May 10, 2012

ಆತುರ ...............ಒಂದಷ್ಟು ಹರಟೆ

ಆತುರ ...............ಒಂದಷ್ಟು ಹರಟೆ 




 ಆತುರದ ಸ್ವಭಾವವೆ ಒಂದು ಕಳಂಕ. ಆತುರದ ಸ್ವಭಾವದಿಂದ ಆಗಬಾರದ ಅನಾಹುತಗಳು ಘಟಿಸಿಬಿಡುತ್ತದೆ. ಒಂದೇ ಒಂದು ಕ್ಷಣ ನಿಧಾನ ಮಾಡಿದ್ದೆ ಆದರೆ, ಒಂದು ಕ್ಷಣ ತಮ್ಮ ನಿರ್ಧಾರವನ್ನು ಮುಂದೆ  ಹಾಕಿದರೆ ಸಾಕು,  ಆಗಬಹುದಾದ ಅನಾಹುತ ತಪ್ಪಿಸ ಬಹುದು.  ಇಲ್ಲವಾದರೆ, ಕೆಲವೊಂದು ಪ್ರಸಂಗದಲ್ಲಿ ಜೀವನ ಪರ್ಯಂತ ವಿಷಾದ ಪಡಬೇಕಾದ ಸಂಧರ್ಭ ಒದಗಿ ಬಿಡಬಹುದು.  "ಆತುರಗಾರನಿಗೆ ಬುದ್ಧಿ ಕಡಿಮೆ" ಯೆನ್ನುವ ವಿಚಾರ ಎಲ್ಲರಿಗೂ ತಿಳಿದಿದೆ.  ಆದರು,   ನಾವು ದಿನನಿತ್ಯದ ಬದುಕಿನಲ್ಲಿ ಕೆಲವೊಮ್ಮೆ ಆತುರದ ನಿರ್ಧಾರ ಮಾಡಿ ಅಥವಾ ಆಶ್ವಾಸನೆ ನೀಡಿ ಪರಿತಪಿಸುತ್ತೇವೆ. 

ರಾಮಾಯಣದ ಒಂದು ಪ್ರಸಂಗ ಇಲ್ಲಿ ಪ್ರಸ್ತುತ  ಎನಿಸುತ್ತದೆ .ಕಾಮಾತುರನಾದ  ದಶರಥ ಮಹಾರಾಜ ತನ್ನ ರಾಣಿಯಾದ ಕೈಕೇಯಿಗೆ ಆತುರದಲ್ಲಿ ಕೊಟ್ಟ ಮಾತಿನ ಫಲವಾಗಿ ಇಡಿ ರಾಮಾಯಣವೇ ನಡೆದುಹೋಯಿತು.  ದುಡಿಕಿನ ಸಮಯದಲ್ಲಿ ಈತನಿಗಿದ್ದ  ವಿದ್ಯೆ, ಪಾಂಡಿತ್ಯ ಎಲ್ಲವು ಮರೆಯಾಗಿ, ಮೂಢತನ ಪ್ರದರ್ಶಿಸಿದ. ಈತನಲ್ಲಿದ್ದ ಧಾರ್ಮಿಕ ಮನೋಭಾವ, ಆತ್ಮೊನ್ನತಿಯ ಸಂಸ್ಕಾರ ಎಲ್ಲವು ಆ ಕ್ಷಣದಲ್ಲಿ ಮರೆತು ಹೋಯಿತು. ಕ್ಷಣಮಾತ್ರದ ಸುಖದ ಚಪಲತೆಗಾಗಿ ಈತ ಎಂತಹ ಘೋರ ಅನ್ಯಾಯವೆಸಗಿದ ಎನ್ನುವುದು ಚರಿತ್ರಾರ್ಹ.  ಕೈಕೇಯಿಯ ಮನವೊಲಿಸುವ ಸಲುವಾಗಿ ಆತುರದಿಂದ ದಶರಥ ಹೇಳಿದ ಮಾತುಗಳು ಎಷ್ಟು ಅಸಹ್ಯ ತರಿಸುತ್ತದೆ ಎನ್ನುವುದಕ್ಕೆ  ಈ ಮಾತುಗಳೇ ಸಾಕ್ಷಿ. " ಯಾರನ್ನು ಬೇಕಾದರೂ, ಯಾವ ಅಪರಾಧವಿಲ್ಲದಿದ್ದರು ಕೊಲ್ಲಿಸುತ್ತೇನೆ. ಕೊಲ್ಲಿಸಬೇಕಾದ ಯಾವ ಕಡು ಅಪರಾಧಿಯನ್ನು ಕೈಕೇಯಿ ಸಲುವಾಗಿ ಬಿಡುಗಡೆ ಮಾಡುತ್ತೇನೆ." ಇತ್ಯಾದಿ  ಇತ್ಯಾದಿಯಾಗಿ ಅಸಂಬದ್ಧ ಮಾತುಗಳನ್ನು ಆಡುತ್ತಾನೆ. ಕೈಕೇಯಿಯ ಬೇಡಿಕೆ ಮುಂದಿಟ್ಟ   ಕೆಲವೇ ಕ್ಷಣಗಳಲ್ಲಿ ಘೋರವಾದ ದುಃಖವನ್ನು ಅನುಭವಿಸುತ್ತಾನೆ. ಕೈಕೇಯಿ ಕಾಲಿಗೆ ಬಿದ್ದು ತನ್ನ ಬೇಡಿಕೆಯನ್ನು ವಾಪಸ್ಸು ಪಡೆಯುವಂತೆ ಬೇಡಿಕೊಳ್ಳುತ್ತಾನೆ. ತನ್ನನ್ನು ತಾನೇ ದಂಡಿಸಿಕೊಳ್ಳುತ್ತ  ಪಶ್ಚಾತ್ತಾಪದಿಂದ ಕೊರಗುತ್ತಾನೆ, ಆಡಿದ ಮಾತಿನ ಸಲುವಾಗಿ ಭರಿಸಲಾರದ ದುಃಖದಿಂದ ಜೀವತ್ಯಾಗ ಮಾಡುತ್ತಾನೆ. ರಾಮಾಯಣದ ಕರ್ತ್ರುವಾಗುತ್ತಾನೆ 

ದಶರಥ ತಾನು  ಕೊಟ್ಟ ಆತುರದ  ಮಾತನ್ನು ಶ್ರೀ ರಾಮನಿಗಾಗಿ ತಪ್ಪಿಸಬಹುದಿತ್ತು. ಕೈಕೇಯಿಯನ್ನು ದಂಡಿಸಬಹುದಿತ್ತು. ಇಡಿ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸ ಹೊರಟ ರಾಣಿಯನ್ನು ದಂಡನೆ ಮಾಡಿದ್ದರೆ ಅದು ಧರ್ಮಸಮ್ಮತವು ಆಗುತ್ತಿತು.  ಆದರೆ ಇದನ್ನು ದಶರಥನಿಗೆ  ಮಾಡಲಾಗಲಿಲ್ಲ. ಆ ಕ್ಷಣದಲ್ಲಿ ಘಟಿಸಿದ ಘಟನೆಯೇ ಬೇರೆಯಾಯಿತು. " ಮಾತು ಆಡಿದರೆ ಹೇಗೆ ವಾಪಸ್ಸು ಬಾರದೋ ಹಾಗೆ,  ಮುತ್ತು ಒಡೆದರೆ ಹೇಗೆ ಜೋಡಿಸಲು ಸಾಧ್ಯವಾಗದೋ ಹಾಗೆ,  ಬಾಣ ಬಿಟ್ಟರೆ ಹೇಗೆ ಪುನಃ ಹಿಂದೆ ತರಲು ಸಾಧ್ಯವಿಲ್ಲವೋ ಹಾಗೆ " ಎಲ್ಲವು ನಡೆದು ಹೋಯಿತು.

ಇವೆಲ್ಲವೂ ವಿಧಿಯ ವಿಧಾನವೋ, ಪೂರ್ವ ನಿಯೋಜಿತವೋ ಅದು ನಂತರದ  ಮಾತು. ಆದರೆ ಒಂದಂತು ಸ್ಪಷ್ಟ.  ಮನುಷ್ಯ ಬೇಕಾದ ಸಮಯದಲ್ಲಿ ತಾಳ್ಮೆ ಕಳೆದುಕೊಂಡರೆ, ನಂತರದಲ್ಲಿ ಹೀಗಾಗಬೇಕಾಗಿತ್ತು ಎಂದು  ಸಾವಿರ ಸಲ  ಯೋಚನೆ ಮಾಡಿದರು ಪ್ರಯೋಜನಕ್ಕೆ ಬಾರದು. ಆತುರದ ಕೈಗೆ ಬುದ್ಧಿಯನ್ನು ಕೊಟ್ಟರೆ ಅದರಿಂದ ಆಗುವ ಅನಾಹುತ ಮಾತ್ರ ತಪ್ಪಿಸಲು ಸಾಧ್ಯವಿಲ್ಲ.  ಮಾಡುವ ಕೆಲಸವನ್ನು ಯೋಚಿಸಿ ಮಾಡುವ, ನೀಡುವ ಆಶ್ವಾಸನೆಯನ್ನು ಸ್ವಲ್ಪ ಚಿಂತಿಸಿ , ನಿರ್ಧಾರ ತೆಗೆದುಕೊಳ್ಳುವ  ಮುಂಚೆ ಪರಾಮರ್ಶೆ ಮಾಡುವ ಮನಸ್ಸು ಮಾಡುವಲ್ಲಿ ನಾವು ಸಫಲರಾದರೆ ಹೆಚ್ಚಿನ ನೆಮ್ಮದಿ ನಮ್ಮದಾಗಬಹುದು.  ಈ ಬಗ್ಗೆ ಚಿಂತನೆ ಮಾಡಿದರೆ ಚಿಂತೆ ಕಡಿಮೆಯಾಗಬಹುದು, ಇದಕ್ಕೆ ನೀವು ಏನು ಹೇಳುತ್ತೀರಾ?........

ಹೆಚ್ ಏನ್ ಪ್ರಕಾಶ್
10 05 2012

2 comments:

  1. ಕಾಮಾತುರಾಣಾಂ ನ ಲಜ್ಜಂ ನ ಭಯಂ...ಎಂದು ಹೇಳುತ್ತಾರೆ...ಹಾಗೆಯೇ..ಕಾರಣವಿಲ್ಲದ ಆತುರ ಲಜ್ಜೆ ಹಾಗು ಭಯ ಎರಡನ್ನು ತರುತ್ತದೆ....ಹಲವಾರು ಸಲ ನಿಧಾನ ಎಷ್ಟು ಸಮಸ್ಯೆಯನ್ನ ಬಗೆಹರಿಸುತ್ತದೆ...ಅಮೇರಿಕಾದಲ್ಲಿ ಬಹುಮಹಡಿ ಕಟ್ಟಡ ದಾಳಿಗೆ ತುತ್ತಾಗಿ ಕುಸಿದಾಗ..ಎಷ್ಟೋ ಜನ ಮೃತಪಟ್ಟರು...ಆದ್ರೆ ಅದಕ್ಕಿಂತ ಹೆಚ್ಚು ಜನ..ಚಿಕ್ಕ ಚಿಕ್ಕ ಕಾರಣಗಳಿಂದ ತಡವಾಗಿ ಜೀವ ಉಳಿಸಿಕೊಂಡರು..ಶೂ ದಾರ ಕಟ್ಟಲು ನಿಧಾನ, ಸರಿಯಾದ ಸಮಯಕ್ಕೆ ಬಸ್ ಸಿಗದೇ ಇರುವುದು ಅಥವಾ ತಲುಪದೇ ಇರುವುದು..ಈ ತರಹ ನಾನ ಕಾರಣಗಳಿಗೆ ಜೀವ ಉಳಿಯಿತು..ಇಲ್ಲಿ ಆತುರ ಇರಬೇಕು ಆದರೆ...ಅತಿ ಉತ್ಸಾಹದಿಂದ ಆತುರ ಕೆಟ್ಟು ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬಾರದು..ನಮ್ಮ ಮನಸು ಹೇಳುವುದು ಕೇಳಬೇಕು..ಮೆದುಳು ಹೇಳಿದಲ್ಲ..ಯಾಕೆಂದರೆ...ಮನಸಿಗೆ ನೀನು ಯಾರು ಎಂದು ಗೊತ್ತಿರುತ್ತದೆ...ಮೆದುಳಿಗೆ ಅದನ್ನು ಬಿಟ್ಟು ಪ್ರಪಂಚದ ವಿಷಯವೆಲ್ಲ ಗೊತ್ತಿರುತ್ತೆ....ಮನಸಿನ ಮಾತು ಹತ್ತಿರ...ಮೆದುಳಿನ ಮಾತು ದೂರ ಇದು ಜೀವನದ ಮಂತ್ರವಾಗಿದ್ದರೆ..ಆತುರದಿಂದ ಆಗುವ ಅವಘಡಗಳನ್ನ ತಪ್ಪಿಸಬಹುದು..ಇಲ್ಲವೇ ಸುಧರಿಸಿಕೊಳ್ಳಬಹುದು...ನಿಮ್ಮ ಲೇಖನ ಅರ್ಥಗರ್ಭಿತ

    ReplyDelete
  2. ಆತ್ಮೀಯ ಶ್ರೀಕಾಂತನಿಗೆ,
    ನಿನ್ನ ಸ್ಪಷ್ಟ ಅಭಿಪ್ರಾಯಕ್ಕೆ ಧನ್ಯವಾದಗಳು.
    ಪ್ರಕಾಶ್

    ReplyDelete