ಯದ ಬದುಕನ್ನು ಸಂಬಾಳಿಸಿಕೊಂಡು, ಕಷ್ಟ ನಿಷ್ತೂರಗಳನ್ನು ಸಹಿಸಿಕೊಂಡು ಸಾಧನೆಗೆ ತೊಡಗಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗೆಂದು ಬಿಡಲಾಗುವುದೂ  ಇಲ್ಲ.

ಇದನ್ನೇ ತಿಮ್ಮ ಗುರು ಹೇಳುತ್ತಾರೆ " ಸಹನೆಯೆಂದರೆ ಕೈಕಟ್ಟಿ ಕೂರುವುದಲ್ಲ.  ಪ್ರಯತ್ನವೆಂದರೆ ಆವೇಶದ ಬಡಿದಾಟವಲ್ಲ.  ಮನಸ್ಸಿನೊಳಗಡೆ ದ್ವೇಷ ಉದ್ವೇಗಗಳು ಇರದಿರುವುದೇ ಸಹನೆ.  ಬುದ್ಧಿಯ ಒಳಗಡೆ ಉದಾಸೀನತೆ ಜಡತೆಗಳು ಸೇರದೆ, ವಿವೇಚನೆ ಪ್ರೇರಣೆಗಳು  ನಡೆಯುತ್ತಾ, ಹೊರಗಡೆ ಕಾರ್ಯ ಪರಂಪರೆಯಾಗುವುದೇ ಪ್ರಯತ್ನ. ಇಂತಹ ಪುರುಷ ಪ್ರಯತ್ನವೆಂಬುವುದು ಒಂದು ಬಗೆಯ ಆತ್ಮ ಶಿಕ್ಷಣ."

ದಿನ ನಿತ್ಯದ  ಬದುಕಿನಲ್ಲಿ  ಸಾಮಾನ್ಯವಾಗಿ ಇರುವ  ಅತಿಯಾಸೆ, ಉದ್ವೇಗ, ಆತುರ, ಆವೇಶ,  ಆಲಸ್ಯ ಇವುಗಳ  ಮಧ್ಯೆಯಲ್ಲೂ ಸಾಧಕನು    ತಾಳ್ಮೆ, ಸಂಯಮ, ಶಿಸ್ತು, ನಂಬಿಕೆ ಮತ್ತು ಪ್ರೀತಿ ವಿಶ್ವಾಸವನ್ನು   ರೂಡಿಸಿಕೊಂಡು ಪ್ರಯತ್ನಶೀಲನಾದರೆ, ಬದುಕಿನಲ್ಲಿ ಆತ್ಮಶಕ್ತಿ  ಸಾಧಕನ ಅರಿವಿಗೆ ಬಾರದಂತೆಯೇ  ಲಭ್ಯವಾಗಿಬಿಡುತ್ತದೆ. ಆಗ ಬದುಕಿನಲ್ಲಿ ಸಾಧಕ, ಶಾಂತಿ ಸಮಾಧಾನಗಳ  ಉನ್ನತ ಸ್ತಾನಕ್ಕೆ ಏರಿಬಿಟ್ಟಿರುತ್ತಾನೆ. ಇದು ಬದುಕಿನಲ್ಲಿ ಗಳಿಸಬಹುದಾದ ಉನ್ನತ ಸಾಧನೆ.

ನೀವೇನು ಹೇಳುತ್ತಿರಿ?  

August 22, 2012

ರೈಲು ಬಿಡೋದು



             ಸೋಲೊಪ್ಪದ ಪಕ್ಕದ ಮನೆ ಹೆಂಗಸು ಏನು ಹೇಳಿದರು ಅದಕ್ಕೊಂದು ಪ್ರತಿಯಾಗಿ ಹೇಳುತ್ತಿದ್ದಳು.  ಇದನ್ನು ಕಂಡ ಗುಂಡನ ಹೆಂಡತಿ " ನೆಮ್ಮೆಜಮಾನರಿಗೆ ಡ್ರೈವಿಂಗ್ ಅಂದರೆ ಮಹಾ ಪ್ರಾಣ.  ಒಂದು ಸಾರಿ ನೋಡಿದರೆ ಸಾಕು ಮಾರನೆ ಕ್ಷಣ ಅದನ್ನು ಡ್ರೈವ್ ಮಾಡಿಯೇ ಸಿದ್ದ." ಎಂದು ಕೊಚ್ಚಿಕೊಂಡಳು.  ಇದನ್ನು ಕೇಳಿ ಸುಮ್ಮನಿರಲಾದಿತೆ? ಆ ಪಕ್ಕದ ಹೆಂಗಸು ಒಂದು ಸವಾಲು ಎಸೆದಳು " ರಿಕ್ಷಾ, ಕಾರು, ಸ್ಕೂಟರ್ ಎಲ್ಲಾನು ಓಡಿಸಬಹುದು ಅದೇನು ದೊಡ್ದವಿಚಾರ ಅಲ್ಲ, ಆದರೆ......" ಎಂದು ಹೇಳುವಷ್ಟರಲ್ಲಿ ಗುಂಡನ ಹೆಂಡತಿ " ಅಯ್ಯೋ ನೆಮ್ಮೆಜಮಾನರು ಹೆಲಿಕಾಪ್ತೆರ್ ಕೊಡಾ ಒಡೋಸೋದು ಹೇಗೆ ಅಂತ ತಿಳಿಕೊಂಡು ಅದನ್ನು ಓಡಿಸಿದ್ದಾರೆ ಗೊತ್ತಾ? " ಎಂದು ಬಡಬಡಿಸಿದಳು.  ಪಕ್ಕದ ಮನೆ ಹೆಂಗಸಿಗೆ ರೇಗಿ ಹೋಯಿತು " ವಿಮಾನ ಓಡಿಸಿದಾರಾ? " ಎಂದಳು.  " ಇದಾದ  ಮೇಲೆ ವಿಮಾನನೆ ಅಂತ ಹೇಳ್ತಾ ಇದ್ರೂ." ಎಂದು ಗುಂಡನ ಹೆಂಡತಿ ಬೀಗಿದಳು  ಸೋಲೊಪ್ಪದ ಪಕ್ಕದ ಮನೆಯಾಕೆ " ಇನ್ನು ರೈಲು ಯಾವಾಗಲೋ?' ಎಂದು ಕುಕ್ಕಿದಳು.  ಇದನ್ನು ಕೇಳಿದ ಗುಂಡನ ಹೆಂಡತಿ ನಗುತ್ತ " ಯಾವಾಗೇನು?  ನಮ್ಮೆಜೆಮಾನರು ಬಗ್ಗೆ ಈತನಕ ರೈಲನ್ನೇ ಬಿಟ್ಟಿದ್ದು " ಎಂದಳು. ಪಕ್ಕದಮನೆಯಾಕೆ "ಹೂಂ " ಎಂದು ಕೆಂಡ ಕಾರಿದಳು.


ಬಾಯಿ ತೆರೆಯೋ ಹಾಗಿಲ್ಲ !!!!!!!!!!!

ಒಬ್ಬಾತ ಇಸ್ಲಾಮಬಾದಿನಿಂದ  ಕರಾಚಿಗೆ ಬಂದು ಅಲ್ಲಿನ   ದಂತ ವೈದ್ಯರ ಬಳಿಗೆ ಹೋದ.  ಪರೀಕ್ಷೆ ಮಾಡಿದ ದಂತ ವೈದ್ಯ
 " ಇಸ್ಲಾಮಾಬಾದ್ನಿಂದ  ಕರಾಚಿತನಕ ಹಲ್ಲು ಕೀಳಿಸಲು  ಬಂದಿರುವಂತೆ ಕಾಣುತ್ತದೆ, ಏಕೆ?  ಅಲ್ಲಿ ಒಳ್ಳೆ ದಂತ ವೈದ್ಯರಿಲ್ಲವೋ?" ಎಂದು ಪ್ರಶ್ನಿಸಿದ. 
 " ಹೌದು, ದಂತ ವೈದ್ಯರೆನೋ ಇದ್ದಾರೆ , ಆದರೆ.........  ಇಸ್ಲಾಮಾಬಾದಿನಲ್ಲಿ ಯಾವುದಕ್ಕೂ ಬಾಯಿ ತೆರೆಯೋ ಹಾಗಿಲ್ಲ." ಎಂದ 



ವರ ಬೇಕು? 

   ಗುಂಡ ತನ್ನ ಮಗಳ ಮದುವೆ ಮಾಡಲು ವರಾನ್ವೇಷಣೆ ಪ್ರಾರಂಭ ಮಾಡಿದ.  ಸುಮಾರು ವರಗಳೇನೋ  ಬಂದರೂ, ಅವರಿಗೆ ಒಪ್ಪಿಗೆಯಾದರೆ ಇವರಿಗಿಲ್ಲ,  ಇವರಿಗಾದರೆ ಅವರಿಗಿಲ್ಲ .  ಹೀಗಾಗಿ ಕಂಕಣಭಾಗ್ಯ ದೊರೆಯಲೇ ಇಲ್ಲ. ಗುಂಡ ಬೇಸತ್ತು ಹೋದ .  ಮನೆಯವರ ಕಾಟ ತಡೆಯಲಾರದೆ ಕಾಡಿಗೆ ಹೋಗಿ ತಪಸ್ಸಿಗೆ ಕುಳಿತ.  ಧೀರ್ಘ ತಪಸ್ಸಿನ ಬಳಿಕ ದೇವರು ಪ್ರತ್ಯಕ್ಷವಾಗಿ " ನಿನಗೇನೂ ವರ ಬೇಕು? ಕೇಳು ಗುಂಡಾ." ಎಂದ. " ಅಯ್ಯೋ ,  ವರ ಬೇಕಾಗಿರುವುದು ನನಗಲ್ಲ, ನನ್ನ ಮಗಳಿಗೆ.  ಅದನ್ನ ಕೊಡು ಮಾರಾಯ, ನೆಮ್ಮದಿಯಾಗಿ ಮನೆಗೆ ಹೋಗುತ್ತೇನೆ " ಎಂದ. 

ಸೇವೆ............................... ಒಂದಷ್ಟು ಹರಟೆ

                                              ಸೇವೆ 

ಗಾಂಧಿಜಿಯವರಿಗೆ ಸರ್ಕಾರದಲ್ಲಿ ಯಾವ ಉನ್ನತ ಅಧಿಕಾರವಿರಲಿಲ್ಲ. ಹೇಳಿಕೊಳ್ಳುವಂತಹ ಹಣ, ಆಸ್ತಿ ಏನೂ ಇರಲಿಲ್ಲ.  ಒಳ್ಳೆಯ ಸೌಂದರ್ಯ ಅಥವಾ ಆಕರ್ಷಣೆ ಯಾವುದು ಇರಲಿಲ್ಲ. ತನ್ನದೇ ಆದ ಗುಂಪಿಗಾಗಲಿ , ಸೈನ್ಯಕ್ಕಾಗಲಿ  ನಾಯಕರು ಇವರಾಗಿರಲಿಲ್ಲ.  ಆದರೂ, ಗಾಂಧೀಜಿಯವರಿಗೆ ಲಕ್ಷಾಂತರ ಜನರ ಬೆಂಬಲವಿತ್ತು.  ಹಿಂಬಾಲಕರಿದ್ದರು, ಗಾಂಧೀಜಿಯವರು ಒಮ್ಮೆ ಹೇಳಿದರೆ ಸಾಕು,  ಒಮ್ಮೆಲೇ ಆ ಕಾರ್ಯ ಮಾಡಲು ಮುನ್ನುಗ್ಗುತ್ತಿದ್ದರು. ಸೇವೆಗೆ ಸದಾ ಸಿದ್ದರಿರುತ್ತಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ, ಗಾಂಧೀಜಿಯವರು ತಮ್ಮ ಜೀವನವನ್ನು ಸೇವೆಗೆ ಮುಡುಪಾಗಿ ಇಟ್ಟದ್ದು ಮತ್ತು ನಿಸ್ವಾರ್ಥ ಸೇವೆ ಮಾಡುತ್ತಿದ್ದದ್ದು ಮಾತ್ರ ಇವರ ಜನ ಬೆಂಬಲಕ್ಕೆ ಕಾರಣವಾಗಿತ್ತು.

ಸಾಮಾನ್ಯವಾಗಿ ನಾಯಕತ್ವ ಮತ್ತು ಅಧಿಕಾರವಿದ್ದಾಗ ಮಾತ್ರ ಸೇವೆ ಮಾಡಲು ಸಾಧ್ಯ ಎಂಬ ತಪ್ಪು ಕಲ್ಪನೆ ಹೆಚ್ಚಿನ ಜನರಲ್ಲಿದೆ. ವಾಸ್ತವದಲ್ಲಿ ಎಲ್ಲಿಯತನಕ ಅಧಿಕಾರಕ್ಕಾಗಿ  ಹೋರಾಡುತ್ತಾರೋ ಅಲ್ಲಿಯತನಕ ನಾಯಕತ್ವ ಸಿಗಲಾರದು.  ಶ್ರೀ ರಾಮಕೃಷ್ಣರು ಹೇಳುತ್ತಾರೆ " ಎಲ್ಲಿಯತನಕ ನೀನು ಕಷ್ಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿಯೋ ಅಲ್ಲಿಯತನಕ ನಿನಗೆ ಕಷ್ಟಗಳು ಒಂದಾದನಂತರ ಮತ್ತೊಂದರಂತೆ ಬಂದು ಎರಗುತ್ತಲೇ ಇರುತ್ತವೆ. ದೈಯವಾಗಿ    ನಿಂತು   ಎದುರಿಸಿದಾಗ    ಕಷ್ಟಗಳು ಪಲಾಯನ  ಮಾಡುತ್ತವೆ.  ಆದ್ದರಿಂದ ಸುಖದ ಬೆನ್ನೇರಿ    ಓಡಬೇಡ,  ಕಷ್ಟಕ್ಕೆ ಬೆನ್ನು ತೋರಿಸಬೇಡ." ಇದೆ ರೀತಿ ಅಧಿಕಾರ ಕೂಡಾ .  ಅಧಿಕಾರಕ್ಕಾಗಿ ಹಪಹಪಿಸಿದರೆ,ಒಂದು ಪಕ್ಷ ಅಧಿಕಾರ ದೊರೆತರೂ  ನಾಯಕತ್ವದ ನೈಪುಣ್ಯತೆ ದೊರೆಯುವುದಿಲ್ಲ.  ಸೇವೆಯನ್ನು ನಿಸ್ವಾರ್ಥ ಭಾವದಿಂದ, ಶ್ರದ್ಧೆಯಿಂದ ಮಾಡಲು ಪ್ರಾರಂಭ ಮಾಡಿದರೆ ಸಾಕು,  ನಾಯಕತ್ವದ ಗುಣಗಳು ತನ್ನಷ್ಟಕ್ಕೆ ತಾನೇ ಮೈತುಂಬಿಕೊಳ್ಳುತ್ತದೆ.  ಇದಕ್ಕೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ.  ನಮ್ಮ ಇತಿಹಾಸ ಸಾಕಷ್ಟು ರಾಜ ಮಹಾರಾಜರ, ಸಾಧು ಸಂತರ, ಸಮಾಜ ಸೇವಾಸಕ್ತರ, ಅಧಿಕಾರಿಗಳ  ಗಣನೀಯ ಸೇವೆಯನ್ನು ದಾಖಲು ಮಾಡಿದೆ.   ಅವರು ಅಂದು ಮಾಡಿದ ಸೇವಾ ಕೆಲಸಗಳು ಇಂದಿಗೂ ಸಮಾಜದಲ್ಲಿ ಚಿರಸ್ಥಾಯಿಯಾಗಿ ನಿಂತಿದೆ.   ಕಟ್ಟಡಗಳಿರಲಿ , ಕೆರೆ ಕಾಲುವೆಗಳಿರಲಿ, ಸಾಲುಮರಗಳಿರಲಿ, ಆಸ್ಪತ್ರೆ , ಆಣೆಕಟ್ಟು,  ಸೇತುವೆಗಳೇ  ಆಗಿರಲಿ, ಕಟ್ಟಿ ಬೆಳೆಸಿದ ವಿದ್ಯಾಸಂಸ್ತೆಗಳಾಗಿರಲಿ, ಗುಡಿ ಗೋಪುರಗಳಾಗಿರಲಿ, ದೇವಸ್ತಾನ, ಚರ್ಚು, ಮಸೀದಿಗಳೇ ಆಗಿರಲಿ ಇನ್ನ್ಯಾವುದೇ ಸಮಾಜಮುಖಿ ಕೆಲಸವಿರಲಿ ಅದು ಅವರ ನಿಸ್ವಾರ್ಥ ಸೇವೆ ಯನ್ನು ಸದಾ ಕಾಲ ಜ್ಞಾಪಿಸುತ್ತದೆ.  

ಆದರೆ, ಇಂದು ಸಮಾಜ ಸೇವೆಯ ಹೆಸರಿನಲ್ಲಿ ಆಗುತ್ತಿರುವ ಮೋಸ,  ವಂಚನೆ ಇವು ಅಸಹ್ಯ ತರಿಸುತ್ತಿದೆ.  ಸಮಾಜದ ಒಳಿತಿಗಾಗಿ  ಕೆಲಸ ಮಾಡಬೇಕಾದವರು ಕೋಟಿಗಟ್ಟಲೆ ಲಂಚದ ಪ್ರಕರಣಗಳಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ.  ತಮ್ಮ ಮಾನ ಉಳಿಸಿಕೊಳ್ಳಲು ಇಲ್ಲದ ನಾಟಕ, ಶಕ್ತಿ ಪ್ರದರ್ಶನ ಮಾಡುತ್ತಾ  , ಹವನ ಹೊಮಾದಿಗಳನ್ನು ನಡೆಸಿ ದೇವರಿಗೂ ಆಮಿಷ ಒಡ್ಡುತ್ತಿದ್ದಾರೆ.  'ಸರ್ಕಾರಿ ಕೆಲಸ ದೇವರ ಕೆಲಸ' ಎಂಬುದು ಬೋರ್ಡುಗಲ್ಲಿ  ಚನ್ನಾಗಿ ಕಾಣುತ್ತಿದೆ. ಜನನಾಯಕ ಎನಿಸಿಕೊಂಡವನು ಸಮಾಜ ಘಾತುಕ ಕೆಲಸದಲ್ಲಿ, ಕಳಂಕಿತ ಕೆಲಸಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಮಾರಕನಾಗಿದ್ದಾನೆ.  ಇಂತಹ ನಾಯಕರು ಆಲಸಿಗಳಿಗೆ, ಸ್ವಾರ್ಥಿಗಳಿಗೆ ಮತ್ತು ಲಂಪಟರಿಗೆ  ಶ್ರೇಷ್ಠ ನಾಯಕರಾಗಿ ಬಿಂಬಿತವಾಗುತ್ತಿದ್ದಾರೆ .   ಇಂತಹವರಲ್ಲಿ   ಸೇವಾ ಮನೋಭಾವವನ್ನು    ಹುಡುಕಲು ಸಾಧ್ಯವೇ?

ಸೇವೆಯ ಪದದ ಅರ್ಥವೇ ನಿಸ್ವಾರ್ಥ.  ಯಾರಿಂದ ಏನನ್ನು ಬಯಸದೆ ನಿರ್ವಂಚನೆಯಿಂದ, ನಿಷ್ಪಕ್ಷಪಾತವಾಗಿ, ನಿಸ್ವಾರ್ಥದಿಂದ ಇನ್ನೊಬ್ಬರ ಒಳಿತಿಗಾಗಿ ಮಾಡುವ ಕೆಲಸವನ್ನೇ   ಸೇವೆ ಎನ್ನುವುದು.   ಚುನಾಯಿತ  ಪ್ರತಿನಿಧಿಯು ಕ್ಷೇತ್ರದ-ಮತದಾರನ ಜೊತೆ, ಶಿಕ್ಷಣ ಕ್ಷೇತ್ರದಲ್ಲಿ ಗುರು-ವಿದ್ಯಾರ್ಥಿಗಳ ಜೊತೆ, ಧರ್ಮದಲ್ಲಿ ಧರ್ಮಾಧಿಕಾರಿಗಳು  (ಮಠದ  ಅಧಿಪತಿಗಳು )  ಭಕ್ತರುಗಳ ಜೊತೆ, ಕುಟುಂಬದಲ್ಲಿ ಗಂಡ ಹೆಂಡಿರ, ತಂದೆ, ತಾಯಿ, ಮಕ್ಕಳ, ಸೋದರ ಸೋದರಿಯರ, ಅಜ್ಜಿತಾತನ ಜೊತೆ, ಹೀಗೆ ಎಲ್ಲದರಲ್ಲೂ ಉತ್ತಮ ಸಂಬಂಧ ಬೆಳೆಸಿ ಸೇವೆ ಮಾಡಬಹುದಾಗಿದೆ.    ಎಲ್ಲೂ ಸೇವೆಗೆ ನಾಯಕತ್ವವೇ ಬೇಕಾಗಿಲ್ಲ.  ತನಗಿರುವ  ವ್ಯಾಪ್ತಿಯಲ್ಲೇ ಬೇಕಾದಷ್ಟು ಸೇವೆ ಮಾಡಿ, ತನ್ನ ಇರುವನ್ನ ಸಾರ್ಥಕ ಮಾಡಿಕೊಳ್ಳಬಹುದು.  ಸೇವೆಯನ್ನು  ಕರ್ತವ್ಯವೆಂದೆ ಮಾಡಿದರೆ ಅದರಲ್ಲಿ ಸಿಗುವ ಆನಂದವೇ ಬೇರೆ.    ಈ ಕರ್ತವ್ಯವನ್ನು  ನಿಸ್ವಾರ್ಥವಾಗಿ  ಮಾಡಿದಾಗ, ಸೇವೆ  ದೈವತ್ವದ ಮಟ್ಟಕ್ಕೆ ಏರುತ್ತದೆ. ಇದೆ ನಿಜವಾದ ಸುಲಭ ಪೂಜೆಯಾಗುತ್ತದೆ. ಭಗವಂತನನ್ನು ಕಾಣಲು ಬೇರೆ ಇನ್ಯಾವ ಮಾರ್ಗಕ್ಕಾಗಿ ಹುಡುಕಾಡಬೇಕಾಗಿಲ್ಲ .

ನೀವೇನು ಹೇಳುತ್ತೀರಿ ?



August 12, 2012

ಗುಜರಿಗೆ ಹಾಕುವ ತನಕ ವಾಹನ ಓಡಿಸಬಾರದು.


 
                    " ನನಗೆ ಧರ್ಮ ಎಂದರೇನು ಗೊತ್ತು .  ಆದರೂ ನಾನೇನು ಮಾಡಲಿ? ನನಗೆ ಪಾಲಿಸಲು ಆಗುತ್ತಿಲ್ಲ, ನನಗೆ ಅಧರ್ಮ ಯಾವುದೆಂದೂ ಗೊತ್ತು.  ಆದರೆ, ಅದನ್ನು ಬಿಡಲಾಗುತ್ತಿಲ್ಲ. ಇದು ನನ್ನ ಅನಿವಾರ್ಯ "  ಎಂದು ಶ್ರೀ ಕೃಷ್ಣನಿಗೆ  ದುರ್ಯೋದನ ದೈರ್ಯದಿಂದ ಹೇಳುತ್ತಾನೆ.

                    ಈ    ಮಾತು ಕೇಳಿದ ನಂತರ  ಶ್ರೀ ಕೃಷ್ಣ ಹೇಳುತ್ತಾನೆ.   " ಮನುಷ್ಯ, ತನ್ನ ಅರಿವಿಗೆ ಬಾರದಂತೆ ತಪ್ಪು ಘಟಿಸಿದರೆ,    ಅದಕ್ಕೆ ಕ್ಷಮೆಯುಂಟು.  ತಾನು ಮಾಡುತ್ತಿರುವುದು ತಪ್ಪೆಂದು ತಿಳಿದೂ ಮಾಡುವುದು ಪಾಪ."

                ಹೌದು,  ನಾವು ದಿನನಿತ್ಯದಲ್ಲಿ ಮಾಡುವ ಅನೇಕ ಕೆಲಸಗಳಲ್ಲಿ ಈ ರೀತಿಯ ತಪ್ಪುಗಳನ್ನು ಮಾಡುತ್ತಲೇ  ಇರುತ್ತವೆ.   ಎಲ್ಲರೂ ತಪ್ಪು ಮಾಡುತ್ತಾರೆ, ತಪ್ಪು ಆಗುವುದು ಸಹಜ ಎಂದು ಎನಿಸಿದರು  ತಪ್ಪು ಹೇಗಾಯಿತು? ಎಂಬುದು ಮುಖ್ಯವಾಗುತ್ತದೆ.  ನಾವು ಮಾಡುವ ಕೆಲಸದಲ್ಲಿ ತಪ್ಪಾದರೆ,  ಅದು ನಮ್ಮ ಅಜಾಗರೂಕತೆಯಿಂದ ಆದದ್ದೋ?  ಅಥವಾ ನಮ್ಮ ಅರಿವಿಗೆ ಬಾರದ ರೀತಿಯಲ್ಲಿ ಸಂಭವಿಸಿದ್ದೋ?  ಅಥವಾ ನಮ್ಮ ಅರಿವಿಗೆ ಬಂದೂ ಬೇಕಂತಲೇ ಮಾಡಿದ್ದೋ? ಹೀಗೆ,  ನಾವು ಮಾಡಿದ ಕೆಲಸ, ಅದರ ಹಿಂದೆ ಇರುವ ಉದ್ದೇಶ ಮತ್ತು ಪರಿಣಾಮಗಳಲ್ಲಿ  ಅಡಗಿರುತ್ತದೆ.  ನಾವು ಈ  ಅಂಶಗಳನ್ನು  ಗಮನಿಸಬೇಕಾಗುತ್ತದೆ.  ಗೊತ್ತಾಗದೆ ಆದ ತಪ್ಪು  ಸಹಜವೆಂದು ಅನ್ನಿಸಿಕೊಂಡರೆ,  ಗೊತ್ತಿದ್ದೂ ಮಾಡುವ ಅಸಹಜ ತಪ್ಪು ಪಾಪವಾಗುತ್ತದೆ.

                   ಹಲವಾರು ದಿನನಿತ್ಯದ ನಮ್ಮಿಂದ ಕೆಲಸಗಳು ನಡೆಯುತ್ತದೆ. ಕೆಲವೊಂದು ಕೆಲಸ  ನಮ್ಮ ಅನುಭವದಲ್ಲಿ, ಕೆಲವೊಂದು ಅಭ್ಯಾಸದಲ್ಲಿ, ಕೆಲವೊಂದು ಯಾಂತ್ರಿಕವಾಗಿ ನಡೆಯುತ್ತದೆ. ಯಾವುದೇ ಕೆಲಸವಾಗ ಬೇಕಾದರೂ ನಮ್ಮ  ಒಳ ಮನಸ್ಸು  ಮೊದಲು ಕೆಲಸ ಮಾಡುತ್ತದೆ.  ನಮ್ಮ ಒಳ ಮನಸ್ಸು ಪ್ರತಿ ತಪ್ಪು ಹೆಜ್ಜೆ ಇಡುವಾಗಲು ಎಚ್ಚರಿಸುತ್ತದೆ. ವಿರೋಧ ಒಡ್ಡುತ್ತದೆ. ಆದರೆ,  ನಾವು ಒಳ ಮನಸ್ಸಿನ ಮಾತು ಕೇಳುವುದೇ ಇಲ್ಲ. ಯಾರು ಒಳ ಮನಸ್ಸು ಹೇಳಿದ ಮಾತನ್ನು ಕೇಳುತ್ತಾರೋ, ಅಥವಾ   ಮತ್ತೊಮ್ಮೆ ಈ ಮಾತನ್ನು ಪರಾಮರ್ಶೆ ಮಾಡುತ್ತಾರೋ ಅಂತಹವರಿಂದ ತಪ್ಪುಗಳು  ಕಡಿಮೆ ಸಂಭವಿಸುತ್ತದೆ. " Unimplemented knowledge is a burden" ಎನ್ನುತ್ತಾನೆ ಒಬ್ಬ ಸಾಹಿತಿ.  ನಿಜ, ಪಾಲಿಸಲು ಸಾಧ್ಯವಾಗದ ಜ್ಞಾನ, ಕೆಲಸಕ್ಕೆ ಬಾರದ ಒಂದು ಹೊರೆಯೇ ಸರಿ.

                  ಆದರೆ, ಸಾಮಾನ್ಯರು ಇದನ್ನು ಒಪ್ಪುವುದಿಲ್ಲ. ಅವರ ವಾದವೇ ಬೇರೆ.   " ಎಲ್ಲವನ್ನು ಎಲ್ಲಿ ಪಾಲಿಸಲು ಸಾಧ್ಯವಾಗುತ್ತದೆ?  ಅದೆಲ್ಲ ಪುಸ್ತಕದಲ್ಲಿ ಓದಲು, ಉಪನ್ಯಾಸದಲ್ಲಿ ಕೇಳಲು ಚನ್ನಾಗಿರುತ್ತದೆ. ಮಾಡಲು ಸಾಧ್ಯವಾಗೋಲ್ಲ."  ಎಂದು ಸಾರಾಸಗಟಾಗಿ ತಿರಸ್ಕರಿಸುತ್ತಾರೆ.  "ಈ ಸಮಾಜದಲ್ಲಿ ಎಲ್ಲರು ಬದುಕುವ ಹಾಗೆ ಬದುಕಬೇಕು, ನಮ್ಮದೇನು ವಿಶೇಷ.  ಇಲ್ಲದ್ದಿಕ್ಕೆಲ್ಲ ತಲೆ ಸುಮ್ಮನೆ ಕೆಡಿಸಿಕೊಳ್ಳಬಾರದು."  ಎನ್ನುತ್ತಾರೆ ಮತ್ತೆ ಕೆಲವರು. " ನೋಡಿ,  ಅವರು ಅದೆಷ್ಟೋ  ಜನರಿಗೆ    ಮೋಸ ಮಾಡಿದರು ಅವರು ಚನ್ನಾಗೇ  ಇದಾರೆ. ಅವರಿಗೆ ಯಾವ ಪಾಪನೂ ಸುತ್ತಿಕೊಂಡಿಲ್ಲ.  ನಮಗೆ  ಮಾತ್ರ  ಪಾಪನಾ?"  ಎಂದೂ ಪ್ರಶ್ನಿಸುತ್ತಾರೆ. ಹೀಗೆ ತಮ್ಮಿಂದಾಗದ,  ಮತ್ತು ಮಾಡಲಾಗದುದಕ್ಕೆ ಒಂದು  ನೆಪ ಹೇಳುತ್ತಾರೆ,

                  ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ, ಎಲ್ಲರ ದೇಹವೂ ಆರೋಗ್ಯದ ವಿಚಾರದಲ್ಲಿ ಬಂದೇ ಸಮನಾಗಿರಲು ಸಾಧ್ಯವಿಲ್ಲ. ವಂಶವಾಹಿನಿಯಲ್ಲಿ ಬಂದಿರುವ ಹಲವಾರು ಕೊರತೆಗಳು ಮತ್ತು ಪುಷ್ಟಿಗಳು ನಮ್ಮ ದೇಹದಲ್ಲಿ ಅಡಕವಾಗಿದೆ. ಯಾರೂ ನಾನು perfect ಅಂತ ಹೇಳಲು ಸಾಧ್ಯವಿಲ್ಲ.  ಕಾರಣ,   ಭಗವಂತನ ಸೃಷ್ಟಿಯೇ ವೈವಿಧ್ಯಮಯ.  ಆದರೆ ಇಲ್ಲಿ ತಪ್ಪಾಗುವುದು  ಏನು? ಅಂದರೆ,  ನಮ್ಮ ದೇಹ ವನ್ನು ಅಗತ್ಯಕಿಂತ ಹೆಚ್ಚು ದುಡಿಸಿಕೊಂಡು, ದೇಹದ ಕಡೆಗೆ ಗಮನವನ್ನೇ ಕೊಡದೆ , ಆರೋಗ್ಯವನ್ನು ಕಡೆಗಣಿಸುವುದು.  ನಾವು ಹೆಚ್ಚು ದುಡಿಸಿ ಕೊಳ್ಳುವುದನ್ನು ದೇಹ ಎಂದಿಗೂ ಬೇಡ ಅನ್ನದು, ದುಡಿಮೆಗೆ  ತನ್ನನ್ನು ತಾನು ಒಗ್ಗಿಸಿಕೊಳ್ಳತ್ತದೆ. ಆದರೆ, ದುಡಿಸಿಕೊಂಡಿದ್ದಕ್ಕೆ ಸರಿಯಾಗಿ ವಿಶ್ರಾಂತಿ, ಆಹಾರ ಮತ್ತು ವಿಹಾರವನ್ನು ಬಯಸುತ್ತದೆ.

                  ನಾವು ನಮ್ಮ ಕಾರನ್ನು ಅತ್ಯಂತ ಜಾಗರೂಕತೆಯಿಂದ ಬಳಸುತ್ತೇವೆ. ನಮ್ಮ ಆಭರಣಗಳನ್ನು ಜೋಪಾನ  ಮಾಡುತ್ತೇವೆ. ನಮ್ಮ ಕಂಪ್ಯೂಟರ್ ಗಳಿಗೆ ವೈರಸ್ ಬಾರದಂತೆ ಏನೆಲ್ಲಾ software ಅಳವಡಿಸುತ್ತೇವೆ. ಒಂದು ಸೈಟು, ಮನೆ  ಖರೀದಿ ಮಾಡುವ ಸಮಯದಲ್ಲಿ ಅದೆಷ್ಟು ಜಾಗ್ರತೆ ವಹಿಸಿ ವಿಚಾರಮಾಡಿ ಖರೀದಿ ಸುತ್ತೇವೆ.  ಆರೋಗ್ಯದ ವಿಚಾರದಲ್ಲಿ ಮಾತ್ರ ಸ್ವಲ್ಪ ಮಂದಗತಿ ವಹಿಸುತ್ತೇವೆ. ಯಾವುದೇ ದೇಹದ ಸಮಸ್ಯೆಯಾದರೂ ಅದು ಮುನ್ಸೂಚನೆ ಕೊಟ್ಟೆ ಕೊಡುತ್ತದೆ.  ನಮ್ಮ ಒಳಮನಸ್ಸು ಇಲ್ಲೂ ಎಚ್ಚರಿಸುತ್ತದೆ.  ಆದರೆ ನಾವು ಕಡೆಗಣಿಸುತ್ತೇವೆ.ಈ ವಿಚಾರದಲ್ಲಿ ಕಡೆಗಣಿಸಿದರೆ ಆಗ ದೇಹ ಹೆಚ್ಚು ದಣಿಯುತ್ತದೆ.  ದಣಿದ ದೇಹ ತನ್ನ ಕಾರ್ಯ ಕ್ಷಮತೆಯನ್ನು ಕಡಿಮೆಗೊಳಿಸುತ್ತ ಸಾಗಿ ಒಂದು ಸಲ ನನ್ನಿಂದಾಗದು ಎಂದು ನಿಂತು ಬಿಡುತ್ತದೆ. ನಾವು ಒಂದು ವಿಚಾರವನ್ನು ಗಮನಿಸಬೇಕು,  ನಾವು ಆರೋಗ್ಯವಾಗಿ ಇರಬಹುದೇ ವಿನಃ ಆರೋಗ್ಯವನ್ನು ಖರೀದಿಸಲಾಗುವುದಿಲ್ಲ. ನಿಯಮಿತ ಅಭ್ಯಾಸಗಳಿಂದ ಆರೋಗ್ಯವನ್ನು ಹೊಂದಬಹುದು.  

                 ಧೂಮಪಾನ, ಮಧ್ಯಪಾನ, ಜರದಾ, ಹೊಗೆ ಸೋಪ್ಪು ಸೇವನೆ, ಇತ್ಯಾದಿ ಇತ್ಯಾದಿಗಳು ಆರೋಗ್ಯಕ್ಕೆ ಹಾನಿ ಕಾರಕ ಎಂದು ನಮಗೆ ಗೊತ್ತಿದ್ದರು, ನಾವು ಅದಕ್ಕೆ ಅಂಟಿಕೊಂಡು ದಾಸರಾಗಿದ್ದೇವೆ. ಸಿಟ್ಟು, ಸೆಡವು, ಅಹಂಕಾರ, ಮತ್ಸರ ಇತ್ಯಾದಿಗಳು ನಮ್ಮನ್ನು ಸುಡುತ್ತವೆ ಎಂಬ ಅರಿವು ನಮಗೆ ಇದ್ದರೂ ನಾವು ಈ ಬಗ್ಗೆ ತಲೆಕೆದಸಿಕೊಂಡಿಲ್ಲ. ವಿನಾ ಕಾರಣ  ನಮ್ಮ ದೇಹವನ್ನು ಹಿಂಸಿಸುತ್ತಲೇ ಬಂದಿರುತ್ತೇವೆ. ನಮ್ಮ ದೇಹದ ರಚನೆಯನ್ನು ಭಗವಂತ ಅದೆಷ್ಟು ಚನ್ನಾಗಿ ಮಾಡಿದ್ದಾನೆಂದರೆ, ಏನೆಲ್ಲವನ್ನು ಸುಮ್ಮನೆ ಸಹಿಸುತ್ತಲೇ ಇರುತ್ತದೆ.  ಇನ್ನು ಸಾಧ್ಯವೇ ಇಲ್ಲ ಎಂದಾಗ ದೇಹ ಪ್ರತಿರೋಧ ಮಾಡುತ್ತದೆ.  ಅಲ್ಲಿಯತನಕ ನಾವು ನಮ್ಮ ದೇಹದ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ. ಇದು ಖಂಡಿತಾ ತಪ್ಪಲ್ಲವೇ?

                ಗುಜರಿಗೆ  ಹಾಕುವ ತನಕ ವಾಹನ ಓಡಿಸಬಾರದು. ಆಗ್ಗಿಂದ್ದಾಗ್ಗೆ over-oil ಮಾಡಿಸುತ್ತ ವಾಹನವನ್ನು  ಸುಸ್ಥಿತಿಯಲ್ಲಿ ಇಟ್ಟರೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಹೀಗೆಯೇ ನಮ್ಮ ದೇಹ ಕೊಡ!. ಇದನ್ನು ಸರಿಯಾಗಿ ಗಮನಿಸಿ,  ಬೇಕಾದ ಉಪಚಾರ ಮತ್ತು ವಿಶ್ರಾಂತಿ ಕೊಟ್ಟಲ್ಲಿ  ಈ ದೇಹವೂ ಹೆಚ್ಚು ಕಾಲ ಆರೋಗ್ಯದಿಂದ ಇರಬಲ್ಲದು. " ಜೀವೇಮ ಶರದಃ ಶತಮ್ ಶ್ರುನ್ಯಾಮ ಶರದಃ ಶತಂ ಪ್ರಬ್ರವಾಮ ಶರದಃ ಶತಮ್ " ನೂರು ಕಾಲ ಆರೋಗ್ಯದಿಂದ, ಸಂತೋಷದಿಂದ, ಸೇವೆಯಿಂದ ಬಾಳಬೇಕಾದರೆ ನಮ್ಮ ದೇಹ ಸುಸ್ಥಿಯಲ್ಲಿ ಇದ್ದಾಗ ಮಾತ್ರ ಸಾಧ್ಯ. ಇದಕ್ಕೆ ನಮ್ಮ ದೇಹವನ್ನು ಕಾಪಾಡಬೇಕಲ್ಲವೇ ?
--

                       ನೀವು ಏನಂತೀರಿ?




--


August 11, 2012

ಶೀಟಿ ಹೊಡೆಯೋದು.



               ಬಸ್ಸಿನಿಂದ ಇಳಿಯುವಾಗ ತಡಮಾಡಿದ ಇಳಿವಯಸ್ಸಿನ ಮುದುಕಿಗೆ  ಕಂಡಕ್ಟರ್ ಜೋರು ಮಾಡುತ್ತಾ " ಅದೆಷ್ಟು ಹೊತ್ತು ಇಳಿತಿಯಾ?  ನಾನು ಶೀಟಿ ಹೊಡೆದದ್ದು ಕೇಳಲ್ಲಿಲ್ಲವೇನು? ಇಳಿ ಬೇಗ. "
               ಇಳಿದ ಮುದುಕಿ, ಕಂಡಕ್ಟರ್ನನ್ನು  ದುರುಗುಟ್ಟಿ ನೋಡಿ " ಶೀಟಿ ಹೊಡೆದರೆ ತಿರುಗಿನೋಡೋ ಕಾಲಎಲ್ಲ ಆಗಲೇ ಮುಗಿದು ಹೋಯಿತು. ಈಗ ಏನಿದ್ದರು ಶೀಟಿ ಹೊಡೆಯೋದು ಅಷ್ಟೇ ಬಾಕಿ ಇರೋದು " ಎಂದು ತೋರು ಬೆರಳನ್ನು ಮೇಲಕ್ಕೆ ತೋರಿಸಿದಳು.
                ತನ್ನ ತಪ್ಪಿನ ಅರಿವಾಗಿದ್ದರು ಏನೂ ಮಾಡಲು ಸಾಧ್ಯವಿರಲಿಲ್ಲ, ಕಾಲ ಮಿಂಚಿ ಹೋಗಿತ್ತು. ಬಾಯಿಂದ ತಪ್ಪು ಮಾತು ಉದುರಿತ್ತು. ತಲೆ ತಗ್ಗಿಸಿ ರೈಟ್ .......ಎಂದು ಬಾಗಿಲು ಎಳೆದುಕೊಂಡ ಕಂಡಕ್ಟರ್.

August 9, 2012

ಗಂಡೋ ಹೆಣ್ಣೋ?

ಮನೆ ಬಾಗಿಲ ಮುಂದೆ ಹಾವಾಡಿಗ ಪುಂಗಿ ಉದುತ್ತ ಹಾವನ್ನು ಚನ್ನಾಗಿ ಆಡಿಸುತ್ತಿದ್ದ.  ಹೆಡೆ ಬಿಚ್ಚಿ ಹಾವು ತಲೆ ಅಲ್ಲಾಡಿಸುತ್ತಿದ್ದುದನ್ನು ಕಂಡು ಜನರಿಗೆ ಒಂದು ರೀತಿ ಖುಷಿ.  ಜೇಬಿಂದ ದುಡ್ಡು ತೆಗೆದು ಹಾಕುತ್ತಿದ್ದರು. ಗುಂಡನ ಹೆಂಡತಿಗೊಂದು ಸಂಶಯ ಬಂತು. ನಿವಾರಣೆಗೊಸ್ಕರ ದುಡ್ಡು ಹಾಕುವಾಗ " ಈ ಹಾವು ಗಂಡೋ ಹೆಣ್ಣೋ?" ಎಂದು ಕೇಳಿಯೇ ಬಿಟ್ಟಳು.  ಗುಂಡನಿಗೆ ನಗು ಬಂತು. " ನಿನಗ್ಯಾಕೆ ಅದು ? ಇನ್ನೊಂದು ಹಾವು ಅದನ್ನ ವಿಚಾರಿಸಿಕೊಳ್ಳುತ್ತೆ" ಎಂದು ಬಾಗಿಲು ಹಾಕಿಕೊಂಡ.

August 7, 2012

ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?




ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು.  ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ ಈ ನಗರವಾಸಿಗಳನ್ನು ನೋಡಿ "ಎಲ್ಲಿಗೆ ಹೋಗಬೇಕು?" ಎಂದು ಕೇಳಿದ.  " ಸ್ವಲ್ಪ ದೂರದಲ್ಲಿರುವ ಮಾರನಾಯಕನ ಹಳ್ಳಿಗೆ " ಎಂದು ಹೇಳಿ " ನನ್ನ ಅಲ್ಲಿತನಕ ತಲುಪಿಸಿ ಬಿಟ್ಟರೆ ನಿನ್ನ ಬಾಡಿಗೆ ಏನಿದೆಯೋ ಅದನ್ನ ಕೊಡುತ್ತೀನಿ. ಅಷ್ಟು ಮಾಡಿ ಪುಣ್ಯ ಕಟ್ಕೊ" ಎಂದು ಒಂದೇ ಸಮನೆ ಹೇಳಿದರು.  " ಅದಕ್ಕೇನಂತೆ, ನಾನು ಆ ಕಡೆಗೆ ಹೋಗ್ತಾ ಇದೀನಿ. ಬನ್ನಿ ಸ್ವಾಮೀ" ಎಂದು ಸ್ನೇಹದಿಂದ ಕರೆದ. ಎತ್ತಿನ ಗಾಡಿ ಬಹಳ ದಿನದ ನಂತರ ಹತ್ತಿ ಕೂತರು. ಕುಲುಕಾಟದ ಮಣ್ಣಿನ ರಸ್ತೆಯಲ್ಲಿ ಧೂಳು ಅಡರುತ್ತಿತ್ತು ಜೊತೆಗೆ ರಣ ಬಿಸಿಲು.  ಇದನ್ನು ಗಮನಿಸಿದ ಗಾಡಿಯವ " ಸ್ವಾಮೀ,  ಅಲ್ಲೇ  ಛತ್ರಿ ಮಡಗಿವ್ನಿ ಬಿಚ್ಚಿಕೊಳಿ. ಪ್ಯಾಟೆ ಜನಕ್ಕೆ ಈ ಬಿಸಿಲು ಆಗಬರಂಗಿಲ್ಲಾ." ಎಂದು ಸಹಜವಾಗಿ ಅಂದ.

ಗಾಡಿ ಸಾಗುತ್ತ ಇದ್ದಂಗೆ " ಈ ಗ್ರಾಮದಲ್ಲಿ ಒಬ್ಬರು ವೆಂಕಪ್ಪ ನಾಯಕರು ಅಂತ........ ತುಂಬಾ ದೊಡ್ಡ ಮನುಷ್ಯರು, ದೊಡ್ಡ ದಾನಿಗಳು....... ಅವರು ಈಗ ಹೇಗಿದ್ದಾರೆ? ನಿಮಗೇನಾದರೂ ಗೊತ್ತ?  ನಾನು ಅವರನ್ನ ......" ಹೇಳುತ್ತಿರುವ ಮಧ್ಯೆ ಬಾಯಿಹಾಕಿ " ಅವ್ರು ಇನ್ನೆಲ್ಲಿ ಸ್ವಾಮೀ? ಅವರನ್ನ ಆ ಸ್ವಾಮೀ ಕರಕ್ಕಂಡು ಬಿಟ್ಟ.  ಅದಿರ್ಲಿ, ನೀವು ಯಾಕೆ ಅವರನ್ನ ಕೇಳ್ತಾ ಇದ್ದೀರಿ?" ಎಂದು ಮರು ಪ್ರಶ್ನೆ ಹಾಕಿದ. ಈ  ಮಾತು ಕೇಳಿದ ನಗರವಾಸಿಗಳಿಗೆ ಅತ್ಯಂತ ನಿರಾಸೆಯಾಯಿತು.  ಏನೂ ತಿಳಿಯದೆ  ತಲೆ ಕೆಳಕ್ಕೆ ಮಾಡಿ ಕಣ್ಣು ತುಂಬಿಕೊಂಡರು. ಇದನ್ನು ಗಮನಿಸಿದ ಗಾಡಿಯವ " ನಿಮಗೆ ಸಂಬಂಧವಾ? ನಿಮ್ಮ ಕಣ್ಣನೀರು ನೋಡಿದರೆ ನಿಮಗೆ ತುಂಬಾ ಹತ್ತಿರದವರು ಅನಿಸುತ್ತೆ? " ಎಂದು ಅನುಮಾನ ವ್ಯಕ್ತ ಪಡಿಸಿದ.  " ನಾನು ಈ ಊರಿನವನೇ, ಈಗ್ಗೆ 35 ವರ್ಷಗಳ ಹಿಂದೆ ಈ ಊರು ಬಿಟ್ಟು ಪಟ್ನ ಸೇರಿಕೊಂಡವಿ. ವೆಂಕಪ್ಪ ನಾಯಕರು ನನ್ನ ಓದಿಗೆ ಸಹಾಯ ಮಾಡಿ ಚನ್ನಾಗಿ ಓದು ಅಂತ ಪ್ರೋತ್ಸಾಹ ಕೊಟ್ಟರು. ನಾನು ಒಳ್ಳೆ ಕೆಲಸಕ್ಕೆ ಸೇರಿಕೊಂಡು ವಿದೇಶಕ್ಕೆ ಹೋಗಿಬಿಟ್ಟೆ. ಕಳೆದ ಸಾರಿ ಭಾರತಕ್ಕೆ ಬಂದಾಗ ಈ ಹಳ್ಳಿಗೆ  ಬರಲಾಗಲಿಲ್ಲ. ಈ ಸಾರಿ ನಾಯಕರನ್ನ ನೋಡೇ ಹೋಗಬೇಕೆಂದು ಬಂದೆ.  ಆದರೆ, ನಂಗೆ ಅವರನ್ನ ನೋಡಿ ಆಶೀರ್ವಾದ ಪಡೆಯುವ ಭಾಗ್ಯ ಇಲ್ಲವಾಯಿತಲ್ಲ ಎಂದು ದುಃಖ ಆಗ್ತಾ ಇದೆ. " ಎಂದು ಬಿಕ್ಕಳಿಸಿದರು.  ಅಷ್ಟರಲ್ಲಿ ಗಾಡಿ ನಾಯಕರ ಮನೆ ಹತ್ತಿರಕ್ಕೆ ಬಂತು.

" ಸ್ವಾಮೀ......ಇಳೀರಿ. ನಾಯಕರ ಮನೆ ಬಂತು.  ಬನ್ನಿ ಒಳಕ್ಕೆ." ಎಂದು ಆತ್ಮೀಯವಾಗಿ ಒಳಕ್ಕೆ ಕರೆದ.  ಒಳಗೆ ಹೋಗಿ ಕುರ್ಚಿಯ ಮೇಲೆ ಕೂತ ಅವರ ಕಣ್ಣಿಗೆ ಬಿದ್ದದ್ದು ವೆಂಕಪ್ಪ ನಾಯಕರ ದೊಡ್ಡ ಫೋಟೋ. ಕಣ್ಣು ತುಂಬಿ ಬಂತು.  ಎದ್ದು ನಿಂತು ಕೈ ಜೋಡಿಸಿ "ನನ್ನನ್ನ  ಕ್ಷಮಿಸಿ ಬಿಡಿ,  ನಾನು ನಿಮ್ಮನ್ನ ನೋಡಲು ಬಹಳ ವರ್ಷ ಬರಲಿಲ್ಲ. ನೀವು ನನಗೆ ಮಾಡಿದ ಉಪಕಾರ ಹೇಗೆ ತೀರಿಸಲಿ? " ಎಂದು ಗದ್ಗದಿತರಾದರು.  ಅಷ್ಟರಲ್ಲಿ ಮನೆ ಒಳಗಿದ್ದವರೆಲ್ಲ ಹಜಾರಕ್ಕೆ ಬಂದರು.  ಗಾಡಿಯವ "ಇವರು ಅಯ್ಯಂಗೆ ಬೇಕಾದವರು."  ಎಂದು ಪರಿಚಯ ಹೇಳಿದ. ಜೋಬಿಗೆ ಕೈ ಹಾಕಿ ಗಾಡಿ ಬಾಡಿಗೆ ಕೊಡಲು ಪಾಕೆಟ್ ತೆಗಯಲು ಹೋದಾಗ " ಸ್ವಾಮೀ, ನಾನೂ ನಾಯಕರ ಕುಟುಂಬದ ಕುಡಿ. ಏನೋ ಕಾರಣ ಎಲ್ಲವನ್ನು ಕಳೆದುಕೊಂಡು ಈಗ ನಾವೆಲ್ಲಾ ಗತಿ ಕೆಟ್ಟವರಾಗಿದ್ದೇವೆ. ಕೊನೆ ಉಳಿದಿರುವ ಈ ಜೋಡಿ ಎತ್ತು ನಮ್ಮನ್ನ ಸಾಕ್ತಾ ಇತೆ. ನನ್ನ ಹಿರಿಯರು ನಮ್ಮನ್ನ ಕೈ ಬಿಟ್ಟಿಲ್ಲ ಸ್ವಾಮೀ" ಎಂದ .   ಅವರು ದಂಗಾಗಿ ಹೋದರು.  ತಕ್ಷಣ ಅವರ ಮನಸ್ಸಿನಲ್ಲಿ ಇದು ನನಗೆ ಸರಿಯಾದ ಸಮಯ ಇವರಿಗೆ ಸಹಾಯ ಮಾಡಲು ಎಂದು ಜೇಬಿಂದ ಸಾವಿರದ ಹತ್ತು ನೋಟುಗಳನ್ನು ಗಾಡಿಯವನ ಕೈಯಲ್ಲಿಡಲು ಮುಂದೆ ಬಾಗಿದರು.  ಹಾವು ತುಳಿದವನಂತೆ  ನಾಕು ಹೆಜ್ಜ ಹಿಂದೆ ಹೋಗಿ " ನಮ್ಮ ಹಿರಿಯರು ಕೈನೀಡಿ ಕೊಟ್ಟು ಬೆಳೆಸಿದ ನಿಮ್ಮಂತಹವರ ಹತ್ತಿರ ನಾವು ಪಡ ಕೊಂಡರೆ,  ದಾನ ಕೊಟ್ಟಿದ್ದನ್ನ ಮತ್ತೆ ಹಿಂದ್ದಕ್ಕೆ ಪಡೆದ ಪಾಪ ಬರುತ್ತೆ. ನಮ್ಮ ಹಿರಿಯರಿಗೆ ಅವಮಾನ ಮಾಡಿದ ಹಾಗಾಗುತ್ತೆ. ಖಂಡಿತ ಬೇಡ. ನಿಮಗೆ ನಮ್ಮ ಅಯ್ಯನ ಮೇಲೆ ಗೌರವ ಇದ್ರೆ ಇವೆಲ್ಲ ಏನೊ ಬೇಡ." ಎಂದು ಸಾರಾಸಗಟಾಗಿ ತಿರಸ್ಕರಿಸಿದ.  ಇವರ ಬಾಯಿಂದ ಏನೂ ಹೊರಳಲೇ ಇಲ್ಲ.

ದಾನಶೂರರಾಗಲು ಹಣ ಮುಖ್ಯವೋ?  ಮನಸ್ಸು ಮುಖ್ಯವೋ? ನಮ್ಮ ಮನಸ್ಸೇ ಮಿತ್ರ, ನಮ್ಮ ಮನಸ್ಸೇ ಶತ್ರು. ನಾವು ಎಷ್ಟು ದೊಡ್ಡ ಮನಸ್ಸಿನವರು ಆಗಬಹುದು, ಹಾಗೆಯೇ ಚಿಕ್ಕವರೂ ಆಗಬಹುದು.  ನಾವು ಏನು ಚಿಂತಿಸುತ್ತೆವೋ   ಅದೇ ಆಗುತ್ತೇವೆ.  ಎಲ್ಲವು ನಮ್ಮ ಕೈಯಲ್ಲೇ ಇದೆ. ಮನಸ್ಸಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಮೇಲೇರಲು ಸಾಧ್ಯ.  

(ನನ್ನ ಮಿತ್ರರ  ಜೀವನದಲ್ಲಿ ಆದ ಸತ್ಯ ಘಟನೆಯ ಚಿತ್ರಣ )




August 6, 2012

ಸಿಗರೇಟು ಹೇಳಿದ ಬುದ್ಧಿ



ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ. 

ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು.  ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ ಎಲ್ಲರನ್ನು ನಗೆಕಡಲಿನಲ್ಲಿ ಮುಳುಗಿಸಿದ್ದರು.  ನಂತರದ ಕೆಲವು ನಿಮಿಷದಲ್ಲಿ ಒಬ್ಬ ದಂಪತಿಗಳ ಕಡೆ ತಿರುಗಿ " ಏನು ಬಂದಿದ್ದು? " ಎಂದು ಪ್ರಶ್ನಿಸಿದರು.  ಅಲ್ಲಿದ್ದ ಎಲ್ಲ ಗುರುಬಂಧುಗಳ ಗಮನ ಅವರ ಕಡೆಗೆ ಹೊರಳಿತು. ಆ ದಂಪತಿಯಲ್ಲಿ ಒಬ್ಬರು ಮಧ್ಯ ವಯಸ್ಸಿನ ಹೆಂಗಸರು ಎದ್ದು ನಿಂತು " ನಮ್ಮ ಯಜಮಾನರು ತುಂಬಾ ಸಿಗರೇಟು ಸೇದುತ್ತಾರೆ. ಯಾರು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ತಾವು ಅವರಿಗೆ ಸರಿಯಾಗಿ ಬುದ್ಧಿ   ಹೇಳಬೇಕು" ಎಂದು ಸ್ವಲ್ಪ ಅಹಂಕಾರ  ಮಿಶ್ರಿತ ದ್ವನಿಯಲ್ಲಿ ಹೇಳಿದರು. " ನಿಮ್ಮ ಯಜಮಾನರು ಸಿಗರೇಟು ಸೇದುತ್ತಾರೆ, ಯಾರು ಹೇಳಿದರು ಕೇಳಿಲ್ಲ. ಇನ್ನು ನಾನು ಹೇಳಿದರೆ ಕೇಳುತ್ತಾರೋ?   ಇರಲಿ.  ಈವರೆಗೆ ನೀವು ಹೇಳಿದ ಎಲ್ಲಾ ಮಾತನ್ನು ಕೇಳಿರುವ ನಿಮ್ಮ ಯೆಜಮಾನರು ಈ ಮಾತನ್ನು ಯಾಕೆ ಕೇಳಿಲ್ಲಾ?" ಎಂದು ಮರು ಪ್ರಶ್ನೆ ಹಾಕಿದರು. " ಯಾವಮಾತು ಕೇಳ್ತಾರೆ? " ಎಂದು ತನ್ನ ಯಜಮಾನರ ಕಡೆಗೆ ಒಮ್ಮೆ ನೋಡಿದರು.  ಆ ಯಜಮಾನರು ಅವಮಾನವಾದವರಂತೆ ತಲೆ ತಗ್ಗಿಸಿ ಬಿಟ್ಟರು.

" ಅಲ್ಲಮ್ಮಾ.....ನೀವು ಹೇಳಿದಿಕ್ಕೆ ತಾನೇ ಅವರ ಅಪ್ಪ ಅಮ್ಮನ್ನ ಊರಲ್ಲೇ ಬಿಟ್ಟು ಬಂದಿರುವುದು. ನೀವು ಹೇಳಿದ್ದಿಕ್ಕೆ ತಾನೇ ಇದ್ದೊಬ್ಬ ತಂಗಿ ಮದುವೆಗೂ ಏನೂ ಸಹಾಯ ಮಾಡದಲೆ ಎಲ್ಲರ ಹತ್ರ ಬೈಸಿಕೊಂಡರು. ನೀವು ಹೇಳಿದ್ದಕ್ಕೆ ತಾನೇ ಊರಿನ ಜಮೀನು  ಮಾರಿ, ನೀವು ಮನೆ ಕಟ್ಟಿಕೊಂಡು ನಿಮ್ಮ ಅತ್ತೆ ಮಾವನ್ನ ಅದೇ ಹಳೆ ಹಂಚಿನ ಮನೆಯಲ್ಲೇ ಉಳಿಸಿದ್ದು. ಇನ್ಯಾವ ಮಾತು ಕೇಳಬೇಕಮ್ಮ?  ಜೀವನ ಪೂರ್ತಿ ನೀವು ಹೇಳಿದ್ದನ್ನ ಚಾಚು ತಪ್ಪದ ಹಾಗೆ ಕೇಳಿಕೊಂಡೆ ಬಂದಿದ್ದಾರೆ........... ಈಗ ಸಿಗರೇಟು ಸೇದೊದುಕ್ಕೆ ನಿಮ್ಮ ಮಾತು ಕೇಳಲಿಲ್ಲ ಅಂತ ಬೇಜಾರೆ?  ಇದೊಂದಾದರೂ ಅವರ ಸ್ವಾತಂತ್ರದಲ್ಲಿ ಮಾಡಲಿ ಬಿಡಿ." ಎಂದು ಹಾಸ್ಯ ಮಿಶ್ರಿತ ದನಿಯಲ್ಲಿ ಹೇಳಿಬಿಟ್ಟರು.   ಆಕೆಗಂತೂ ದಿಕ್ಕೇ ತೋಚಲಿಲ್ಲ.  ಸೆರಗಿನಿಂದ ಬಾಯಿ ಮುಚ್ಚಿಕೊಂಡು ಎದ್ದು ಹೊರಗೆ ನಡೆದೇ ಬಿಟ್ಟರು.   ಆಕೆಯ ಯಜಮಾನರು ಹೊರಡಲು ಎದ್ದಾಗ " ಏನಪ್ಪಾ.......ಸಿಗರೇಟು ಸೇದೋದು ಒಳ್ಳೆದೆನಪ್ಪಾ?  ನಿನಗೆ ಗೊತ್ತಿಲ್ಲವೇ?  ಇರೋ ಅರೋಗ್ಯ ಕೆಡಸಿ ಕೊಂಡರೆ ನಿನ್ನ ಯಾರಯ್ಯ ನೋಡುತ್ತಾರೆ?  ಅವರೂ ಇಲ್ಲ , ಇವರೂ ಇಲ್ಲ ಅನ್ನೋಹಾಗೆ ಅಗ್ತಿಯಲ್ಲಪ್ಪ........ ಸಿಗರೇಟು ಬೇಡ....... ಬಿಟ್ಟುಬಿಡು."  ಎಂದು ತಂದೆ ಮಗನಿಗೆ ಹೇಳುವ ರೀತಿ ಬುದ್ಧಿವಾದ ಹೇಳಿದರು   ಆ ಯಜಮಾನರ ಕಣ್ಣು ತುಂಬಿ ಬಂತು.  ನೇರ ಬಂದು ಗುರುನಾಥರ ಪಾದಕ್ಕೆರಗಿ ಏನೋ ಹೇಳಬೇಕೆಂದು ಇರುವಾಗಲೇ ಗುರುನಾಥರು " ಏನೂ ಹೇಳಬೇಡ, ನಡಿ......." ಎಂದು ಬೆನ್ನು ತಟ್ಟಿದರು.

 ಅಲ್ಲಿ ನೆರೆದ ನಮಗೆಲ್ಲ ಒಂದು ರೀತಿಯ ಹೇಳಲಾಗದ ಸ್ಥಿತಿ.  ಒಂದೆರಡು ನಿಮಿಷದಲ್ಲಿ ಆದ ಈ ಘಟನೆ ಅದೆಷ್ಟು ಪರಿಣಾಮ ಬೀರಿತೆಂದರೆ ಅಲ್ಲಿದ್ದ ಕೆಲವರಿಗೆ ಚಳಿಯಲ್ಲೂ ಬೆವರಿನ ಅನುಭವ.  ಗುರುನಾಥರು ಇನ್ನು ಯಾರನ್ನು ಉದ್ದೇಶಿಸಿ ಏನು ಹೇಳುತ್ತಾರೋ ಎಂಬ ಆತಂಕ ಕೆಲವರಿಗಾದರೆ, ಮತ್ತೆ ಕೆಲವರು ನಮಗೇನೂ ಹೇಳದಿದ್ದರೆ ಸಾಕು  ಎನ್ನುವಂತೆ ಅಲ್ಲಿನ ಸನ್ನಿವೇಶ ಇತ್ತು. 

ಗುರುನಾಥರು ಈ ಘಟನೆಯಲ್ಲಿ ಇಬ್ಬರಿಗೂ ಬುದ್ಧಿವಾದವನ್ನು ಅವರವರ ಮಾತಿನಲ್ಲೇ ಹೇಳಿದ್ದರು.  ಅವರ ಗುಣದೋಷಗಳನ್ನು  ಸರಿಯಾದ ಸಮಯದಲ್ಲಿ  ಎತ್ತಿ ಹಿಡಿದಿದ್ದರು.  ಇದು ಕೇವಲ ಅವರಿಗೆ ಮಾತ್ರ ಹೇಳಿದ ಬುದ್ಧಿವಾದವಾಗಿರದೆ ಎಲ್ಲರಿಗು ನೀಡಿದ ಎಚ್ಚರಿಕೆ ಘಂಟೆಯಾಗಿತ್ತು.  ಇಲ್ಲಿ ಸಿಗರೇಟು ನೆಪಮಾತ್ರವಾಗಿತ್ತು.

August 4, 2012

ಶವಸಂಸ್ಕಾರ


ಗಂಗಾದತ್ತ ಒಬ್ಬ ಶಿಸ್ತಿನ ವಾಹನ ಚಾಲಕ .  ಈತ ಪುಣೆಯ ಪ್ರಖ್ಯಾತ ಕೈಗಾರಿಕೊದ್ಯಮಿಯಾದ ಶ್ರೀ ಝಾವೇರಿ ಪೂನವಾಲ ಎಂಬುವರ ದುಬಾರಿ ಕಾರಿನ ಚಾಲಕನಾಗಿದ್ದ.  ಈತ ತನ್ನ ಮಾಲಿಕರಿಗಾಗಿ ಹಗಲೂ ರಾತ್ರಿ ದುಡಿಯುತ್ತಿದ್ದ. ಈತ ಮಾಲಿಕರಿಂದಲೂ  ಒಳ್ಳೆಯ ಹೆಸರು ಗಳಿಸಿದ್ದ.  ಗಂಗಾದತ್ತ ತನ್ನ ವಾಹನ ಚಾಲನೆ ಪ್ರಾರಂಭ ಮಾಡಿದ್ದೆ ದುಬಾರಿ ವಾಹನದಿಂದ.  ಒಮ್ಮೆಯೂ ಯಾವ ಒಂದು ಚಿಕ್ಕ ಗೆರೆಯ ಗುರುತೂ ತನ್ನ ಕಾರಿಗೆ ಬೀಳದಂತೆ ಅತ್ಯಂತ ಜೋಪಾನವಾಗಿ ನೋಡಿಕೊಂಡಿದ್ದ.  ಜೀವನದಲ್ಲೂ ಸಾಕಷ್ಟು ಕಷ್ಟಪಟ್ಟು ತನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದ.  ಒಬ್ಬ ಮಗಳನ್ನು ಚಾರ್ಟೆಡ್ ಅಕೌನ್ಟೆಂಟ್ ಕೂಡ ಮಾಡಿದ್ದ.

ಗಂಗಾದತ್ತ ಒಂದು ದಿನ ಹೃದಯಾಘಾತದಿಂದ ನಿಧನಾದ.  ಆ ಸಮಯದಲ್ಲಿ ತನ್ನ ಮಾಲೀಕರು  ಮುಂಬೈನಲ್ಲಿದ್ದರು .  ಈ ವಿಚಾರ ತಿಳಿದ ಮಾಲೀಕರು  ತಕ್ಷಣ ತನ್ನೆಲ್ಲ ಕೆಲಸಗಳನ್ನು ಸ್ತಗಿತಗೊಳಿಸಿ ಮುಂಬೈಗೆ ವಾಪಸು ಬರುವ ಮುಂಚೆ ಗಂಗಾದತ್ತನ ಮನೆಗೆ ಫೋನ್ ಮಾಡಿ ತಾನು ಬರುವವರೆಗೂ ಗಂಗಾದತ್ತನ ಪಾರ್ಥಿವ ಶರೀರವನ್ನು ಇಡಬೇಕೆಂದು ತಾನೇ ಶವಸಂಸ್ಕಾರದ ವ್ಯವಸ್ತೆ ಮಾಡುವುದಾಗಿ ಝಾವೇರಿ ತಿಳಿಸಿದರು .  ಹೆಲಿಕಾಪ್ಟರ್  ಮೂಲಕ ಪೂನಾಕ್ಕೆ ಬಂದರು .

ಬಂದವರೆ  ಗಂಗಾದತ್ತ ಓಡಿಸುತ್ತಿದ ಆ ದುಬಾರಿ ಕಾರಿಗೆ ಪುಷ್ಪಾಲಂಕಾರ ಮಾಡಿಸಿದರು . ಈ ಕಾರಿನಲ್ಲೇ ಗಂಗಾದತ್ತನ ಶವ ಯಾತ್ರೆ ನಡೆಸಬೇಕೆಂದು ಮತ್ತು ಆ ಕಾರಿನ ಚಾಲನೆ ತಾನೇ ಮಾಡುತ್ತೇನೆಂದು ಇದಕ್ಕೆ ಅನುಮತಿ ನೀಡಬೇಕೆಂದು ಝಾವೇರಿ ಗಂಗಾದತ್ತನ ಕುಟುಂಬದವರಲ್ಲಿ ವಿನಂತಿಸಿಕೊಂಡರು .   ಕುಟುಂಬದ ಸದಸ್ಯರು ಮೂಕ ವಿಸ್ಮಿತರಾದರು.  ತಮ್ಮ ಯಜಮಾನ ತನ್ನ ಕಾರಿನ ಚಾಲಕನಿಗೆ ತೋರಿಸುತ್ತಿರುವ ಗೌರವದ ಬಗ್ಗೆ ಏನು ಹೇಳಲೂ ತೊಚದಾದರು.  ಎಲ್ಲರ ಕಣ್ಣುಗಳಲ್ಲಿ  ಧಾರಾಕಾರ ನೀರು ಹರಿಯಿತು. ಗಂಗಾದತ್ತನ ಪಾರ್ಥಿವ ಶರೀರದ ಜೊತೆಯಲ್ಲಿ  ಅಪಾರ ಸಂಖ್ಯೆಯಲ್ಲಿ ಬಂಧು- ಮಿತ್ರರು ಬಂದು ಸಂಸ್ಕಾರ ಕಾರ್ಯ ನೆರವೇರಿಸಲು ಸಹಕರಿಸಿದರು. ಮನ ಮಿಡಿಯುವ  ಮತ್ತು ಗೌರವಪೂರ್ಣ ಅಂತ್ಯ ಸಂಸ್ಕಾರ ನೆರವೇರಿತು.  ಝಾವೇರಿ ತೋರಿಸಿದ ಔದಾರ್ಯ ಎಲ್ಲರ ಬಾಯಲ್ಲೂ ಹರಿದಾಡಿತು.
                             

ಅಲ್ಲಿ ಬಂದಿದ್ದ ಒಬ್ಬ ಗಣ್ಯರು ಝಾವೆರಿಯವರ  ಔದಾರ್ಯವನ್ನು ಮೆಚ್ಚುತ್ತ ಇದು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಕೇಳಿದರು. ಆಗ ಝಾವೆರಿ ಕೊಟ್ಟ ಉತ್ತರ ಮಾತ್ರ ಅತ್ಯಂತ ಮನೋಜ್ಞವಾಗಿತ್ತು.
" ಗಂಗಾದತ್ತ ಒಬ್ಬ ಆದರ್ಶವ್ಯಕ್ತಿ.  ಆತನು ತನ್ನ ಜೀವನ ಆರಂಭಿಸಿದ್ದು ಈ ಕಾರಿನಲ್ಲೇ, ಅಂತಿಮ ಯಾತ್ರೆಯು ಈ ಕಾರಿನಲ್ಲೇ ಆಗ ಬೇಕೆಂದು  ನನಗನಿಸಿತು.  ಇಷ್ಟು ದಿನ ನನನ್ನು ಕರೆದುಕೊಂಡು ಹೋಗುತ್ತಿದ್ದ ಗಂಗಾದತ್ತನನ್ನು ಈ ದಿನವಾದರೂ ನಾನು  ಆತನನ್ನು ಕರೆದು ಕೊಂಡು ಹೋಗಬೇಕೆಂದು ನನಗೆ ಅನಿಸಿತು .  ಪ್ರತಿಯೊಬ್ಬರೂ ಹಣ ಸಂಪಾದನೆ ಮಾಡುತ್ತಾರೆ, ಇದರಲ್ಲಿ ಯಾವ ದೊಡ್ದಸ್ತಿಕೆಯು ಇಲ್ಲ. ಆದರೆ, ಈ ಹಣ ಸಂಪಾದನೆ ಮಾಡಲು ಸಹಕರಿಸಿದ ಪ್ರತಿಯೊಬ್ಬರನ್ನು ಕೃತಜ್ಞತೆಯಿಂದ ಸ್ಮರಿಸುವುದೇ ದೊಡ್ಡಸ್ತಿಕೆ.  ನಾನು ನನ್ನ ಗಂಗಾದತ್ತನಿಗೆ ಸಲ್ಲಿಸಬಹುದಾದ ಅಂತಿಮ ನಮನ ಮತ್ತು ಗೌರವ ಎಂದರೆ ಇದೆ.  ಇದರಲ್ಲಿ ನನ್ನ ದೊಡ್ಡತನವೇನೂ ಇಲ್ಲ " ಎಂದು ವಿನಯದಿಂದ ಹೇಳಿದರು.

ನಿಜವಾದ ದೊಡ್ಡತನ ಮತ್ತು ಶ್ರೀಮಂತಿಕೆ, ಮಾನವೀಯ ಮೌಲ್ಯಗಳಲ್ಲಿ ಇದೆಯೇ ಹೊರತು ಬಂಗಲೆ, ಕಾರು, ಅಂತಸ್ತು, ಅಧಿಕಾರದಲ್ಲಿ ಖಂಡಿತ ಇಲ್ಲ ಎಂಬ ಸತ್ಯವನ್ನು ಸ್ವತಹ ಮಾಡಿ ತೋರಿಸಿದ ಝಾವೆರಿ ಉನ್ನತ ಸ್ಥಾನದಲ್ಲಿ ನಿಂತ ಆದರ್ಶ ವ್ಯಕ್ತಿ ಯಾಗಿದ್ದಾರೆ.

( ಪುಣೆಯಿಂದ ನನ್ನ ಮಿತ್ರರು  ಈ ವಿಚಾರ ತಿಳಿಸಿದನ್ನು ಓದುಗರ ಗಮನಕ್ಕೆ ತಂದಿದ್ದೇನೆ.)

August 3, 2012

ಸುಂದರ ಕನಸು



ಲಾವೊತ್ಸೆ ಎಂಬ ಸಂತ ಕವಿ ಸುಂದರವಾದ ಕನಸನ್ನು ಕಾಣುತ್ತಾ, ಈ ಭೂಮಿ ಹೇಗೆ ಇದ್ದರೆ  ಸ್ವರ್ಗವಾಗುತ್ತದೆ ಎಂಬುದನ್ನು ತನ್ನ ಒಂದು ಪದ್ಯದಲ್ಲಿ ವರ್ಣಿಸುತ್ತಾನೆ.

" ದೇಶ ದೊಡ್ಡದಿರಬೇಕು. ಜನ ಮಿತವಾಗಿರಬೇಕು. ನಾವು ಎಷ್ಟೇ ಬಳಸಿದರೂ ಕಡಿಮೆಯಾಗದೇ ಸಮೃದ್ಧವಾಗಿರಬೇಕು. ಜನರು ಜೀವನವನ್ನು ಪ್ರೀತಿಸಬೇಕು. ನಿತ್ಯದೂಟವನ್ನು ಸವಿಯುವುದರಲ್ಲಿ ಸಂತೋಷಿಯಾಗಿರಬೇಕು. ತನ್ನ ಕೆಲಸದಲ್ಲಿ ಸ್ವರ್ಗೀಯ ಆನಂದ ಅನುಭವಿಸಬೇಕು. ತನ್ನ ಪಾಲಿಗೆ ಬಂದ ಮನೆ, ಹೆಂಡತಿ, ಮಕ್ಕಳು, ಬಂಧು - ಬಾಂಧವರು, ಗೆಳೆಯರು ಇವರೊಡನೆ ಆತನ ಹೃದಯ ಹರ್ಷಿತ ವಾಗಿರಬೇಕು.ಸಕಲಜೀವರಲ್ಲಿ ಮತ್ತು ಮಾನವರಲ್ಲಿ ಸಮ ಪ್ರೇಮಿಯಾಗಿದ್ದು, ತಾನು ಮಾಡುವ ಪ್ರತಿ ಕೆಲಸವೂ ದೈವಿಸಾಧನೆ ಎನಿಸಬೇಕು. "   ಎಂತಹ ಅದ್ಭುತ ಕನಸು.

ಇಂತಹ ಕನಸು ಹುಟ್ಟಿದ ಈ ಭೂಮಂಡಲ ಹೇಗಿತ್ತು?  ಹಚ್ಚ ಹಸಿರಿನ ವನಸಿರಿ. ಫಲಪುಷ್ಪಗಳ ಕಾಡುಗಳು, ಫಲವತ್ತಾದ ಮಣ್ಣು, ಈ ಭೂಮಿಯನ್ನು ಸಿಂಗರಿಸಿತ್ತು. ಹರಿಯುವ ನದಿ, ಸಾಗರ, ಆಕಾಶದೆತ್ತರಕ್ಕೆ ಇರುವ ಪರ್ವತ ಶ್ರೇಣಿ, ಬೆಟ್ಟಗಳ ಸಾಲು ಸಾಲು. ಕಾಡು ಗುಡ್ಡಗಳ ಮಧ್ಯೆ ಸ್ವಚ್ಚಂದವಾಗಿ ವಿಹರಿಸುತ್ತಿದ್ದ ಮೃಗ, ಪಕ್ಷಿ, ಜೀವ-ಜಂತುಗಳು.  ಋತುಗಳ ಆಧಾರಿತ ಹವಾಮಾನ,  ಇಷ್ಟೆಲ್ಲಾ ಇರುವ ಈ ಭೂಮಂಡಲ ಯಾವ ಸ್ವರ್ಗಕ್ಕೆ ಕಡಿಮೆಯಾಗಿತ್ತು ?

ಆದರೆ,  ಇಂದು ನಾವು ಬದುಕುತ್ತಿರುವ ಈ  ಭೂಮಂಡಲವನ್ನು ನಾವು ಅದೆಷ್ಟು ಹದಗೆಡೆಸಿದ್ದೇವೆ?  ಸೌಂದರ್ಯವನ್ನು ಅದೆಷ್ಟು ಹಾಳುಮಾಡಿದ್ದೇವೆ?  ಅದೆಷ್ಟು ಜೀವಿಗಳಿಗೆ ಹಿಂಸಿಸಿದ್ದೇವೆ?  ಎಷ್ಟೊಂದು ಪ್ರಾಣಿ ಸಂಕುಲವನ್ನೇ ನಾಶಮಾಡಿ, ಕೆಲವನ್ನು ಈ ಭೂ ಮಂಡಲದಿಂದಲೇ ಮರೆ ಮಾಡಿದ್ದೇವೆ.   ಸ್ವರ್ಗದಂತೆ ಇದ್ದ  ಈ ಭೂಮಿ  ಈಗ ನರಕವಾಗಿದೆ. ಏಕೆ ಹೀಗೆ?

ಮಾನವನ ದುರಾಸೆಯ ಮನದಲ್ಲಿ ಸರ್ವ ವಿನಾಶಕ ಶಸ್ತ್ರ ಅಸ್ತ್ರಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಈ ಭೂ ಮಂಡಲವನ್ನು  ತುಂಬಿ ಬಿಟ್ಟಿದೆ. ಒಂದು ಬೀಜ ಹಾಕಿ ಲಕ್ಷಾಂತರ ಬೀಜ ಬೆಳೆವ ಮಣ್ಣನ್ನು ವಿಷಮಯವನ್ನಾಗಿ   ಮಾಡಿದೆ. ಬೆಳೆದ ಹಣ್ಣನ್ನು ತಿನ್ನದೇ, ಕೊಳೆಸಿ, ಹುಳಿಗೊಳಿಸಿ, ಕುಡಿದು  , ಕುಣಿದು , ಉನ್ಮತ್ತನಾಗಿ ಹುಚ್ಚನಾಗಿದ್ದಾನೆ. ನಾಲಗೆಯ ರುಚಿಗೆ  ಸತ್ವಯುತ ಆಹಾರದ ಬದಲಿಗೆ ಖಾದ್ಯ ಮೋಹಕ್ಕೆ ಬಿದ್ದು ರೋಗಗಳ ಗೂಡಾಗಿದ್ದಾನೆ . ಜೊತೆಗೆ ಸಮಾಜವನ್ನು ರೋಗದ ಕೂಪಕ್ಕೆ ತಳ್ಳುತ್ತಿದ್ದಾನೆ  . ಮತ ಭಿನ್ನತೆ ಹುಟ್ಟು ಹಾಕಿ , ಜಾತಿ-ಮತ-ಧರ್ಮಗಳ ವಿಷ ಬೀಜ ಬಿತ್ತಿ, ಧರ್ಮ ರಕ್ಷಣೆಯ ಹೆಸರಲ್ಲಿ ಘೋರ ಯುದ್ಧ ಮಾಡಿಸಿ,ರಕ್ತದ ಕೊಡಿ ಹರಿಸಿದ್ದಾನೆ. ಇಂತಹ  ಸಮಯದಲ್ಲಿ ಸುಂದರ ಕನಸು ನನಸಾಗುವುದೇ ? ನನಸಾಗಲು ಏನು ಮಾಡಲು ಸಾಧ್ಯ?

ಭಗವಂತ ನಮಗಾಗಿ ನೀಡಿರುವ ಸಕಲವೂ ಸುಂದರ, ಸುಖಕರವೆ ಆಗಿದೆ .  ಆದರೆ ಅದರ ಬಳಕೆಯಲ್ಲಿ ನಾವು ಎಡವುತ್ತಿದ್ದೇವೆ.  ಈ ದೇಹ ಭಗವಂತನ ಕಾಣಿಕೆ.  ಎಲ್ಲವೂ ಪವಿತ್ರವೇ.  ಈ ದೇಹವನ್ನು ಆನಂದ ಸ್ವರೂಪವನ್ನಾಗಿ ಮಾಡಿ ಈ ಜಗತ್ತಿಗೆ ಕಳುಹಿಸಿದ್ದಾನೆ. ಇದನ್ನು ಅಪವಿತ್ರ ಮಾಡಿದ್ದೇವೆ   ಈ ಜಗತಿನಲ್ಲಿರುವುದನ್ನು ಪಡೆದು, ಜಗತ್ತಿಗೆ ಒಳಿತು ಮಾಡುವುದನ್ನು ಚಿಂತಿಸಬೇಕಾಗಿದೆಯಲ್ಲವೇ ? ಈ ಜೀವನವನ್ನು ಸ್ವರ್ಗೀಯ, ದಿವ್ಯ ಜೀವನವನ್ನಾಗಿ ಪರಿವರ್ತಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ, ಅಲ್ಲವೇ? ಈ ಜಗತ್ತಿನ ಒಳ್ಳೆಯದನ್ನು ಅನುಭವಿಸಿ, ಇತರರಿಗೂ ಅದನ್ನು ಉಳಿಸಿ ಬೆಳೆಸಬೇಕಲ್ಲವೇ?.  ಪರಸ್ಪರ ಪ್ರೀತಿ ಪ್ರೇಮಗಳು ಬೆಸೆದಾಗ ಈ ಭೂಮಿಯೇ ಸ್ವರ್ಗವಾಗುತ್ತದೆ. ಆಗ ನಾವು ಸ್ವರ್ಗಕ್ಕಾಗಿ ತವಕಿಸುವ ಪ್ರಶ್ನೆಯೇ ಬರುವುದಿಲ್ಲ ಅಲ್ಲವೇ?  ಸರ್ವೇ ಜನಾಃ ಸುಖಿನೋ ಭವಂತು ಎಂಬುದು ತನಗೆ ತಾನೇ ಉದ್ಧಾರವಾಗುತ್ತದೆ.  ಸುಂದರ ಕನಸು ನನಸಾಗುವ ಲಕ್ಷಣ ತನಗೆ ತಾನೇ ಗೋಚರವಾಗುತ್ತದೆ.

ಇಂತಹ ಉದಾತ್ತ ವಿಚಾರಗಳು ಮೊದಲು  ನಮ್ಮ ಮನೆ, ಮನಸ್ಸಿನಿಂದಲೇ ಒಂದೊಂದು ಚಿಕ್ಕ ಪ್ರಯತ್ನಗಳಾಗಿ   ಪ್ರಾರಂಭವಾಗಬೇಕು. ನನ್ನೊಬ್ಬನಿಂದ ಏನಾಗುತ್ತೆಂಬ ಧೋರಣೆ ಬಿಡೋಣ.   ಒಂದು  ಉತ್ತಮ ವಿಚಾರ, ಒಂದು ಸನ್ನಡತೆ, ಒಂದು ಉತ್ತಮ ಪ್ರಯತ್ನ    ಮಾಡಲು ಪ್ರಾರಂಭಿಸೋಣ.   ಸುಂದರ ಕನಸನ್ನು ಸಾಕಾರ ಮಾಡಲು ಮೊದಲ ಹೆಜ್ಜೆ ಇಡೋಣ.

ಈ ಚಿಂತನೆಗೆ ನೀವೇನು ಹೇಳುತ್ತಿರಾ?

August 2, 2012

ಗೃಹಪ್ರವೇಶ


ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ   ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್ದರು.  ಆ ಸಮಯದಲ್ಲಿ ನಡೆದ ಸಂಭಾಷಣೆಯ ಸಾರವಿದು.

ಗುರುನಾಥರು : ಏನ್ಸಾರ್, ಬಂದಿದ್ದು?

ಗುರುಬಂಧು : "ಏನಿಲ್ಲ, ಮನೆಯೆಲ್ಲ ಮುಗಿಯಿತು, ಇನ್ನು ಗೃಹ ಪ್ರವೇಶ ಮಾಡಿದರಾಯಿತು. ಅದಕ್ಕಾಗಿ ತಮ್ಮಲ್ಲಿ ಒಂದು ಒಳ್ಳೆ ದಿನ ನಿಷ್ಕರ್ಷೆ ಮಾಡಿಕೊಂಡು ಹೋಗೋಣ ಎಂದು ಬಂದೆವು." ಎಂದು ಹೇಳಿ ಗಂಡ ಹೆಂಡತಿ ಇಬ್ಬರು ಗುರುನಾಥರ ಪಾದಕ್ಕೆ ನಮಸ್ಕರಿಸಿದರು.

ಗುರುನಾಥರು: " ಗೃಹಪ್ರವೇಶವೇ? ಅದನ್ನು ಈಗಾಗಲೇ ಹಲವಾರು ಜನ ಮಾಡಿದ್ದಾರಲ್ಲ?  ಅಲ್ಲವೇ? " ಎಂದು ನಮ್ಮ ಕಡೆ ನೋಡಿ ಕಣ್ಣು ಮಿಟುಕಿಸಿ ನಸುನಕ್ಕರು.

ಗುರುಬಂಧು   ಪತ್ನಿ : "ಇಲ್ಲ ಗುರುಗಳೇ, ಗೃಹಪ್ರವೇಶ ಇನ್ನು ಆಗಿಲ್ಲಾ." ಎಂದರು ಆತುರದಲ್ಲಿ.

ಗುರುನಾಥರು : " ಏನಮ್ಮಾ ಹೀಗೆ ಹೇಳುತ್ತಾ ಇದ್ದಿಯಾ?  ಗಾರೆ ಕೆಲಸದವನು, ಲೈಟ್   ಕೆಲಸದವನು, ನಲ್ಲಿ ಕೆಲಸದವನು, ಬಣ್ಣ ಬಳಿಯುವವನು, ಇನ್ನು ಪ್ರತಿ ದಿನಾ, ನೀವು ನಿಮ್ಮ ಸ್ನೇಹಿತರು ಎಲ್ಲರು ಆ ಗೃಹದ ಪ್ರವೇಶ ಮಾಡಿದಿರಲ್ಲಾ!  ಇನ್ನ್ಯಾವ ಗೃಹಪ್ರವೇಶನಮ್ಮಾ? " ಎಂದು ಸ್ವಲ್ಪ ನಗೆಯಾಡುತ್ತಲೇ  ಪ್ರಶ್ನೆ ಮಾಡಿದರು.

ಗುರು ಬಂಧು ಮತ್ತು ಪತ್ನಿ : ಏನೂ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತು " ಅವರೆಲ್ಲ ಬರದೆ ಇದ್ದರೆ ಕೆಲಸ ಹೇಗಾಗುತ್ತೆ?"ಎಂದು ನಗುತಂದುಕೊಂಡು  ನಕ್ಕರು.

ಗುರುನಾಥರು : " ಮತ್ತೆ ಇನ್ನು ಯಾರಿಗೆ ಗೃಹಪ್ರವೇಶ? ಎಲ್ಲರು ಬಂದ ಹಾಗೆ ಆಗಿದೆಯಲ್ಲ?" 

ಗುರುಬಂಧು ಪತ್ನಿ : " ನೆಂಟರು ಇಷ್ಟರು, ಬಂಧು ಬಳಗ ಎಲ್ಲರನ್ನು ಒಳ್ಳೆ ದಿನ ಕರೆದು ಊಟ ಹಾಕಬೇಡವೆ?" ಎಂದರು ಆಕೆ.

ಗುರುನಾಥರು  : " ಎಲ್ಲರನ್ನು ಕರೆದು ಊಟ ಹಾಕಬೇಕು!  ಮನೆ ಎಷ್ಟು ದೊಡ್ಡದಾಗಿದೆ, ಎಷ್ಟು ಚಂದವಾಗಿದೆ, ಎಂದು ಎಲ್ಲರಿಗು ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು. ಅಲ್ಲವೇ ?" ಎಂದು ನಮ್ಮ ಕಡೆ ತಿರುಗಿ ನಗುತ್ತ " ನಿಮ್ಮ ಅತ್ತೆಯವರನ್ನ ಏನು ಮಾಡುತ್ತೀರಿ? " ಎಂದರು. 

ಗುರುಬಂಧು  ಪತ್ನಿ.: " ಅವರನ್ನೂ ಕರೆದುಕೊಂಡು ಬರುತ್ತೇವೆ."

ಗುರುನಾಥರು  " ಅಂದರೆ,  ಅವರು ಈಗ ನಿಮ್ಮ ಜೊತೇಲಿ ಇಲ್ಲವೇ ? " ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.

ಗುರುಬಂಧು ಪತ್ನಿ : ಈ ವಿಷಯ ಇವರಿಗೆ ಹೇಗೆ ಗೊತ್ತಾಯಿತು ಎಂದು ಅನುಮಾನಿಸುತ್ತ,   ಸ್ವಲ್ಪ ಮೌನದ ನಂತರ " ಇಲ್ಲ" ಎಂದರು.

ಗುರುನಾಥರು: " ಅಲ್ಲಮ್ಮಾ, ಮನೆದೇವರನ್ನು ಹೊರಗಡೆ ಇಟ್ಟು ಕಲ್ಲಿಗೆ  ಪೂಜೆ ಮಾಡಿದರೆ ಏನು ಭಾಗ್ಯ ಬರುತ್ತಮ್ಮ?  ನಿಮ್ಮ ಅತ್ತೇನ ವೃದ್ಧಾಶ್ರಮಕ್ಕೆ ಸೇರಿಸಿ ನೀವು ತುಂಬಾ ದೊಡ್ಡ ಮನೆ ಗೃಹ ಪ್ರವೇಶ ಮಾಡ್ತೀರಾ? ಹಸು ನಿಮ್ಮ ಮನೆಗೆ ಬಂದರೆ ಒಳ್ಳೇದು, ಆದರೆ ನಿಮ್ಮ ಅತ್ತೆ ?  ಏನು ಅನ್ಯಾಯ? ಮೊದಲು ನಿಮ್ಮ ಅತ್ತೆಯವರನ್ನ ಮನೆಗೆ ಕರೆದುಕೊಂಡು ಬನ್ನಿ. ಅವರಲ್ಲಿ ಕ್ಷಮಾಪಣೆ ಕೇಳಿ ಜೊತೆಯಲ್ಲಿ ಇಟ್ಟು ಕೊಳ್ಳಿ.  ಅವರ ಆಶೀರ್ವಾದ ಮೊದಲು ಪಡೆಯಿರಿ. ಅವರು ನಿಮ್ಮ ಮನಗೆ ಬಂದರೆ ಗೃಹಪ್ರವೇಶ ಆದಂತೆ. ಅದು ಬಿಟ್ಟು ನೀವು ಸಾವಿರ ಜನನ್ನ ಕರೆದು ಊಟ ಹಾಕಿ,ಉಡುಗೊರೆ   ಕೊಟ್ಟರು ಏನೂ ಪ್ರಯೋಜನವಿಲ್ಲ. ನಡೀರಿ, ನಡೀರಿ. " ಎಂದು ಕಟುವಾಗಿ ಹೇಳಿ ಮುಖ ತಿರುಗಿಸಿಬಿಟ್ಟರು.

ಅಲ್ಲಿದ್ದವರಿಗೆಲ್ಲ ಪರಮಾಶ್ಚರ್ಯ ಆಯಿತು.  ಗುರುಬಂಧು ಮತ್ತು ಅವರ ಪತ್ನಿಗೆ ತುಂಬಾ ಅವಮಾನವಾದಂತೆ ಆಯಿತು. ತಲೆ ತಗ್ಗಿಸಿ ನಿಂತು ಬಿಟ್ಟರು.  ಮತ್ತೇನಾದರೂ ಹೇಳಬಹುದೆಂದು ಅವರು ಸ್ವಲ್ಪ ಸಮಯ ಕಾದರು. ಗುರುನಾಥರು ಅವರಕಡೆ ನೋಡಲೇ ಇಲ್ಲ.  ಸ್ವಲ್ಪ ಸಮಯದ ನಂತರ " ಇನ್ನು ಯಾಕೆ ಇಲ್ಲೇ ಇದ್ದೀರಾ? ಹೋಗಿ ಮೊದಲು ಆಕೆಯನ್ನ ಮನೆಗೆ ಕರೆದು ತನ್ನಿ, ಆಮೇಲೆ ಬನ್ನಿ." ಎಂದು ಕಡ್ಡಿ ಎರಡು ತುಂಡು ಮಾಡಿದವರಂತೆ ಹೇಳಿಬಿಟ್ಟರು. ಅವರು ತಲೆ ತಗ್ಗಿಸಿ ಅಲ್ಲಿಂದ  ಹೊರಟರು.

 "ತಂದೆ ತಾಯಿಯ ಸೇವೆ ಮಾಡದೆ, ಏನು ಮಾಡಿದರು ಅದು ಕೇವಲ ಜನ ಮೆಚ್ಚಿಸಲು ಮಾತ್ರ. ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ , ದೇವರನ್ನು ಮೆಚ್ಚಿಸಬಹುದು.  ಅಲ್ಲವೇ ಸಾರ್? " ಎಂದರು ಗುರುನಾಥರು.

ಈಗ್ಗೆ ನಾಲ್ಕಾರು ವರ್ಷಗಳ ಹಿಂದೆ ಹೇಳಿದ ಆ ಮಾತು ಇಂದಿಗೂ ನನ್ನನ್ನು ಯಾವಾಗಲು ಎಚ್ಚರಿಸುತ್ತಲೇ ಇರುತ್ತದೆ.  ಯಾರಾದರು ಗೃಹಪ್ರವೇಶದ ಆಮಂತ್ರಣ ನೀಡಲು ಬಂದಾಗ ಈ ಘಟನೆ ತಟ್ಟನೆ ಜ್ಞಾಪಕಕ್ಕೆ ಬರುತ್ತದೆ.