March 29, 2019

ದೃಢ ನಂಬಿಕೆ ಮತ್ತು ವಿಶ್ವಾಸ
ಡಾ . ಬೆನ್ಸನ್, ಬಾಸ್ಟನ್ ನಗರದ ಪ್ರಖ್ಯಾತ ವೈದ್ಯರು. ತಮ್ಮ ನಲವತ್ತು ವರ್ಷದ ಸಂಶೋಧನೆಯ ಸಾರಾಂಶವನ್ನು ೨೬ ನೇ ಜೂನ್ ೧೯೭೯ ರ " ದಿ ಹಿಂದೂ " ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಡಾಕ್ಟರ್ ಗಳ ವ್ಯಕ್ತಿತ್ವ, ಅವರು ನೀಡುವ ಸಲಹೆ ಸೂಚನೆಗಳ ಪ್ರಭಾವ, ರೋಗಿಗಳು ಡಾಕ್ಟರ್ ಗಳಲ್ಲಿ ಇರಿಸುವ ವಿಶ್ವಾಸ, ಯಾವ ಔಷಧೀಯ ದ್ರವ್ಯ ಗುಣವಿಲ್ಲದ ಔಷಧಿಗಳನ್ನೂ ಸೇವಿಸಿಯೂ " ಈ ಮಾತ್ರೆ ಬಹಳ ಒಳ್ಳೆಯ ಗುಣ ಹೊಂದಿದೆ. ಒಳ್ಳೆ ಕೆಲಸ ಮಾಡುತ್ತದೆ." ಎಂದು ನಂಬಿ ಎದೆನೋವು, ಹೃದಯರೋಗಗಳಂತಹ ಖಾಯಿಲೆಯಿಂದ ಪಾರಾದ ಸತ್ಯ ಘಟನೆಗಳ ಬಗ್ಗೆ ಡಾಕ್ಟರ್ ವಿವರಿಸುತ್ತಾರೆ. ಇಂತಹ ಅನೇಕ ಘಟನೆಗಳಲ್ಲಿ ಇದೊಂದು.
ದೆಹಲಿ ಸಮೀಪದ ಒಂದು ಹಳ್ಳಿಯಲ್ಲಿ ಹೊಲದ ಕೆಲಸಗಾರನಾಗಿ ದುಡಿಯುತ್ತಿದ್ದ ಒಬ್ಬಾತ ಆಸ್ತಮಾ ರೋಗದಿಂದ ನರಳುತ್ತಿದ್ದ. ರೋಗ ಉಲ್ಬಣಿಸಿದಾಗ ನಗರಕ್ಕೆ ಹೋಗಿ ಡಾಕ್ಟರ್ ಬಳಿ ತನ್ನ ಸಮಸ್ಯೆ ಹೇಳಿಕೊಂಡು ಔಷಧ ನೀಡುವಂತೆ ಬೇಡಿದ. ಈತನ ಪರಿಸ್ಥಿಯನ್ನು ನೋಡಿದ ಡಾಕ್ಟರ್ ಸಂಯಮದಿಂದ ಪರೀಕ್ಷಿಸಿ, ತಮ್ಮ ಕ್ಲಿನಿಕ್ ಚೀಟಿಯಲ್ಲಿ ಔಷಧವನ್ನು ಬರೆದು " ಈ ಚೀಟಿಯಲ್ಲಿರುವ ಔಷಧವನ್ನು ಹದಿನಾಲ್ಕು ಭಾಗವಾಗಿ ಮಾಡಿ ಬೆಳಿಗ್ಗೆ ಸಂಜೆ ಬಿಡದಂತೆ ಸೇವನೆ ಮಾಡು. ಒಂದು ವಾರ ಕಳೆದುಕೊಂಡು ಬಾ. ನಿನ್ನ ಆರೋಗ್ಯ ಖಂಡಿತಾ ಸುಧಾರಣೆ ಆಗಿರುತ್ತದೆ. " ಎಂದು ವಿಶ್ವಾಸ ತುಂಬಿ ಕಳುಹಿಸಿದರು. ಆತ ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ, ಒಂದು ವಾರದ ನಂತರ ಡಾಕ್ಟರ್ ಬಳಿಗೆ ಬಂದು ಸಂತಸದಿಂದ " ನೀವು ಕೊಟ್ಟ ಚೀಟಿ ಔಷಧಿ ರಾಮಬಾಣದಂತೆ ಕೆಲಸಮಾಡಿದೆ. " ಎಂದ. ಡಾಕ್ಟರ್ ಸಂತೋಷದಿಂದ " ಹೌದೇ! ಆ ಚೀಟಿಕೊಡು ನೋಡೋಣ. " ಎಂದರು. ಆದರೆ, ಅವರಿಗೊಂದು ಆಶ್ಚರ್ಯ ಕಾಡಿತ್ತು. ಆ ರೋಗಿಯು ಡಾಕ್ಟರ್ ಕೊಟ್ಟ ಆ ಚೀಟಿಯನ್ನೇ ಹದಿನಾಲ್ಕು ಸಮಭಾಗ ಮಾಡಿ ದಿನಕ್ಕೆ ಎರಡು ಬಾರಿಯಂತೆ ಸೇವಿಸಿಬಿಟ್ಟಿದ್ದ. ಡಾಕ್ಟರ್ ಕ್ಷಣಕಾಲ ಚಕಿತರಾಗಿ ಪರೀಕ್ಷೆಗೆ ಮುಂದಾಗಿ , ವಿವರವಾಗಿ ಪರೀಕ್ಷಿಸಿದರು. ಆತನ ರೋಗ ತಕ್ಕಮಟ್ಟಿಗೆ ಗುಣವೂ ಆಗಿತ್ತು. ಆ ಡಾಕ್ಟರ್ ಕ್ಷಣಕಾಲ ಚಿಂತಿಸಿ " ಈಗ ನೀನು ಗುಣಮುಖನಾಗಿದ್ದೀಯ, ಆಹಾರದಲ್ಲಿ ಕ್ರಮವಾಗಿರು " ಎಂದು ಹೇಳಿ ಕಳುಹಿಸಿದರು.
" ರೋಗಿ ಇರಿಸುವ ನಂಬಿಕೆಗೆ ಆಘಾತ ಉಂಟುಮಾಡದೇ ಇದ್ದರೆ ಸಾಕು " ಎನ್ನುವುದು ಡಾಕ್ಟರ್ ಅಭಿಪ್ರಾಯವಾಗಿದೆ. ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಕೆಲಸಮಾಡಿದ ಶಕ್ತಿ ಅಥವಾ ನಿಯಮ ಎಂದರೆ ದೃಢ ನಂಬಿಕೆ ಮತ್ತು ವಿಶ್ವಾಸ. ಈ ದೃಢವಾದ ನಂಬಿಕೆಯು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಉತ್ಪಾದನೆ ಮಾಡುತ್ತದೆ ಎಂದು ಡಾ. ಬೆನ್ಸನ್ ಖಚಿತವಾಗಿ ಅಭಿಪ್ರಾಯ ಪಡುತ್ತಾರೆ.
ನಂಬಿಕೆ
ನಂಬಿಕೆಯೆನ್ನುವುದು ಅತಿ ಅದ್ಭುತವಾದ ವಿಚಾರ. " ನಂಬಿ ಕೆಟ್ಟವರು ಇಲ್ಲವೋ. ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ" ಎನ್ನುತ್ತಾರೆ ಪುರಂದರ ದಾಸರು. ನಂಬಿಕೆಯೆನ್ನುವುದು ಒಂದು ಬಗೆಯ ದಿವ್ಯವಾದ ಔಷಧಿ. ನಂಬಿದವನ ಬಾಳು ಸುಸೂತ್ರ. ನಂಬದೇ ಬದುಕುವುವವನ ಬಾಳು ಘೋರ ಎಂದರೆ ತಪ್ಪೇನೂ ಇಲ್ಲ. ಏಕೆಂದರೆ, ನಂಬದೆ ಹೋದವರು ಜೀವನದ ಪ್ರತಿಕ್ಷಣವೂ ಒಂದಲ್ಲಾ ಒಂದು ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಕಷ್ಟ ನಷ್ಟಗಳಿಗೆ ಕೊರಗುತ್ತಲೇ ಇರುತ್ತಾರೆ. ನಂಬಿದವನಿಗೆ ಕಷ್ಟ ನಷ್ಟ ಇಲ್ಲವೆಂದೇನೂ ಅಲ್ಲ, ಆದರೆ ಕಷ್ಟ ನಷ್ಟಗಳು ಹೆಚ್ಚು ಬಾಧಿಸುವುದಿಲ್ಲ.
ನಾವೊಂದು ವಾಹನದಲ್ಲಿ ಹೋಗುವಾಗ ಆ ಚಾಲಕನ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಆ ಚಾಲಕ ನಮಗೆ ಅಪರಿಚಿತನೆ ಆದರೂ ತಾತ್ಕಾಲಿಕವಾಗಿಯಾದರೂ ನಂಬಬೇಕಾಗುತ್ತದೆ. ಎಲ್ಲೋ ಇದ್ದ ಹೆಣ್ಣಿಗೆ ಎಲ್ಲೋ ಇರುವ ಗಂಡಿಗೆ ಮದುವೆ. ಈ ದಂಪತಿಗಳು ಬಂಧನದಲ್ಲಿ ಬಂಧಿಯಾಗುವಾಗ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಬದುಕಬೇಕಾಗುತ್ತದೆ. ಇಲ್ಲಿ ಕೂಡಾ ಈ ದಂಪತಿಗಳ ನಂಬಿಕೆಯೇ ಮುಖ್ಯವಾಗುತ್ತದೆ. ನಾವು ತಿನ್ನುವ ಆಹಾರವನ್ನು ಯಾವುದೇ ಭಯವಿಲ್ಲದೆ ಸೇವಿಸುವುದು ಆರೋಗ್ಯಪೂರ್ಣವಾಗಬೇಕಾದರೆ ನಂಬಿಕೆ ಮುಖ್ಯವಾಗುತ್ತದೆ. ದಾರಿಯಲ್ಲಿ ನಡೆಯಬೇಕಾದರೂ ಸುರಕ್ಷಿತವಾಗಿ ಸೇರಬೇಕಾದ ಸ್ಥಳವನ್ನು ತಲಪುತ್ತೇನೆ ಎಂಬ ಭರವಸೆ ಮತ್ತು ನಂಬಿಕೆಯಿಂದಲೇ ನಡೆಯುತ್ತೇವೆ. ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಿಗೆ ತೋರಣಗಳಿಂದ ಸಿಂಗರಿಸುವುದರಿಂದ ಒಳ್ಳೆಯ ಭಾವನೆಗಳು ಜಾಗೃತವಾಗುತ್ತವೆಂದು ಭರವಸೆಯಿಂದ ನಂಬುತ್ತೇವೆ. ನಮ್ಮೆದುರು ಹಿರಿಯರು ಕಂಡಾಗ ನಾವು ಶಿರಬಾಗಿ ನಮಸ್ಕರಿಸುವುದರಿಂದ ನಮಗೆ ಒಳ್ಳೆಯ ಆಶೀರ್ವಾದ ದೊರೆತು ನಮಗೆ ಒಳ್ಳೆಯದಾಗುತ್ತೆಂದು ನಂಬುತೇವೆ. ನಮ್ಮ ಕಾಲು ಸೊಟ್ಟಗಾಗಿ, ಶಕ್ತಿ ಕಳೆದುಕೊಂಡು , ಕಣ್ಣು ಮಂಜಾಗಿದ್ದರೂ ನಮ್ಮ ಕೈಯಲ್ಲಿರುವ ಊರುಗೋಲಿನ ಮೇಲೆ ನಾವು ಭರವಸೆ ಇಡುತ್ತೇವೆ, ನಂಬುತ್ತೇವೆ.
ಭಗವಂತನ ನಾಮಸ್ಮರಣೆಯಲ್ಲಿ ಭರವಸೆ ಇಡುತ್ತಾ ಪ್ರತಿಕ್ಷಣ ಭಗವಂತನನ್ನು ನೆನೆಯುತ್ತಾ ಇರುವಾಗ ನಮ್ಮೆಲ್ಲಾ ಕಷ್ಟ ನಿಷ್ಟೂರಗಳು ದೂರವಾಗುವುದಿಲ್ಲವೇ? ಎಂದು ನಂಬುತ್ತೇವೆ. ನಮಗೆ ನಂಬಿಕೆ ಇಡಲು ಒಂದಲ್ಲ ಎರಡಲ್ಲ ಸಾವಿರಾರು ದಾರಿಗಳಿವೆ. ಈ ಎಲ್ಲಾ ದಾರಿಗಳಲ್ಲಿ ಸಂಪೂರ್ಣ ವಿಶ್ವಾಸದಿಂದ, ಶರಣಾಗತಿಯ ಭಾವದಲ್ಲಿ ಮುನ್ನೆಡೆದಾಗ ನಮ್ಮ ನಂಬಿಕೆ ಸುಳ್ಳಾಗುವುದೇ ಇಲ್ಲ. ನಂಬಿದವರಿಗೆ ಒಂದೇ ದಾರಿ, ನಂಬದೆ ಇರುವವರಿಗೆ ಸಾವಿರಾರು ದಾರಿ ಕಾಣುತ್ತವೆ. ನಂಬಿಕೆ ಇರುವವರಿಗೆ ಜೀವನ ಸುಖಕರ, ನಂಬಿಕೆ ಇಲ್ಲದವನಿಗೆ ಪ್ರತಿಕ್ಷಣವೂ ಆತಂಕ.
-- 
ನಿತ್ಯ ಮುಕ್ತರು
ಈ ಬದುಕೇ ಒಂದು ನಾಟಕ ರಂಗ. ಇದರಲ್ಲಿ ನಾವೇ ಪಾತ್ರಧಾರಿಗಳು. ನಮ್ಮ ಸ್ವರೂಪ, ಬಣ್ಣ, ಮೇಕಪ್ ,ಉಡಿಗೆ ಮತ್ತು ತೊಡಿಗೆಗಳೆಲ್ಲವೂ ಸಂಧರ್ಭ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ನಾವು ಸಿರಿತನದಲ್ಲಿ ಒಂದು ಸ್ವರೂಪ, ಬಡತನದಲ್ಲಿ ಮತ್ತೊಂದು ರೂಪ, ಸೋತಾಗ ಒಂದು ವೇಷ, ಗೆದ್ದಾಗ ಮತ್ತೊಂದು ವೇಷ. ಹೀಗೆ ನಮ್ಮ ಸ್ವರೂಪ, ವೇಷಗಳನ್ನು ಬದಲಿಸುತ್ತಲೇ ಇರುತ್ತೇವೆ. ಆದರೆ, ಕೆಲವರು ಮಾತ್ರ ನಿತ್ಯ ಜೀವನದಲ್ಲಿ ಬರುವ ಸುಖ - ದುಃಖ, ಸಿರಿತನ - ಬಡತನ, ಸೋಲು - ಗೆಲುವುಗಳೆಲ್ಲವೂ ಇದ್ದೇ ಇರುತ್ತದೆ ಎಂದು ಭಾವಿಸುತ್ತಾ ಇಂತಹ ಸಮಯದಲ್ಲಿ ಏನೇ ಬಂದರೂ ಸ್ವಲ್ಪವೂ ವಿಚಲಿತರಾಗದೆ ತಮ್ಮ ಮನಸ್ಸನ್ನು ಏಕರೂಪದಲ್ಲಿ ಇಟ್ಟುಕೊಂಡಿರುತ್ತಾರೆ. ಶ್ರೀ ಕೃಷ್ಣ ಹೇಳಿದಂತೆ " ಸುಖ ದುಃಖ ಸಮೇಕೃತ್ವಾ ಲಾಭಾ ಲಾಭೌ ಜಯಾ ಜಯಃ " ಎನ್ನುವಂತೆ ಇರುತ್ತಾರೆ. ಇಂತಹವರನ್ನೇ ಮಹಾತ್ಮರು, ಮುಕ್ತಾತ್ಮರು ಎನ್ನುವುದು.
ಈ ದೇಹದ ದೃಷ್ಟಿಯಿಂದ ನಾವು ಸ್ತ್ರೀ - ಪುರುಷ, ಬಡವ - ಬಲ್ಲಿದ, ಸಶಕ್ತ - ಅಶಕ್ತ, ಹೀಗೆಲ್ಲಾ ವಿಂಗಡಿಸುತ್ತೇವೆ. ನಾವು ಎಲ್ಲರಲ್ಲೂ ಇಲ್ಲ , ಸಲ್ಲದ ಬೇಧ ಎಣಿಸುತ್ತೇವೆ. ಜಾತಿ ಪಂಗಡಗಳಾಗಿ ವಿಂಗಡಿಸುತ್ತೇವೆ. ಇದರ ಫಲವಾಗಿ ನಾವು ಸಮಾಜದಲ್ಲಿ ದುಃಖವನ್ನು ತಂದುಕೊಳ್ಳುತ್ತೇವೆ. ಜೀವನ ಪೂರ್ತಿ ಮಾನಸಿಕ ನೆಮ್ಮದಿ ಇಲ್ಲವೆಂದು, ಶಾಂತಿ ಬೇಕೆಂದು ಗೋಳಾಡುತ್ತೇವೆ. ಆದರೆ, ಪರಮಾತ್ಮನ ದೃಷ್ಟಿಯಿಂದ ನಾವೆಲ್ಲಾ ಒಂದೇ. ಇದನ್ನು ಅರಿಯದೆ ಸುಮ್ಮನೆ ಬಡಿದಾಡುತ್ತೇವೆ.
ದೀಪವು ಅರಮನೆಯಲ್ಲಿರಲಿ, ಗುಡಿಸಿನಲ್ಲಿ ಇರಲಿ ಅದು ಒಂದೇ ರೀತಿಯಲ್ಲಿ ಬೆಳಗುತ್ತಿರುತ್ತದೆ. ದೀಪದ ಅರಿವಿನಂತೆ ಪರಮಾತ್ಮನ ಅರಿವು ಯಾರಿಗಿದೆಯೋ, ಅವರು ಈ ಆಸೆ - ಆಮಿಷಗಳ ಸುಳಿಗೆ ಸಿಕ್ಕಿ ಬೀಳದೆ ಜೀವನವನ್ನು ಬಂದಂತೆ ಅನುಭವಿಸುತ್ತಾ ಶಾಂತಿ ಮತ್ತು ನೆಮ್ಮದಿಯಿಂದ ಬದುಕುತ್ತಾರೆ. ಇವರು ಕಷ್ಟಗಳಿಗೆ ಎದೆ ಗುಂದದೆ, ಸುಖಗಳಿಗೆ ಹಿಗ್ಗದೇ ಒಂದೇ ಸಮನೆ ಬಾಳಿ ಬದುಕುತ್ತಾರೆ. ಇಂತಹವರ ಬದುಕೇ ನಮಗೆ ಆದರ್ಶವಾಗಬೇಕು. ಇಂತಹವರ ಒಡನಾಟವೇ ನಮಗೆ ಮಾರ್ಗದರ್ಶನವಾಗಬೇಕು. ಇಂತಹವರ ಮಾತುಗಳೇ ನಿತ್ಯ ಸತ್ಸಂಗವಾಗಬೇಕು. ಇಂತಹ ಮಹಾತ್ಮರುಗಳೇ ನಿತ್ಯ ಮುಕ್ತರು.
ಸುಖ - ದುಃಖ
" ಸುಖದಿಂದ ಸುಖವು ಎಂದಿಗೂ ಸಿಗುವುದಿಲ್ಲ." ಎನ್ನುತ್ತದೆ ವ್ಯಾಸ ಭಾರತ. ಅಂದರೆ, ಈ ಜೀವನದಲ್ಲಿ ಯಾವುದೂ ಶಾಶ್ವತವೆನ್ನುವ ಸುಖವಾಗಲಿ, ದುಃಖವಾಗಲಿ ಇಲ್ಲ. ಈ ಸುಖ ದುಃಖಗಳು ಬಂದು ಹೋಗುವಂತವುಗಳು. ಇದನ್ನು ತಿಳಿಯದೆ ನಾವುಗಳು ಸುಖ ಬಂದಾಗ ಹಿರಿ ಹಿರಿ ಹಿಗ್ಗಿ, ಕಷ್ಟ ಬಂದಾಗ ಕುಗ್ಗಿ ಹೋಗುತ್ತೇವೆ. ವ್ಯಾಸ ಮಹರ್ಷಿಗಳು ಸುಖವನ್ನು ಪಡೆಯುವ ವಿಧಾನವನ್ನು ತಿಳಿಸುತ್ತಾರೆ. " ಕಷ್ಟ ಪಟ್ಟ ನಂತರ ಸಿಗುವ ಸುಖವೇ ಸುಖ, ಯಾವ ರೀತಿ ಮರಳಿನಲ್ಲಿ ಎಣ್ಣೆ ತೆಗೆಯಲು ಸಾಧ್ಯವಿಲ್ಲವೋ, ಅದೇ ರೀತಿ ಸುಖದಿಂದ ಸುಖ ಪಡೆಯಲು ಸಾಧ್ಯವಿಲ್ಲ. " ಎನ್ನುತ್ತಾರೆ.
ಸುಖ ಎನ್ನುವುದು ಯಾವುದೇ ವಸ್ತುವಿನಲ್ಲಿಲ್ಲ. ಹಾಗೇನಾದರೂ ಸುಖವು ವಸ್ತುವಿನಲ್ಲಿ ಇರುವುದಾದರೆ, ಆ ವಸ್ತುವಿನಿಂದ ಎಲ್ಲರಿಗೂ, ಎಲ್ಲ ಕಾಲಕ್ಕೂ ಸುಖ ಸಿಗಬೇಕಲ್ಲವೇ? ಒಂದು ಕಾಲಕ್ಕೆ ಸುಖ ಎನಿಸಿದ್ದು ಇನ್ನೊಂದು ಕಾಲಕ್ಕೆ ಸುಖ ಎನಿಸದೆ ಕಷ್ಟ ಎನಿಸುತ್ತದೆ. ಚಳಿಗಾಲದಲ್ಲಿ ಸಿಗುವ ಬಿಸಿನೀರಿನ ಸುಖ , ಬೇಸಿಗೆಯಲ್ಲಿ ಸಿಗದು. ಈ ಸುಖ ದುಃಖ ಎನ್ನುವುದು ಒಂದು ಮನೋಧರ್ಮ. ಮನಸ್ಸು ಸುಖವಾಗಿದ್ದರೆ, ಈ ಜಗತ್ತೇ ಸುಂದರವಾಗಿ ಕಾಣುತ್ತದೆ.
ಸುಖಕ್ಕೂ ಒಂದು ಕಾರಣವಿರುತ್ತದೆ, ಅದೇ ರೀತಿ ದುಃಖಕ್ಕೂ ಒಂದು ಕಾರಣವಿರುತ್ತದೆ. ಈ ಕಾರಣ ನಮಗೆ ಹೆಚ್ಚಿನಪಾಲು ತಿಳಿದೇ ಇರುತ್ತದೆ. ಸುಖವನ್ನು ಪಡೆದ ಕಾರಣ ಕಷ್ಟದ ಜೀವನವಾಗಿದ್ದರೆ, ದುಃಖ ಬಂದಾಗ ಮನಸಿಗೆ ಹೆಚ್ಚು ನೋವಾಗುವುದಿಲ್ಲ. ಬಿಸಿಲಿನಲ್ಲಿ ನಡೆದವನಿಗೆ ಮರದ ನೆರಳು ದೊರೆತಾಗ ಅದೇ ಅವನ ಪರಮ ಸುಖ. ಇದೆ ರೀತಿ ಪ್ರಾಮಾಣಿಕ ಬದುಕು ನಡೆಸಿದವನಿಗೆ ಸುಖ ದುಃಖ ಇವೆರಡು ಸಮಾನ ಪ್ರಕಾರದ್ದಾಗಿರುತ್ತದೆ. ಭಗವಂತನಲ್ಲಿ ನಂಬಿಕೆ, ಶ್ರದ್ಧೆ ಇರುವವನಿಗೆ ದುಃಖ ಸುಖಗಳು ಭಗವಂತನ ವರಪ್ರಸಾದವಾಗುತ್ತದೆ. ಆಗ ಸುಖ ದುಃಖವಾಗಲಿ ಸಾಧಕನನ್ನು ಬಾಧಿಸುವುದಿಲ್ಲ.

February 2, 2016

ಮಾತು-ಮೌನ-ಧ್ಯಾನ

ಮಾತು-ಮೌನ-ಧ್ಯಾನ
ಧ್ಯಾನದಲ್ಲಿ ಹಲವಾರು ವಿಧಾನಗಳವೆ. ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸರಳ ವಿಧಾನವೂ ಕೂಡಾ ಧ್ಯಾನದಲ್ಲಿ ಒಂದು; ಪ್ರತಿಕ್ಷಣದಲ್ಲಿ ಸಂಭವಿಸುವ ಶಬ್ಧ ಸ್ಪೋಟಗಳು ನಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. "ಮನಸ್ಸು ಶಬ್ಧಗಳ ಮತ್ತು ಪದಗಳ ಸಂತೆ. ಈ ಪ್ರಕ್ರಿಯೆಯು ದಿನವಿಡೀ ನಡೆಯುತ್ತಿರುತ್ತದೆ. ನಮ್ಮ ಮನಸ್ಸಿನೊಳಗೆ ಆಲೋಚನೆಗಳೇ ತುಂಬಿಕೊಂಡಿರುತ್ತದೆ. ಈ ಪದಗಳ ಭಾರದಿಂದ ಮನಸ್ಸು ನಿತ್ರಾಣಗೊಳ್ಳುತ್ತದೆ. ಆಗ ಸ್ವ-ಜ್ಞಾನದ ಅನುಭವವೇ ಆಗುವುದಿಲ್ಲ. ಏಕೆಂದರೆ, ಈ ಸ್ವಜ್ಞಾನ ಇರುವುದು (sub conscious)ಶಬ್ದ ಮತ್ತು ಪದಗಳ ಆಚೆಗೆ"

ವಿಜ್ಞಾನ ಭೈರವ ತಂತ್ರದ 24ನೇ ಅಧ್ಯಾಯದಲ್ಲಿ  " ಮೊದಲು ಅಕ್ಷರಗಳಾಗಿ,ನಂತರ ಶಬ್ಧಗಳಾಗಿ,ಆಮೇಲೆ ಭಾವವಾಗಿ.... ಕೊನೆಗೆ ಎಲ್ಲವನ್ನೂ ಪಕ್ಕಕ್ಕೆ ಇರಿಸಿ ಸ್ವತಂತ್ರವಾಗಿ ಕೇಳಿಸಿಕೊ. ಪ್ರತಿ ಶಬ್ಧದ ಶಬ್ಧಗಳನ್ನು ಕೇಳಿಸಿಕೋ."  ಈ ರೀತಿಯ ಧ್ಯಾನಕ್ಕೊ೦ದು ವಿಧಾನವನ್ನು ಸೂಚಿಸುತ್ತಾರೆ. ಬೆನ್ನು ನೇರವಾಗಿ, ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ತೋಳುಗಳನ್ನು ಅಗಲಿಸಿ ಕುಳಿತುಕೊಳ್ಳಬೇಕು. ಇಡೀ ದೇಹ ಸಡಿಲವಾಗಿರಬೇಕು. ಮುಖದಲ್ಲಿ ಮ೦ದಹಾಸವಿರಬೇಕು. ಕಿವಿಯ ಮೇಲೆ ಬೀಳುತ್ತಿರುವ ಎಲ್ಲಾ ಶಬ್ಧಗಳನ್ನು ಕೇಳಿಸಿಕೊಳ್ಳುತ್ತಾ ಕುಳಿತುಕೊಳ್ಳಬೇಕು. ಯಾವುದೇ ಶಬ್ಧಕ್ಕೆ ಪ್ರತಿಕ್ರಿಯೆ ನೀಡುವುದು ಬೇಡ. ಎಲ್ಲವೂ ಕೇಳಿಸಲಿ. ನಾವಾಗಿಯೇ ಕೇಳಿಸಿಕೊಳ್ಳುವ ಪ್ರಯತ್ನ ಬೇಡ. ತ೦ತಾನೆಕೇಳುವೂದು ಕೇಳಲಿ. ಯಾವುದೇ ಶಬ್ಧಗಳ ವಿಮಶೆ೯ಬೇಡ. ಎಲ್ಲಿ೦ದಲಾದರೂ ಬರಲಿ, ಸುಮನೆ ಕೇಳಿಸಿಕೊಳ್ಳಿ. ಇದು ಅದರ ಪಾಡಿಗೆ ಅದು ನಡೆಯಲಿ; ಕೇಳುವಿಕೆಯಲ್ಲಿ ಸ್ವತಂತ್ರ ನಿರಂತರತೆ, ಇರಲಿ. ಅದರಲ್ಲೇ ಇನ್ನಷ್ಟು ಆಳವಾಗಿ..... ಮತ್ತಷ್ಟು ಆಳವಾಗಿ..... ಆಳಕ್ಕೆ ಹೋದಷ್ಟೂ ಶಬ್ಧದೊಳಗಣ ನಿಶ್ಯಬ್ಧಗೋಚರವಾಗುತ್ತದೆ...... ಆಳವಾಗಿ ಅನುಭವಿಸುತ್ತಾ ಹೋದ೦ತೆ.... ತಿಳಿಯಾದ ಮೌನ.... ನಿಶ್ಯಬ್ಧ.... ಈ ನಿಶ್ಯಬ್ಧದ ಆಲಿಸುವಿಕೆಯೂ ತಂತಾನೆ ಆಗುತ್ತಿರುತ್ತದೆ....... ಹಾಗೆಯೇ ಆಗಲಿ.
   
ಈ ದಿವ್ಯ ಮೌನದ ಸ್ಪಶ೯ ಕೆಲವೇ ಕ್ಷಣಕ್ಕಾದರೂ ನಮ್ಮದಾಗುತ್ತದೆ. ನಮ್ಮನ್ನು ನಾವು ಧ್ಯಾನಕ್ಕೆ ಅಪಿ೯ಸಿಕೊಂಡಷ್ಟು ಮೌನದ ಸ್ಪಶ೯ ದಿನದಿಂದ ದಿನಕ್ಕೆ ನಮ್ಮೊಳಗೆ ಈಜಲು  ಪ್ರಾರಂಭ ಮಾಡುತ್ತದೆ. ಆಗ ಧ್ಯಾನಸ್ಥ ಸ್ಥಿತಿ ಮೀನಿನಂತೆ ಸಹಜವಾಗಿ, ಹಗುರವಾಗಿ ನಮ್ಮೊಳಗೆ ತೇಲುತ್ತದೆ. ನಾವು ಶಬ್ಧಗಳನ್ನು ಆಲಿಸುತ್ತಾ ಸಾಗಿದೆವು; ನಂತರದಲ್ಲಿ ಶಬ್ಧ ಮಾಯವಾಗಿ ಮೌನದ ಸ್ಪರ್ಶವಾಯಿತು. ನಾವು ಶಬ್ಧಗಳನ್ನು ತಡೆಯಲು ಪ್ರಯತ್ನಿಸಲಿಲ್ಲ; ಶಬ್ಧ ಮಾಯವಾಗಿ ಮೌನದ ಸ್ಪರ್ಶವಾಯಿತು. ನಾವು ಶಬ್ಧಗಳನ್ನು ತಡೆಯಲಿಲ್ಲ; ಅಳಿಸಲಿಲ್ಲ, ಶಬ್ಧಗಳು ಎಲ್ಲೂ ಹೋಗಿರಲಿಲ್ಲ; ಅವು ಇದ್ದಲ್ಲೇ ಇದ್ದವು; ಆದರೆ, ನಮ್ಮ ಸ್ಥಿತಿ ಮಾತ್ರ ಬದಲಾಯಿತು. ನಿತ್ಯ ಜೀವನದಲ್ಲೂ ಕೂಡಾ ನಾವು ಸುಮ್ಮನೆ ಕೇಳಿಸಿ ಕೊಳ್ಳುವುದರಲ್ಲೇ, ನೂರಾರು ಸಮಸ್ಸೆಗಳಿಗೆ  ಪರಿಹಾರ ದೊರೆಯುತ್ತದೆ. ಧ್ಯಾನಸ್ಥ ಸ್ಥಿತಿಗೆ ತಲುಪಿದ ಮೇಲೆ ಕಛೇರಿಯಲ್ಲೇ ಇರಲಿ, ಟ್ರಾಫಿಕ್ ನ ಮಧ್ಯೆಯೇ  ಇರಲಿ, ನಮ್ಮೊಳಗೊಂದು ರೀತಿಯ ಬದಲಾವಣೆ  ಕಂಡುಬರುತ್ತದೆ. 

ಈ ಬದಲಾವಣೆಯನ್ನು ನಾವು ಪ್ರತಿಕ್ಷಣ ಗಮನಿಸಬಹುದು. ನಮ್ಮೊಳಗಿನ ಮುಖ್ಯ ಬದಲಾವಣೆಯೆಂದರೆ, ನಮ್ಮ ಮಾತಿನ ದುಂದುವೆಚ್ಚ ಕಡಿಮೆ ಆಗಿರುತ್ತದೆ. ವಿಪರೀತವಾದ ಮಾತು, ಅನಗತ್ಯ ಶಬ್ಧಗಳ ಬಳಕೆ, ವಾದವಿವಾದಗಳು ನಶಿಸುತ್ತಾ,ನಾವಾಡುವ ಪ್ರತಿ ಮಾತಿಗೂ ಮೌಲ್ಯ ಬರಲು ಪ್ರಾರಂಭವಾಗುತ್ತದೆ. ಆಗ ನಾವು ಮಾಡುವ ಪ್ರತಿ ಕ್ರಿಯೆಯು ಹಗುರವಾಗಿರುತ್ತದೆ. ಇದರಿಂದ ನಮ್ಮ ಸುತ್ತಲಿನ ಜಗತ್ತೇನೂ ಬದಲಾಗುವುದಿಲ್ಲ; ಅದು ಇದ್ದಂತೆಯೇ ಇರುತ್ತದೆ. ಆದರೆ ನಮ್ಮ ಸ್ಥಿತಿಯು ಮಾತ್ರ ಸಾಕಷ್ಟು ಬದಲಾಗಿರುತ್ತದೆ.   

January 23, 2016

ಭಯ 
ಮನುಷ್ಯನ  ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ.  ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು ಸಂಪೂಣ೯ವಾಗಿ ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಭಯ ಎಂಬುದನ್ನು  ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ದೈರ್ಯದಿಂದ ಇರಲು ಅಭ್ಯಾಸ ಮಾಡಬೇಕಾಗುತ್ತದೆ. "ಧೈರ್ಯಂ ಸರ್ವತ್ರ ಸಾಧನಂ".  

ಭಯವಿರಬಾರದು ಎಂದರೆ ಗುರುಹಿರಿಯರಲ್ಲಿ ಭಯ-ಭಕ್ತಿ ಇರಬಾರದು ಎಂದಥರ್ವಲ್ಲ. ಕೆಲವರು ಅನಗತ್ಯವಾಗಿ, ಅನಾವಶ್ಯಕವಾಗಿ ಭಯಪಡುತ್ತಿರುತ್ತಾರೆ. ಇಂತಹವರ ಭಯವು ಎಷ್ಟು ಬಾಲಿಶವಾಗಿರುತ್ತೆಂದರೆ- ಯಾರಾದರೂ ನಮಗೆ ಏನಾದರೂ ಕೇಡು ಮಾಡಬಹುದೇನೋ  ಎಂಬ ಭಯ, ನಮಗೆ ಒಂದು ಪಕ್ಷ ಕಷ್ಟಗಳು,  ತೊಂದರೆಗಳು, ದುಃಖ -ದುಮ್ಮಾನಗಳು ಬಂದುಬಿಟ್ಟರೆ  ಏನು ಮಾಡುವುದು? ಯಾರೂ ಮನೆಯಲ್ಲಿ ಇಲ್ಲದೆ ಇದ್ದಾಗ ಆಕಸ್ಮಾತ್ತಾಗಿ  ಸಾವು ಬಂದುಬಿಟ್ಟರೆ ಏನುಗತಿ ? ಹೀಗೆ ಹಲವು ಹದಿನೆಂಟು ರೀತಿಯ ಭಯದಿಂದ ಹೆದರಿಕೊ೦ಡು ದಿನನಿತ್ಯದಲ್ಲಿ ಹಲವರು ಬದುಕಿದ್ದೂ  ಸತ್ತಂತೆ ಹೇಡಿಗಳಾಗಿ ಇರುತ್ತಾರೆ. ಇಂತಹ ಹೆದರಿಕೆಗೆ ಯಾವುದೇ ಸ್ಪಷ್ಟ ಕಾರಣವಿಲ್ಲ. ಇದು ಕೇವಲ ಇವರ ದುರ್ಬಲವಾದ ಮನಸ್ಥಿತಿ ಅಷ್ಟೇ.  ಈ ಜಗತ್ತನ್ನು ನಿರ್ವಾಹ ಮಾಡುವ ಸೃಷ್ಟಿಕತ೯ನಲ್ಲಿ, ತಾನು ದೃಢವಾಗಿ ನಂಬಿದ ಗುರುವಿನಲ್ಲಿ ಹಾಗೂ ನಮ್ಮ ಋಷಿಮುನಿಗಳು ನಮಗಾಗಿ ಬಿಟ್ಟುಹೋದ ತತ್ತ್ವ, ಸಿದ್ದಾಂತಗಳಲ್ಲಿ ಅಚಲ ನಂಬಿಕೆಯುಳ್ಳವರು ಯಾವತ್ತೂ ಹೆದರುವುದಿಲ್ಲ . ಭಗವಂತನ ಮೇಲೆ ಅಚಲವಾದ ವಿಶ್ವಾಸವಿರಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಯಾವುದು ಆಗಲೇಬೇಕೆಂಬ ನಿಶ್ಚಯ ಭಗವಂತನ ಸಂಕಲ್ಪದಲ್ಲಿ ಆಗಿಹೊಗಿದೆಯೋ ಅದು ಆಗಿಯೇ ತೀರುತ್ತದೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದೇ ರೀತಿ ಯಾವುದು ಆಗಬಾರದೆಂಬುದು ಭಗವಂತನ ಸಂಕಲ್ಪದಲ್ಲಿ ನಿಶ್ಚಯವಾಗಿದೆಯೋ ಅದನ್ನು ಆಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಅರಿತು, ಅನ್ಯಥಾ ಚಿಂತೆ ಬಿಟ್ಟು ತಮ್ಮ ಕೆಲಸ ತಾವು ಮಾಡುತ್ತಾ  ಸತ್ಯದಲ್ಲಿ ಮತ್ತು  ಧಮ೯ದಲ್ಲಿ ಬದುಕುತ್ತಾರೆ.  

ಧೈಯ೯ದಿಂದ ಹೆಜ್ಜೆ ಮುಂದಿಟ್ಟಾಗ ಯಶಸ್ಸು ಖಂಡಿತ. ನಾವು  ಸಂಶಯದಿಂದ ಹೆದರಿ ಹಿಂದೆ ಹೆಜ್ಜೆ ಇಟ್ಟರೆ ಸೋಲು ಅನುಭವಿಸಬೇಕಾಗುತ್ತದೆ . ಸತ್ಯಕಾಗಿ, ಧಮ೯ಕ್ಕಾಗಿ ದುಡಿಯುವ೦ತಹ  ಅವಕಾಶ ಸಿಕ್ಕಾಗ ಸಂತೋಷದಿಂದ ಸ್ವಿಕರಿಸಿ,  ಅದೆಷ್ಟೇ ಕಷ್ಟ ಬಂದರೂ ಎದುರಿಸುವ ದೃಢ ಸಂಕಲ್ಪದೊಂದಿಗೆ  ನಮ್ಮ ಮನಸ್ಸು ಗಟ್ಟಿಮಾಡಿಕೊಳ್ಳಬೇಕು. ನಾವು ನ್ಯಾಯನಿಷ್ಟುರಿಗಳಾಗಬೇಕು,  ದಾಕ್ಷಿಣ್ಯಪರರಾಗಬಾರದು. ಒಂದು ಪಕ್ಷ ಮರಣವೇ ಸಂಭವಿಸುವುದಾದರು ಅದನ್ನೇ  ಮಹಾನವಮಿ ಎಂದು ಸಂತೋಷದಿಂದ ಸಾವನ್ನು ಸ್ವೀಕರಸಲು ತಯಾರಾದಾಗ ಭಗವಂತನ ಸಹಾಯ ನಮ್ಮೊಂದಿಗೆ ಸದಾಕಾಲ ಇದ್ದೆ ಇರುತ್ತದೆ. 

ಅಸಂಖ್ಯಾತ ಮಹಾತ್ಮರು, ಸಂತರು, ಶರಣರು ಸತ್ಯ-ಧಮ೯ದ ಮಾಗ೯ದಲ್ಲಿ ನಡೆದು, ಪರೋಪಕಾರ ಮಾಡುತ್ತಾ ಸಮಾಜ, ರಾಷ್ಟ್ರ , ಧಮ೯ಕ್ಕಾಗಿ ಬದುಕಿ ತಮ್ಮ ಜೀವನವನ್ನು  ಸಾಥ೯ಕಪಡಿಸಿಕೊಂಡಿದ್ದಾರೆ.   ಅವರಿಗೆ ಯಾವ ಭಯವು ಕಾಡಲಿಲ್ಲ.  ಅವರ ಜೀವನದ ಆದರ್ಶವೆನ್ನೆಲ್ಲಾ  ದೇಶಕ್ಕಾಗಿ ಮುಡುಪಾಗಿಸಿ,  ನಮಗಾಗಿ ದುಡಿದಿದ್ದಾರೆ; ದೇಶಕ್ಕಾಗಿ ಮಡಿದಿದ್ದಾರೆ. ಮರಣಭಯವನ್ನು ಗೆದ್ದು ಅಮರಾತ್ಮರಾಗಿದ್ದಾರೆ. ಇಂತಹ ಮರಣಭಯವನ್ನೇ  ಗೆದ್ದವರು ಮಾತ್ರ ನಿಜವಾದ ಶರಣರಾಗಲು ಸಾಧ್ಯ. ಇಂತಹ ಆದರ್ಶ ಪುರುಷರು ಹುಟ್ಟಿದ ನಾಡಲ್ಲಿ ನಾವಿರುವುದು ನಮ್ಮ ಪರಮ ಸೌಭಾಗ್ಯವಲ್ಲವೇ? ಇಂತಹವರು ನಮಗೆ ಆದರ್ಶರಾಗಬೇಕಲ್ಲವೇ?

" ಚಿಂತೆ ಯಾತಕೋ? ಮನದಿ ಭ್ರಾಂತಿ ಯಾತಕೋ?" ಎಂದು ಪುರಂದರ ದಾಸರು ಕೇಳುತ್ತಾ " ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟರೆ ಕೆಡಲಿ" ಎಂಬ ಆಶ್ವಾಸನೆ ಕೊಡುತ್ತಾರೆ.   ಚಿಂತೆ ಬಿಟ್ಟು ಭಗವಂತನ ಸ್ಮರಣೆ ಮಾಡುತ್ತಾ ಸತ್ಯಧರ್ಮದ ಹಾದಿಯಲ್ಲಿ ಜೀವನ ನಡೆಸುವವಗೆ ಯಾವ ಭಯವು ಕಾಡದು. 

April 6, 2015

ಜೀವನ ಸುಂದರ ಮತ್ತು ಸ್ವಾರಸ್ಯ

ಜೀವನ ಸುಂದರ ಮತ್ತು ಸ್ವಾರಸ್ಯ

ಈ ಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತ ಎನಿಸುವ ಹಲವಾರು ಅನ್ವೇಷಣೆಗೆ  ಮಾನವ ಕಾರಣನಾಗಿದ್ದಾನೆ. ಜೀವನದಲ್ಲಿ ಸುಖದ ನಿರಂತರ ಹುಡುಕಾಟದ ಸಲುವಾಗಿ ತನ್ನ ಅನುಕೂಲವನ್ನು ಆಶ್ರಯಿಸಿ ಹಲವಾರು ಸಾಧನ ಸಾಮಗ್ರಿಗಳನ್ನು ಕಂಡುಹಿಡಿದಿದ್ದಾನೆ.  ಒಂದರ ನಂತರ ಮತ್ತೊಂದರಂತೆ ಇವನ ಸುಖದ ಅನ್ವೇಷಣೆ ನಿರಂತರವಾಗಿ ಸಾಗಿದೆ.  ಆದರೂ,  ಮಾನವನಿಗೆ ನಿಜವಾಗಿ ಬೇಕೆನಿಸಿದ ಸುಖ ಸಿಕ್ಕಿಲ್ಲದವನಂತೆ ಚಡಪಡಿಸುತ್ತಿದ್ದಾನೆ. ಅವನಿಗೆ ಏನು ಬೇಕು? ಎನ್ನುವುದರ ಬಗ್ಗೆಯೂ ಅವನಿಗೆ ಗೊಂದಲವಿದೆ.  ಅವನಿಗೆ ಏನು ಸಿಕ್ಕರೆ ಸುಖ ಸಂಪೂರ್ಣವಾಗಿ ಸಿಗುತ್ತದೆ? ಎನ್ನುವ ಬಗ್ಗೆ ಹಲವಾರು ಸಂಶಯಗಳಿವೆ. " ಇಷ್ಟಾದರೆ ಮತ್ತಷ್ಟು ಬೇಕೆಂಬಾಸೆ, ಮತ್ತಷ್ಟಾದರೆ ಮಗದಷ್ಟು ಬೇಕೆಂಬಾಸೆ "  ಹೀಗಾಗಿ ಅವನ ಹುಡುಕಾಟ ನಿರಂತರವಾಗಿ ಸಾಗುತ್ತಾ ಇದೆ.  "ಹೊರಗಿನ ಪ್ರಪಂಚದಲ್ಲಿ ಎಷ್ಟೇ ಸುಖವೆನ್ನುವ ವಸ್ತುವಾಗಲಿ, ಭಾವನೆಯಾಗಲಿ ನಮಗೆ ಸಿಕ್ಕಂತೆ ಅನಿಸಿದರೂ ಅದು ಕೇವಲ ತಾತ್ಕಾಲಿಕವಾದದ್ದು, ಅದರಿಂದ ನಮಗೆ ನಿರಂತರ ಸುಖ ಸಿಗಲು ಸಾಧ್ಯವಿಲ್ಲ" ಎಂಬ ಸತ್ಯದ ಅರಿವು ಇಲ್ಲದಿರುವುದು ಮಾನವನ ದೌರ್ಬಲ್ಯಗಳಲ್ಲಿ ಒಂದಾಗುತ್ತದೆ ಎಂದು ಸಂತರು ಅಭಿಪ್ರಾಯಪಡುತ್ತಾರೆ. ಯಾವುದು ಲೌಕಿಕ ಪ್ರಪಂಚದಲ್ಲಿ ಸುಖವನ್ನು ನೀಡಬಲ್ಲದೋ ಅದು ದುಃಖವನ್ನು ತಪ್ಪದೆ ನೀಡುತ್ತದೆ.  ಈ ದುಃಖದಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಖದ ಅನ್ವೇಷಣೆ, ಮತ್ತೆ ದುಃಖ  ಹೀಗೆ ಸಾಗಿದೆ ನಮ್ಮ ನಿತ್ಯದ ಬದುಕು. ಮಾನವ ಎಲ್ಲವನ್ನು ಗೆದ್ದೇ ಬಿಡುತ್ತೆನೆಂಬ  ಹುಚ್ಚು ಸಾಹಸದಲ್ಲಿ ತನ್ನೆಲ್ಲ ಶ್ರಮ, ಬುದ್ಧಿವಂತಿಕೆವನ್ನು ವ್ಯಯಿಸಿ ನಿತ್ಯದ ಸುಖವನ್ನು ಬಲಿಕೊಟ್ಟು ನಿರಾಶನಾಗುತ್ತಿದ್ದಾನೆ.  ಆದರೆ, ಮಾನವ ತನ್ನ ಇತಿಮಿತಿಗಳನ್ನು ಅರಿಯದಿರುವುದೂ  ಒಂದು ದೋಷವಾಗಿದೆ. ಈ ಪ್ರಪಂಚದಲ್ಲಿ ಅದೆಷ್ಟು ವಿಸ್ಮಯಕಾರಕವಾದದ್ದು ಪ್ರಕೃತಿಯಲ್ಲಿ ಇದೆ ಎಂದು ಪಟ್ಟಿ ಮಾಡುತ್ತಾ ಹೋದರೆ,  ಆಗ ಮಾನವ ಪ್ರಕೃತಿಯನ್ನು ಮೀರಿಸಲಾಗಲಿ, ಗೆಲ್ಲಲಾಗಲಿ ಸಾಧ್ಯವಿಲ್ಲ ಮತ್ತು ತನ್ನ ಸಾಧನೆಗೊಂದು ಮಿತಿ ಇದೆ ಎಂದು ಅರ್ಥವಾಗುತ್ತದೆ. 
  

ಮಾನವ, ತನ್ನ ಇತಿಮಿತಿಯಲ್ಲಿ ದುಡಿಯುತ್ತಿರುವ ತಾನು ಎಲ್ಲಕ್ಕೂ ಕಾರಣ ಎಂದು ಎಷ್ಟು ಅಹಂಕಾರದಿಂದ ಕೊಚ್ಚಿಕೊಂಡರು ಕೆಲವು ಪ್ರಶ್ನೆಗಳಿಗೆ ನಿರುತ್ತರನಾಗಲೇ ಬೇಕಾಗುತ್ತದೆ.  " ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರಾರು? ಕಲ್ಲಿನೊಳು ಕೂಗುವ ಕಪ್ಪೆಗಳಿಗೆ ಅಲ್ಲಲ್ಲಿ ಆಹಾರವಿತ್ತವರು ಯಾರು?" ಎಂದು ಪುರಂದರ ದಾಸರು ಕೇಳಿದರೆ,  " ಇಳೆ ನಿಂಬು ಮಾಮರಕೆ ಹುಳಿನೀರೆದವರಾರು? ಕಬ್ಬು ಬಾಲೆ ಹಲಸು ನಾರಿಕೇಳಕ್ಕೆ ಸಿಹಿನೀರೆದವರಾರು? ಮರುಗ ಮಲ್ಲಿಗೆ ಪಚ್ಚೆಗೆ ಪರಿಮಳದ ನೀರೆದವರಾರು? " ಎಂದು ಅಕ್ಕಮಹಾದೇವಿ ಕೇಳುತ್ತಾಳೆ.  ಈ ಪ್ರಶ್ನೆಗೆ ಮಾನವನ ಉತ್ತರ ಕೇವಲ " ನಾನಲ್ಲ ನಾನಲ್ಲ ..... " ಎನ್ನುವುದೇ ಆಗಿದೆ. ಹೀಗೆ  ಹುಡುಕುತ್ತಾ ಹೋದರೆ ಈ ಅಚ್ಚರಿಗಳ ಸರಮಾಲೆ ಎಲ್ಲೆಲ್ಲೂ ಕಾಣುತ್ತದೆ.  ಆದರೆ, ನಮಗೆ ನೋಡುವ ಕಣ್ಣಿರಬೇಕು ಅಷ್ಟೇ! 

ಈ ಆಚ್ಚರಿ  ಅರ್ಥವಾಗಬೇಕಾದರೆ  ಬದುಕಿನ ಅರ್ಥವನ್ನು ತಿಳಿಯಬೇಕಾಗುತ್ತದೆ ಎಂದು ನಮ್ಮ ದಾರ್ಶನಿಕರು ಮಾರ್ಮಿಕವಾಗಿ ಹೇಳಿದರು.  ಅಂತರಂಗದ ಅಂಧಕಾರವನ್ನು ತೊರೆದು ಸಾತ್ವಿಕ ಜೀವನದ ಕಡೆ ಮುಖ ಮಾಡಿದರೆ ಆಗ " ಬದುಕಿಗೊಂದು  ಅರ್ಥವಿದೆ, ಬದುಕಿಗೊಂದು ಅಂತ್ಯವಿದೆ " ಎಂಬ ಸತ್ಯದ ಅರಿವಾಗುತ್ತದೆ.  ಸಾತ್ವಿಕ ಬದುಕಿಗೆ ಪ್ರೇರಕ ಶಕ್ತಿ ಎಂಬುದು ಕೇವಲ ದೈವದಿಂದ ಮಾತ್ರ ಸಾಧ್ಯ ಎಂಬ ತಿಳಿವು ಮೂಡುತ್ತದೆ. " ಬಿಟ್ಟು ಹೋಗುವಾಗ ಹೊತ್ತು ಹೋಗಲಾಗದ ಸಂಪತ್ತು ನಮ್ಮದು ಹೇಗಾಗುತ್ತದೆ? " ಎಂಬ ಜ್ಞಾನಿಗಳ ನುಡಿ ನಮ್ಮನ್ನು ಎಚ್ಚರಿಸುತ್ತದೆ. ನಮ್ಮದಲ್ಲದ ಹಾಗು ಶಾಶ್ವತವಲ್ಲದ ಸಿರಿಸಂಪತ್ತುಗಳಿಗೆ ಅಂಟಿಕೊಂಡು ಅಂಟಿಕೊಳ್ಳದಂತೆ ಸದ್ಗುಣನಾಗಿ ಬಾಳುವುದು ಪರಮಾತ್ಮನಿಗೆ ಪ್ರಿಯವಾದ ಬದುಕು. ಬದುಕಿನ ಸದಾಶಯ ಸಾತ್ವಿಕವಾದ ನಿತ್ಯದ ಬದುಕೆ ಆಗಿದೆ. 

ವರ್ಷದಲ್ಲಿ 365  ದಿನ ಸುಖವಾಗಿ ಆನಂದದಿಂದ ಬದುಕಬೇಕೆಂದರೆ ನಾವು ಎರಡು ದಿನಗಳನ್ನು ತ್ಯಾಗ ಮಾಡಬೇಕಾಗುತ್ತದೆ.  ಆಗ 363 ದಿನಗಳು ಸುಖವಾಗಿ ಆನಂದದಿಂದ ಬದುಕಬಹುದುದೆಂದು ಒಬ್ಬ ದಾರ್ಶನಿಕರು ಹೇಳುತ್ತಾರೆ. " ಒಂದು ನಿನ್ನೆಯ ದಿನ, ಇನ್ನೊಂದು ನಾಳೆಯದಿನ.  ನಿನ್ನೆಯ ಬಗ್ಗೆ ಚಿಂತಿಸದೆ, ನಾಳೆಯ ಬಗ್ಗೆ ಯೋಚಿಸದೆ,  ಕೇವಲ ಇಂದಿನ ಬಗ್ಗೆ ಮಾತ್ರ ಬದುಕು."  

ಬಂದಿದ್ದನ್ನು ಯಥಾಮತಿ ಸ್ವೀಕಾರ ಮಾಡಿ ಆನಂದದಿಂದ, ಪ್ರೇಮದಿಂದ ಬದುಕಲು ಕಲಿತಾಗ ಜೀವನ ಸುಂದರ ಮತ್ತು ಸ್ವಾರಸ್ಯ ಎನ್ನುತ್ತಾರೆ ದಾರ್ಶನಿಕರು.    ನೀವೇನು ಹೇಳುತ್ತಿರಾ?