October 30, 2012

ದೊಡ್ಡವರ ದಾರಿ......................12







                 ಒಮ್ಮೆ ಭಾರತದ ರಾಷ್ಟ್ರಪತಿಗಳಾದ ಡಾ.ಎ ಪಿ ಜೆ ಅಬ್ದುಲ್ ಕಲಾಂರವರನ್ನು ಒಂದು ಪ್ರಶ್ನೆಯನ್ನು ಕೇಳಲಾಯಿತು. " ಸಾರ್,  ನಿಮಗೆ ಬದುಕಿನಲ್ಲಿ ಅತ್ಯಂತ ಸಂತಸ ನೀಡಿದ ಮತ್ತು ಸಾರ್ಥಕ ಎಣಿಸಿದ ಕ್ಷಣ ಯಾವುದು? "

                 ಕಲಾಮ್ ರವರು ಗಂಟಲು ಸರಿಮಾಡಿಕೊಂಡು ತಮ್ಮ ಅನುಭವದ ಗಂಟನ್ನು ಬಿಚ್ಚಿ ಎಲ್ಲರ ಮುಂದೆ ಇಟ್ಟ  " ಒಮ್ಮೆ ನಾನು ಹೈದರಾಬಾದಿನ ನಿಜಾಂ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಪೋಲಿಯೋಪೀಡಿತ ಮಕ್ಕಳ ವಿಭಾಗಕ್ಕೂ ಹೋದೆ. ಆ ಮಕ್ಕಳು ತಮ್ಮ ನಿರ್ಬಲವಾದ ಕಾಲುಗಳಿಗೆ ಹಾಕಲಾಗಿದ್ದ ಲೋಹದ ಕ್ಯಾಲಿಪರ್ಸ್ ಸಹಾಯದಿಂದ ನಡೆಯುವುದಕ್ಕೆ ಬಹಳ ಕಷ್ಟ ಪಡುತ್ತಿದ್ದರು. ಈ ಕ್ಯಾಲಿಪರ್ಸ್ 3 ಕೆ ಜಿ ತೂಕದ್ದಾಗಿದ್ದು ಈ ಮಕ್ಕಳ ಕಾಲಿಗೆ ಹೆಚ್ಚು ಭಾರದ್ದಾಗಿತ್ತು. ಮಕ್ಕಳು ತಮ್ಮ ಕಾಲುಗಳನ್ನು ಎಳೆಯಲು ವಿಶೇಷ ಬಲ ಹಾಕಬೇಕಾಗಿತ್ತು.  ಇದು ಮಕ್ಕಳಿಗೆ ಕಷ್ಟವಾಗಿತ್ತು. ಅಲ್ಲಿನ ವೈದ್ಯಾದಿಕಾರಿಗಳು ಈ ವಿಚಾರವನ್ನು ಪ್ರಸ್ತಾಪಿಸುತ್ತಾ, ಈ ವಿಚಾರದಲ್ಲಿ ಮಕ್ಕಳ ನೋವನ್ನು ಮತ್ತು ಕಷ್ಟವನ್ನು ಕಡಿಮೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು."  

               " ನನಗೆ ಈ ವಿಚಾರ ಕೊರೆಯಲು ಪ್ರಾರಂಭವಾಯಿತು.  ನಾನು ನೇರವಾಗಿ ಇಸ್ರೋದ ಪ್ರಯೋಗಾಲಯಕ್ಕೆ ಬಂದು ನನ್ನ ಸಹ ತಂತ್ರಜ್ಞರಿಗೆ ಈ ಸಮಸ್ಯೆಯನ್ನು ವಿವರಿಸಿ, ಇದಕ್ಕೆ ಏನಾದರು ಮಾಡಲು ಸಾಧ್ಯವೇ? ಎಂದು ಸಮಾಲೋಚನೆ ಮಾಡಿದೆ.ನಮ್ಮ ತಂಡ  ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡು ರಾಕೆಟ್ ತಯಾರಿಸಲು ಉಪಯೋಗಿಸುವ ಒಂದು ವಿಶಿಷ್ಟ ಪದಾರ್ಥದಿಂದ ಮಕ್ಕಳಿಗೆ  ಕಾಲಿಪರ್ಸ್ ತಯಾರು ಮಾಡಿತು . ಈ ಕ್ಯಾಲಿಪರ್ಸ್ ಲೋಹಕ್ಕಿಂತ ಹೆಚ್ಚು ಬಲಿಷ್ಠ ವಾಗಿತ್ತು.  ಆದರೆ ತೂಕ ಮಾತ್ರ ಹತ್ತು ಪಟ್ಟು ಕಡಿಮೆ ಇತ್ತು, ಅಂದರೆ ಕೇವಲ 300 ಗ್ರಾಂ ತೂಗುತ್ತಿತ್ತು."

              " ಈ ಕ್ಯಾಲಿಪರ್ಸ್ ಗಳನ್ನು ಮಕ್ಕಳ ಕಾಲಿಗೆ ತೊಡಿಸಲಾಯಿತು.  ಮೂರು ಕೆ ಜಿ ತೂಕದ ಕ್ಯಾಲಿಪರ್ಸ್ ಜಾಗದಲ್ಲಿ 300 ಗ್ರಾಂ ತೂಕದ ಕ್ಯಾಲಿಪರ್ಸ್ ಹಾಕಿಕೊಂಡ ಮಕ್ಕಳ ಸಂತೋಷ ವಿವರಿಸಲಾರೆ.  ಆ ಮಕ್ಕಳಿಗೆ ಆನಂದವೋ ಆನಂದ. ಈ ಆನಂದ ಕಂಡ ಮಕ್ಕಳ ತಂದೆತಾಯಿಯರಿಗೆ, ವೈದ್ಯಾದಿಕಾರಿಗಳಿಗೆ ಹೇಳಲು ಏನೂ ಇಲ್ಲದೆ ಕಣ್ಣೀರು ಸುರಿಸಿದರು.  ನಾವೆಲ್ಲರೂ ಆನಂದ ಭಾಷ್ಪ ಸುರಿಸಿದೆವು. ನನಗೆ ಇದಕ್ಕಿಂತ ಸಂತಸದ ಕ್ಷಣ ಇನ್ನ್ಯಾವುದು ಇಲ್ಲ. ನನ್ನ  ಬದುಕಿನಲ್ಲಿ ದೊಡ್ಡ ಸಾರ್ಥಕದ ಕ್ಷಣ ಇದೊಂದೇ ಎಂದು ಭಾವಿಸುತ್ತೇನೆ."

               ಹೌದು! ಇಂತಹ ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿದಾಗ  ಬದುಕು ಸಾರ್ಥಕ ಎನಿಸುತ್ತದೆ.


October 26, 2012

ದೊಡ್ಡವರ ದಾರಿ ....................11



                      ತಮಿಳು ನಾಡಿನ ಕಂಚಿ ಕಾಮಾಕ್ಷಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ?       ಅದೇ ಕಾಮಾಕ್ಷಿ ದೇವಸ್ಥಾನದ    ಸಮೀಪವಿರುವ ಕಂಚಿಮಠದ ಶ್ರೀ ಶ್ರೀ ಚಂದ್ರಶೇಖರೆಂದ್ರ ಸರಸ್ವತಿ ಮಹಾಸ್ವಾಮಿಗಳು, ಕಂಚಿ ಪರಮಾಚಾರ್ಯರೆಂದೆ ಪ್ರಸಿದ್ಧಿಯಾದವರು.  100 ವರ್ಷಗಳ ಕಾಲದ ಇವರ  ಜೀವಿತಾವಧಿಯಲ್ಲಿ 90 ವರ್ಷಗಳ ಕಾಲ  ಭಗವನ್ನಾಮ ಚಿಂತನೆಯಲ್ಲಿ ಸಾಧನೆಮಾಡಿದ ಮಹಾ ಪುರುಷರು. ಜಾತಿ, ಮತ, ಪಂಥಗಳ ಜಿಜ್ಞಾಸೆಗಳಿಂದ ಆಚೆ ಉಳಿದು ಮಾನವೀಯತೆಯಲ್ಲಿ ದೇವರನ್ನು ಕಂಡ ಪ್ರತ್ಯಕ್ಷದರ್ಶಿಗಳು.  ಇವರು ಮೌನಧಾರಣೆಯಲ್ಲೇ  ಹೆಚ್ಚು ವರ್ಷಗಳ ಕಾಲ ಇದ್ದವರು. ಈ ಸಮಯದಲ್ಲಿ ಹಲವಾರು ಗಣ್ಯರು ಬಂದು ಇವರ ದರ್ಶನಮಾತ್ರದಿಂದಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.   ಇವರ ದರ್ಶನಕ್ಕಾಗಿಯೇ ಭಕ್ತರು ದೇಶವಿದೇಶಗಳಿಂದ ಬರುತ್ತಿದ್ದರು.

                 ಕಂಚಿ ಮಠದ ಪಕ್ಕದಲ್ಲೇ ಸುಮಾರು 300 ಕ್ಕೂ ಹೆಚ್ಚು ವರ್ಷ ಹಳೆಯ ಮಸೀದಿ ಇದೆ.  ಮಠಕ್ಕೂ, ಮಸೀದಿಗೂ ಪ್ರತಿ ನಿತ್ಯ ಸಹಸ್ರಾರು ಮಂದಿ ಬರುತ್ತಿದ್ದರು. ವಾಹನ ನಿಯಂತ್ರಿಸುವುದೇ ದಿನ ನಿತ್ಯದ ಸಮಸ್ಯೆಯಾಗಿತ್ತು.  ಎರಡು ಧರ್ಮಾನುಯಾಯಿಗಳಿಗೆ ಕಿರಿಕಿರಿಯಾಗುತ್ತಿತ್ತು. ಎರಡೂ ಧರ್ಮದವರಿಗೆ  ಒಂದು ಪರಿಹಾರದ ಅವಶ್ಯಕತೆ ಇತ್ತು. ಇದಕ್ಕೆ ಮಠವು ಹೊಸ ಜಾಗದಲ್ಲಿ ಮಸೀದಿಯನ್ನು ಪುನರ್ನಿರ್ಮಿಸಿ ಕೊಡಬೇಕೆಂಬ ಪ್ರಸ್ತಾಪವೂ  ಬಂತು.  ಈ ವಿಚಾರ ಕಂಚಿ ಪರಮಾಚಾರ್ಯರ ಕಿವಿಗೂ  ಮುಟ್ಟಿತು.  ಪರಮಾಚಾರ್ಯರು ಇದನ್ನು ತೀರ್ವವಾಗಿ ವಿರೋಧಿಸುತ್ತಾ " ನಿಜ ಹೇಳಬೇಕೆಂದರೆ ಬೆಳಗಿನಜಾವದ ಮಸೀದಿಯ ನಮಾಜ್ ಕರೆ,  ನನ್ನ ದೈನಂದಿನ ಪ್ರಾರ್ಥನೆಗೂ ಎಚ್ಚರಗೊಳಿಸುವ ಕರೆಯೇ ಆಗಿದೆ. ಅದು ಇದ್ದಲ್ಲೇ ಇರಲಿ  " ಎಂದರು. ಮಸೀದಿಯ ಸ್ಥಳಾಂತರಕ್ಕೆ ಪರಮಾಚಾರ್ಯರು  ಸುತರಾಂ ಒಪ್ಪಲೇ ಇಲ್ಲ.  ಮೌನವ್ರತವನ್ನು ಕೈಗೊಂಡುಬಿಟ್ಟರು.  ಕೊನೆಗೆ ಮಸೀದಿ ಸ್ಥಳಾಂತರದ ನಿರ್ಧಾರವನ್ನೇ ಕೈಬಿಡಲಾಯಿತು.




October 23, 2012

ದೊಡ್ಡವರ ದಾರಿ ...................10












                 " ಈಗ್ಗೆ 25 ವರ್ಷಗಳ ಹಿಂದಿನ ಮಾತು. ಒಂದು ದಿನ ಕೊಲ್ಕೊತ್ತ ನಗರದ ಒಂದು ದಾರಿಯಲ್ಲಿ   ಒಬ್ಬನೇ ನಡೆದು ಹೋಗುತಿದ್ದೆ, ನನ್ನ ಎದುರು ಬದಿಯಿಂದ ಒಂದು ಬಾಲಕಿಯೊಬ್ಬಳು ಬರುತ್ತಿದ್ದಳು. ಅವಳು ಏಕೋ ನನ್ನ ಸೆಳೆದಳು.  ಅವಳ ಮುಖ ನಿಸ್ತೆಜವಾಗಿತ್ತು, ಬಹಳ ಬಳಲಿದ್ದಳು, ಪ್ರಾಯಶಃ ತುಂಬಾ ಹಸಿದಿರಬೇಕೆಂದು ನನಗೆ ಅನ್ನಿಸತೊಡಗಿತು. ಈಗ ಈ ಬಾಲಕಿಗೆ ಏನಾದರು ಕೊಡಬೇಕೆಂದು ಅನ್ನಿಸತೊಡಗಿತು.  ನನ್ನ ಕೋಟಿನ ಜೇಬಿಗೆ ಕೈ ಇಳಿಬಿಟ್ಟೆ, ಒಂದು ಬಿಸ್ಕುತ್ತ್ ಇತ್ತು.  ಅದನ್ನೇ ಆ ಬಾಲಕಿಗೆ ಕೊಟ್ಟೆ. ಅವಳು ತಕ್ಷಣ ತಿನ್ನಲಿಲ್ಲ, ಅವಳು ಬಂದ ದಾರಿಯಲ್ಲೇ ಹಿಂದೆ ನಡೆದಳು.  ಇವಳ ನಡತೆ ಆಶ್ಚರ್ಯ ತರಿಸಿತು.  ಅವಳನ್ನೇ ನೋಡುತ್ತಾ ನಾನು ನಿಧಾನ ನಡೆದೆ.  ಸ್ವಲ್ಪ ದೂರ ಸಾಗಿದ ಮೇಲೆ ಒಂದು ಬಡಕಲು ನಾಯಿಯ ಹತ್ತಿರ ಹೋಗಿ ಇದ್ದ ಒಂದು ಬಿಸ್ಕುತ್ತ್ನಲ್ಲಿ ಅರ್ಧವನ್ನು ಆ ನಾಯಿಗೆ  ಕೊಟ್ಟು ಇನ್ನರ್ಧವನ್ನು ತಾನು ತಿಂದಳು. " 
      
               ಈ ಘಟನೆ ನನ್ನ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಪ್ರಸಿದ್ದ ಕಾದಂಬರಿಕಾರ ಫ್ರಾನ್ಸಿನ ಡಾಮಿನಿಕ್ ಲಾಪಿಯರ್ " A Thousand Suns " ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.  " ಒಂದು ಪುಟ್ಟ ಬಾಲಕಿ ತನ್ನ ಹಸಿವಿನ ನಡುವೆಯೂ ತನ್ನ ನಾಯಿಯನ್ನು ತನ್ನಂತೆ ಬಗೆದ ಈ ಘಟನೆ ನನ್ನ ಹೃದಯ ಕಲಕಿತು. ಪ್ರತಿಕೂಲ ಪರಿಸ್ತಿತಿಯಲ್ಲೂ ಧಾರಾಳತನ ತೋರುವ ಭಾರತೀಯರ ಬಗ್ಗೆ ನನಗೆ ಗೌರವ ಭಾವನೆ ಮೂಡಿತು.  ಈ ಘಟನೆ ನನ್ನನ್ನು ವಿಶಾಲವಾಗಿ ಚಿಂತಿಸುವಂತೆ   ಮಾಡಿತು."  ಎನ್ನುತ್ತಾರೆ.

                  ಈ ಪುಸ್ತಕ ಮಾರಾಟದಿಂದ ಬಂದ ಗೌರವ ಧನ ಸುಮಾರು ಏಳು ಕೋಟಿ ರೂಪಾಯಿಗಳು. ಈ ಹಣವನ್ನು ಪಶ್ಚಿಮ ಬಂಗಾಳದ ಸುಂದರ ಬನ್ಸ್ ದ್ವೀಪದ ಜನರ ಉಪಯೋಗಕ್ಕಾಗಿ ಬಳಸಿದರು. ಈ ದ್ವೀಪ ಸಮೂಹದಲ್ಲಿ 57 ಸಣ್ಣ ಸಣ್ಣ ದ್ವೀಪಗಲ್ಲಿ ಸುಮಾರು 10 ಲಕ್ಷ ಜನ ವಾಸಿಸುತ್ತಾರೆ.  ಇಲ್ಲಿನ ಜನಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆಯನ್ನು ಮನಗೊಂಡ ಲಾಪಿಯರ್ ಒಂದು ದೊಡ್ಡ ದೋಣಿಯನ್ನು ಕೊಂಡು ಅದರಲ್ಲಿ ನಾಲ್ಕಾರು ವೈದ್ಯರು, ಆರೆಂಟು ದಾದಿಯರು ಇರುವ ಒಂದು 25  ಜನರ ತಂಡವನ್ನು ಸಜ್ಜುಗೊಳಿಸಿದರು. ಈ ತಂಡ ದ್ವೀಪದಿಂದ ದ್ವೀಪಕ್ಕೆ ಸಂಚರಿಸಿ, ಬೇಕಾದ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದ್ದಾರೆ. ಈವರೆಗೆ 50000 ಕ್ಕೂ ಹೆಚ್ಚು ರೋಗಿಗಳಿಗೆ ಔಷದೊಪಚಾರ ಕೊಟ್ಟಿದೆ, ಸಾವಿರಾರು ಶಸ್ತ್ರ ಚಿಕಿತ್ಸೆ ನಡೆಸಿದೆ.  ಒಂದು ಸಾರ್ಥಕ  ಮಾನವೀಯ ಸೇವೆ ಮಾಡುತ್ತಿದೆ.               

                ಇಂತಹ ಮಹನೀಯರ ಸೇವೆಯನ್ನು ಗುರುತಿಸುವ ಜವಾಬ್ದಾರಿ ಸರ್ಕಾರ ಮಾಡಬೇಕು.  ಲಾಪಿಯರ್ ಮಾತ್ರ ಯಾವುದಕ್ಕೂ ತಲೆಕೆಡೆಸಿ ಕೊಳ್ಳದೆ ದಕ್ಷಿಣ ಫ್ರಾನ್ಸ್ ನಲ್ಲಿ ತನ್ನ ಚಿಕ್ಕ ಸಂಸಾರದೊಂದಿಗೆ ಬದುಕುತ್ತಿದ್ದಾರೆ.  ಇಂತಹವರ  ದಾರಿ ವಿಶಾಲ ಮತ್ತು ನೇರ. 


                  

October 18, 2012

ದೊಡ್ಡವರ ದಾರಿ...................................9




              ಈ ಜಗತಿನಲ್ಲಿ ಹಲವಾರು ವೈದ್ಯ ಪದ್ದತಿಗಳಿವೆ.  ಅಲೋಪತಿ, ಆಯುರ್ವೇದ, ಯುನಾನಿ, ಹೋಮಿಯೋಪತಿ, ನಿಸರ್ಗ ಚಿಕಿತ್ಸೆ, ಹೀಗೆ ಇನು ಹಲವಾರು ನಾಟಿ ಪದ್ದತಿಗಳು ಚಾಲ್ತಿಯಲ್ಲಿವೆ. ಆದರೆ,  ಒಂದು ವಿಶೇಷವಾದ, ವಿನೂತನವಾದ ಚಿಕಿತ್ಸಾ ಪದ್ದತಿಯಿಂದ ಮೃತ್ಯುವನ್ನು ಹಿಮ್ಮೆಟಿಸಿದ  ಮಹಾವೀರನ ಅನುಭವ ಕಥನ ರೋಚಕವಾಗಿದೆ.  

              ನಾರ್ಮನ್ ಕಸಿನ್ಸ್ ಎಂಬುವವರು ಒಬ್ಬ ಪ್ರಸಿದ್ಧ ಮತ್ತು ಯಶಸ್ವೀ ಪತ್ರಕರ್ತ ಹಾಗೂ  ಬರಹಗಾರರಾಗಿದ್ದರು.   "ಲಾಫ್ಟರ್ ಈಸ್ ದಿ ಬೆಸ್ಟ್ ಮೆಡಿಸನ್ " ಎಂಬ ಒಂದು ವಿನೂತನ ಚಿಕಿತ್ಸಾ ವಿಧಾನಕ್ಕೆ ಅಡಿಗಲ್ಲು ಹಾಕಿದರು.  ಇವರ ಈ ಹೊಸ ಆವಿಷ್ಕಾರಕ್ಕೆ ಮೊದಲ ರೋಗಿಯೆಂದರೆ ಸ್ವಯಂ ನಾರ್ಮನ್ ಕಸಿನ್ಸ್ ರವರೆ!! ಇವರ ಹಾಸ್ಯ ಪ್ರವೃತ್ತಿಯಿಂದ ಹಲವರನ್ನು  ನಗೆಗಡಲಿನಿಂದ ಮುಳುಗಿಸುತ್ತಿದ್ದರು. ಇವರು ಹಾಸ್ಯ ಚಟಾಕಿಗಳನ್ನು ಹಾರಿಸುವುದರಲ್ಲಿ ನಿಸ್ಸೀಮರಾಗಿದ್ದರು.

              ಇಂತಹ ಹಾಸ್ಯ ಕವಿಯು ಒಮ್ಮೆ ತೀರ್ವ ಕಾಯಿಲೆಗೆ ತುತ್ತಾದರು.    ಹಲವಾರು ಪರೀಕ್ಷೆಗಳನ್ನು ಮಾಡಿದ ವೈದ್ಯರು ಇವರಿಗೆ " ನಾರ್ಮನ್, ಈ ಮಾತು ಹೇಳಲು ನನಗೆ ಅತೀವ ಬೇಸರವೆನಿಸುತ್ತಿದೆ. ನೀವು ಆರು ತಿಂಗಳಿಗಿಂತ ಹೆಚ್ಚಿಗೆ ಕಾಲ ಬದುಕಲಾರಿರಿ.  ನಿಮ್ಮ ಉಳಿಕೆ ಜೀವನವನ್ನು ಜೋಪಾನ ಮಾಡಿಕೊಳ್ಳಿ " ಎಂದು ಹೇಳಿ ಕೈ ತೊಳೆದುಕೊಂಡರು. ನಾರ್ಮನ್ ರವರಿಗೆ ಏನೂ ತೋಚದ ಹಾಗಾಯಿತು.  ಅಸಾಧ್ಯ ನೋವಿನಿಂದ ಬಳಲುತ್ತಿದ್ದ ಇವರಿಗೆ ಯಾವ ನೋವು ನಿವಾರಕಗಳು ಹೆಚ್ಚಿಗೆ ಉಪಯೋಗಕ್ಕೆ ಬರಲಿಲ್ಲ.  ನೋವಿನ ತೀವ್ರತೆಯಿಂದ ನಿದ್ದೆ ಹಾರಿಹೋಯಿತು.  ದೇಹವು ಬಳಲಿತು.  ಇಂತಹ ಸಮಯದಲ್ಲಿ ಒಂದು ಹಾಸ್ಯ ಚಲನಚಿತ್ರವನ್ನು ನೋಡಿದರು.  ಆ ಚಿತ್ರ ನೋಡುತ್ತಾ ಹೊಟ್ಟೆ ಹುಣ್ಣಾಗುವಂತೆ ನಕ್ಕರು.  ಏನು ಆಶ್ಚರ್ಯವೋ ಏನೋ, ನಾರ್ಮನ್ನರಿಗೆ ಎರಡು ಗಂಟೆಗಳಿಗೂ ಅಧಿಕ ನಿದ್ದೆ ಬಂತು.  ಇದರಿಂದ ಪ್ರೇರಿತರಾದ ಇವರು ಹಲವಾರು ಹಾಸ್ಯ ಭರಿತ ಚಲನಚಿತ್ರಗಳನ್ನು ನೋಡುವ ಅಭ್ಯಾಸ ಮಾಡಿಕೊಂಡರು.  ಹಲವಾರು ಹಾಸ್ಯದ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿ ಸಿಕೊಂಡರು.  ಇದು ಇವರ ದೇಹದ ಮೇಲೆ ಉತ್ತಮ ಪರಿಣಾಮ ಬೀರಿತು.  ಆರೋಗ್ಯ ಸುಧಾರಿಸಿತು.  ಆರು ತಿಂಗಳಿನಲ್ಲಿ ಸಾಯುತ್ತೀರೆಂದು ಹೇಳಿದ ಈ ವ್ಯಕ್ತಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಬದುಕಿದ್ದು, ಕೊನೆಗೆ ಹೃದಯಾಘಾತದಿಂದ  ತೀರಿಕೊಂಡರು.  ಆಶ್ಚರ್ಯವೆಂದರೆ ಅವರಿಗಿದ್ದ ಕಾಯಿಲೆಯಿಂದ ಅವರು ಸಾಯಲೇ ಇಲ್ಲ.
               
              " ನಗು ನಗುತಾ ನಲಿ ನಲಿ ಏನೇ ಆಗಲಿ " ಎಂದು ಇವರನ್ನು ನೋಡಿಯೇ ಬರೆದಿರಬೇಕು 


October 17, 2012

ದೊಡ್ಡವರ ದಾರಿ ..............................8

      

                  ಡಿ .ವಿ .ಗುಂಡಪ್ಪನವರ ಅನುಭವದ ಕಂತೆ ಬಲು ದೊಡ್ಡದು. ಅವರ ಕಂತೆಯಲ್ಲಿ ಅದೆಷ್ಟು ಅನುಭವದ ವಿಚಾರಗಳು ಹುದುಗಿತ್ತೋ ಆ ಭಗವಂತನಿಗೆ ಗೊತ್ತು.  ಎಷ್ಟೊಂದನ್ನು ಬರೆದು ನಮ್ಮಂತಹ ಪಾಮರರಿಗೆ ತಿಳಿಸಿಹೊಗಿದ್ದಾರೆ.  ಅರಿತು ಬಾಳುವುದಷ್ಟೇ ನಮ್ಮ ಪಾಲಿಗೆ ಉಳಿದಿರುವುದು. ಒಂದು ಅಪರೂಪದ ಪ್ರಸಂಗ ಡಿ.ವಿ.ಜಿ ಮಾತುಗಳಲ್ಲೇ ತಿಳಿಸಿದ್ದೇನೆ.
                     " ನಂಗೆ ಪರಿಚಿತನಾದ ಮುತ್ತ ಎಂಬಾತನಿದ್ದ. ಆತ ನಾವು ಈಗ ಹರಿಜನವೆಂದು ಗೌರವಿಸುವ ಜನಾಂಗಕ್ಕೆ ಸೇರಿದವನು.  ಆತ  ಅಕ್ಷರ ಗಂಧ ಕಾಣದವನು.  ಅವನಿಗಿದ್ದ ಹುದ್ದೆ ಒಂದು ಸಣ್ಣ ಹಳ್ಳಿಯ ತಳವಾರಿಕೆ. ಆದರೆ ಅವನು ಗ್ರಾಮಕ್ಕೆಲ್ಲ ಇಷ್ಟವಾಗಿದ್ದವನು.  ಅವನದು ಯಾವಾಗಲು ನಗುತ್ತಾ ನಗಿಸುತ್ತಿರುವ ಸ್ವಭಾವ.  ಮಧುಸೇವನೆಯಿಂದ ಅವನ ಮಾತಿನಲ್ಲಿ ಮತ್ತಷ್ಟು ಹಾಸ್ಯ ತೋರುತ್ತಿತ್ತು.  ಒಂದು ದಿನ ಆತ  ನನ್ನಲ್ಲಿಗೆ ಬಂದು ನಾಲ್ಕು ರೂಪಾಯಿ ಬೇಡಿದ.  ನಾನು ಅವನನ್ನು  " ಏನು ನಾಲ್ಕಾಣೆಯಿಂದ ನಾಲ್ಕು ರೂಪಾಯಿಗೆ ಬಡ್ತಿ ಮಾಡಿಕೊಂಡಿದ್ದಿ ?  ಇನ್ನು ಮೇಲೆ ವಿಲಾಯಿತಿ ಪಾನಕವೋ? " ಎಂದು ಕೇಳಿದೆ.  ಅವನು  " ಇಲ್ಲಾ ಬುದ್ಧಿ.  ಒಂದು ಧರ್ಮ ಮಾಡೋಕೆ ಹಣಬೇಕು .  ಆ ಪುಣ್ಯ ನಿಮಗೆ ಬರತೈತಿ." ಎಂದು ಹೇಳಿದ.  ನಾನು " ಹಿಡಿ ಇದನ್ನು, ಆ ಪುಣ್ಯ ನಿನಗೆ ಇರಲಿ " ಎಂದು ಹೇಳಿ ಕಳುಹಿಸಿದೆ.
                      ಒಂದುವಾರ ಕಳೆದ ಮೇಲೆ ಮತ್ತೆ ತಿರುಗಿ ಬಂದು " ಜಮೀನ್ತಾವಿಗೆ ನೀವು ಬರಬೇಕು ಬುದ್ಧಿ " ಎಂದು ಕರೆದ. ಒಂದು ದಿವಸ ನಾನು ಅಲ್ಲಿಗೆ ಹೋದಾಗ ಕಂಡದ್ದೇನು ? ಒಂದು ಆನುಗಲ್ಲು ಕಟ್ಟಡ.  ಆಳೆತ್ತರದ ಮೂರು ನಿಲುಗಲ್ಲುಗಳನ್ನು ನೆಲದಲ್ಲಿ ನೆಟ್ಟು ನಿಲ್ಲಿಸಿದ್ದಾನೆ. ಅವುಗಳ ಮೇಲೆ ಒಂದು ಉದ್ದವಾದ ಕಲ್ಲಿನ ಅಡ್ಡದೂಲವನ್ನು ಹಾಸಿದ್ದಾನೆ !  ಅದೇನೆಂದು ನಾನು ಕೇಳಲು " ಇದೆ ಬುದ್ಧಿ ನಿಮ್ಮ ಧರ್ಮ. ಈ ಜಾಗ ತಿಟ್ಟು. ಈ ಕಡೆಯಿಂದ ಹಳ್ಳಿಗಳವರು ಸೌದೆ ಹೊರೆಹೊತ್ತು ಹತ್ತಿ ಬರ್ತಾರೆ. ಇಲ್ಲಿಗೆ ಬರೋಹೊತ್ಗೆ ಸುಸ್ತುಬಿದ್ದು ಹೋಗಿರ್ತಾರೆ.  ಇನ್ನುಮೇಲೆ ಈ ಅನುಗಲ್ಲಿಗೆ ಸೌದೆ ಒರಗಿಸಿ, ಧಣಿವಾರಿಸಿಕೊಂಡು, ಒಂದು ಚಣ ಇಲ್ಲಿ ಕೂತು ಬಾವಿಯಿಂದ ಒಂದು ಗುಟುಕು ನೀರು ಕುಡಿದು, ತಿರುಗಿ ಹೊರೆ ಹೊತ್ತುಕೊಂಡು ಪೇಟೆಗೆ ಹೋಯ್ತಾರೆ." 
                   ಇದು ಮುತ್ತನ  ಪಾರಮಾರ್ಥಿಕತೆ.  ಅವನು ನಿರಕ್ಷರಕುಕ್ಷಿ, ಹೆಂಡಕುಡುಕ, ಹೊಟ್ಟೆಗಿಲ್ಲದ ಬಡವ, ಮುದುಕ.  ಆದರೆ ಅವನ ಹೃದಯಸಂಪತ್ತು! ಮೈಮುರಿದುಕೊಂಡು ಹಳ್ಳಗಳೆನ್ನದೆ ಕಲ್ಲುಗಳನ್ನು  ಎತ್ತಿ ನೆಟ್ಟ.  ಆ ಕಲ್ಲು  ಸಾಗಿಸುವುದು ತನ್ನ ಕೈಯಿಂದಾಗದ ಕೆಲಸವಾದ ಕಾರಣ ಬಾಡಿಗೆಗೆ ಹಣ ಬೇಡಿದ.  ಅವನ ಶ್ರದ್ಧೆ ಪರಿಶ್ರಮಗಳ ಪಕ್ಕದಲ್ಲಿ ಆ ಹಣ ತರಗೆಲೆ.  ಅವನಿಗೆ ಬಂದ ಲಾಭವೇನು?  ಹಳ್ಳಿಯ ಜನ ಅಲ್ಲಿ ಹೊರೆಯಿಳಿಸಿ ಉಸ್ಸಪ್ಪಾ! ಎಂದು ಆಯಾಸ ಕಳೆದಾಗ, ಮುತ್ತನ  ಮುಖ ಆತ್ಮತೃಪ್ತಿಯ ಪ್ರತಿಬಿಂಬವಾಗುತ್ತದೆ.  ಮುತ್ತನು ಈ ತೃಪ್ತಿಗಾಗಿ ಬಹು ವರ್ಷಗಳ ಕಾಲ ಚಿಂತಿಸಿ ತಾಳ್ಮೆಯಿಂದ ದುಡಿದ.
                      ಇದು ಮಹನೀಯ ಗುಣ.
ಹೆಚ್ ಏನ್ ಪ್ರಕಾಶ್ 17 10 2012

October 16, 2012

ಬೀ Chi ಯವರ ಅಂದನಾ ತಿಮ್ಮ...........4



                 ಗೆಳೆಯನೊಬ್ಬ ಸತ್ತ ನಾನಿಷ್ಟು ಸತ್ತೆ |
                 ಬಾಳ ಕೊಂಡಿ ಅದೊಂದು ಕಳಚಿದಾಗ ||
                 ಎಳೆಯ ಮಗ ಸತ್ತ ಮತ್ತಷ್ಟು ಸತ್ತೆ | 
                 ನಾಳಿಷ್ಟು ಇಂತಿಷ್ಟು ಕಂತಿನಾ ಸಾವು ಕೇಳೋ ತಿಂಮ ||

ಇದ್ದಕಿದ್ದಂತೆ ಒಮ್ಮೆಲೇ ಸಾಯುವುದು |
ಎದ್ದು ಎದೆಗೊದ್ದಂತೆ ಬಹು ಕಷ್ಟ ಕಾಣೋ  ||
ಬಿದ್ದಾಗ ಎದ್ದಾಗ ಅಷ್ಟಿಷ್ಟು ಸಾಯುವುದು | 
ಒದ್ದಾಟವಿಲ್ಲ , ಬಾಳು ಸುಖ ,ಸಾವು ಸುಲಭವೋ ತಿಂಮ ||

                 ಬದುಕು ಇದಿರಿಸಲಾರ ಬಾಳುವುದು ಕಷ್ಟ |
                 ಎದೆ ಕಲ್ಲು ಮಾಡಿ ಆತ್ಮಹತ್ಯೆಯಗೈದ ||
                 ಇದು ಬೇರೆ ಜಾತಿ, ಸಾವು ಇದಿರಿಸಲಾರ |
                 ಅದಕಾಗಿ ಬದುಕಿಹೆನು, ಈ ಬಾಳು ಬಾಳೆನೋ ತಿಂಮ ||

ಅಲ್ಲಲ್ಲಿ ಕಂಡದ್ದು ಕೇಳಿದ್ದು ತಿಳಿದಿದು |
ಎಲ್ಲವು ಸೇರಿ ಒಂದು ನಾನಾದೆ ||
ಬಲ್ಲೆನೇ ಹಿಂದಿನದು ಏನೇನು ತಂದಿಹೇನೋ?|
ಬಾಳೊಂದು ನಡುಗಡ್ಡೆ ಅಲ್ಲವೋ ತಿಂಮ ||
          
                                                                                            (ಮತ್ತಷ್ಟು ಮುಂದಿನ ದಿನಕ್ಕೆ)

ದೊಡ್ಡವರ ದಾರಿ..............7

      
              ನಮ್ಮೆಲ್ಲರ ಬದುಕಿನಲ್ಲಿ ತೊಂದರೆ ತಾಪತ್ರಯಗಳು ಕಾಡಿದಾಗ, ಎಲ್ಲ ಕಷ್ಟಗಳು ನಮ್ಮೊಬ್ಬರನ್ನೇ ಕಾಡುತ್ತವೆ ಎಂದುಕೊಳ್ಳುತ್ತೇವೆ.  ಬೇರೆಯರ ಕಷ್ಟಗಳು ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ.  ಎಲ್ಲರ ಕಷ್ಟಕ್ಕಿಂತ ನಮ್ಮ ಕಷ್ಟವೇ ದೊಡ್ಡದೆಂದು ಭಾವಿಸಿ ಗೊಣಗುತ್ತ, ಶಪಿಸುತ್ತ   ಬಂದಿರುವ ಕಷ್ಟವನ್ನು ನೀಸುತ್ತೇವೆ.  ಇಂತಹ ಕಷ್ಟದ ಸಮಯದಲ್ಲಿ ಸಮಾಧಾನ ಪರಿಹಾರ ಎಲ್ಲಿ ಸಿಗಬಹುದೆಂದು ಕೆಲವರು ಬೇರೆ ಬೇರೆ ದಾರಿ ಹುಡುಕಾಡುತ್ತಾ ತಮ್ಮ ಶಕ್ತಿ ಸಾಮರ್ಥ್ಯವನ್ನು ನಷ್ಟ ಮಾಡಿಕೊಳ್ಳುತ್ತಾ ಇನ್ನಷ್ಟು ಕಷ್ಟಗಳನ್ನು ತಲೆಯ ಮೇಲೆ ಎಳೆದುಕೊಳ್ಳುತ್ತಾರೆ.

                    ಇಂತಹ ಒಂದು ಸಂದರ್ಭದಲ್ಲಿ ಓರ್ವ,  ಭಕ್ತ ಭಗವಾನ್ ರಮಣ ಮಹರ್ಷಿಗಳಲ್ಲಿ ಹೋಗಿ ತನಗಿರುವ ಕಷ್ಟ, ಸಮಸ್ಯೆಗಳನ್ನೆಲ್ಲಾ ನಿವೇದಿಸಿಕೊಂಡು "ದೇವರಿಗೆ ನನ್ನ ಮೇಲೇಕೆ ಇಷ್ಟೊಂದು ಸಿಟ್ಟು ? " ಎಂದು ಪ್ರಶ್ನಿಸಿದ.  ಭಗವಾನರು ನಸುನಕ್ಕು " ನಿಮ್ಮ ಊರಿನಲ್ಲಿ ಮಡಿವಾಳರು ಇದ್ದಾರೆಯೇ? " ಎಂದು ಪ್ರಶ್ನಿಸಿದರು." ಖಂಡಿತ ಇದ್ದಾರೆ " ಎಂದು ಆ ಭಕ್ತ ಹೇಳಿದ. " ನೀವು ಎಂದಾದರು ಮಡಿವಾಳರು ಬಟ್ಟೆ ಶುಭ್ರ ಮಾಡುವುದನ್ನು ನೋಡಿದ್ದಿರಾ? "    ಎಂದು ಮರು ಪ್ರಶ್ನೆ ಹಾಕಿದರು. " ಖಂಡಿತ ನೋಡಿದ್ದೇನೆ " ಎಂದು ಉತ್ತರಿಸಿದ  " ಮಡಿವಾಳ ಬಟ್ಟೆಯನ್ನು ಶುಭ್ರ ಮಾಡಲು, ಬಂಡೆಯ ಮೇಲೆ ಎತ್ತಿ ಎತ್ತಿ ಬಡಿದು, ನೀರಿನಲ್ಲಿ ಅದ್ದಿ ಅದ್ದಿ, ಮತ್ತೆ ಬಡಿದು ಶುಭ್ರ ಮಾಡುತ್ತಾನೆ.  ಶುಭ್ರವಾಗಿಲ್ಲವೆಂದು ತಿಳಿದರೆ ಮತ್ತೆ ಬಂಡೆಯಮೇಲೆ ಬಡಿಯುತ್ತಾನೆ. ಹೌದಲ್ಲವೇ? " ಎಂದು ಮಹರ್ಷಿಗಳು ಪ್ರಶ್ನಿಸಿದರು.  " ಹೌದು , ಹೌದು " ಎಂದು    ಗೋಣು   ಆಡಿಸುತ್ತ ನಿಂತ. " ಮಡಿವಾಳನಿಗೆ ನಿಮ್ಮ ಬಟ್ಟೆಯ ಮೇಲೋ ಅಥವಾ ನಿಮ್ಮ ಮೇಲೋ ಇರುವ ಸಿಟ್ಟಿನಿಂದ ಬಡಿಯುತ್ತಾನೆಯೇ ? ಇಲ್ಲ ತಾನೇ? ಹಾಗೆ ಬಡಿಯದೇ ಹೋದರೆ ಬಟ್ಟೆ ಶುಭ್ರವಾಗದು. ಭಗವಂತನು ಹೀಗೆ ನಿಮಗೆ ಕಷ್ಟ ಕೊಟ್ಟಿರುವುದು ನಿಮ್ಮನ್ನು ಗಟ್ಟಿಗೊಳಿಸಲು ಮತ್ತು ನಿಮ್ಮನ್ನು ಪರಿಶುದ್ದರನ್ನಾಗಿ ಮಾಡಲುಮಾತ್ರ!! ಇದು ಭಗವಂತ  ನೀಡಿರುವ ತಾತ್ಕಾಲಿಕ ಕಷ್ಟವೇ ಹೊರತು ನಿಮ್ಮ ಮೇಲಿನ ಸಿಟ್ಟಿನಿಂದಲ್ಲ." ಎಂದು ಸಮಾಧಾನ ಮಾಡಿದರು.  

October 13, 2012

ದೊಡ್ಡವರ ದಾರಿ ..........................6



              ಥಾಮಸ್ ಅಲ್ವಾ ಎಡಿಸನ್ ಹೆಸರು ಯಾರಿಗೆ ಗೊತ್ತಿಲ್ಲ? ವೈಜ್ಞಾನಿಕ ಸಂಶೋದನೆಗಳಲ್ಲಿ ಮಹಾನ್ ಎತ್ತರದ ಸರಳ ಜೀವಿ. ಇವರು ಹೇಳುತ್ತಿದ್ದ ಮಾತೆಂದರೆ " ಬದುಕಿನಲ್ಲಿ ತೊಂದರೆ ಎಲ್ಲರಿಗೂ ಬರುತ್ತದೆ, ಆದರೆ ಅದನ್ನು ಎದುರಿಸಿ ನಿಲ್ಲಬೇಕಾದರೆ ತೊಂದರೆಗೆ  ಕಾರಣ, ಅದಕ್ಕೆ ಪರಿಹಾರ ಮತ್ತು ಅದು ಪುನಃ ಬಾರದಂತೆ ಎಚ್ಚರಿಕೆ ವಹಿಸುವುದು. ಇಷ್ಟು ಸಾಕು ಯಶಸ್ವಿ ವ್ಯಕ್ತಿಗಳಾಗಲು."  
              ಥಾಮಸ್ ಅಲ್ವಾ ಎಡಿಸನ್ ಅವರ ಸಂಶೋಧನಾ ಕೇಂದ್ರಕ್ಕೆ ಒಮ್ಮೆ ಬೆಂಕಿ ಬಿದ್ದಿತು.  ಸಂಶೋದನಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಇವರ ಸಂಗಾತಿಗಳು ತಲೆಯ ಮೇಲೆ ಕೈ ಹೊತ್ತು ಕೂತುಬಿಟ್ಟರು. ಮುಂದೇನು ಮಾಡಬೇಕೆಂದು ತೋಚದೆ ಕೂತಿರುವಾಗ ಎಡಿಸನ್ನರು ನಿರ್ವಿಕಾರ ಭಾವದಿಂದ ತಮ್ಮ ಸಂಗಾತಿಗಳನ್ನು ಉದ್ದೇಶಿಸಿ " ನಮ್ಮ ಎಲ್ಲಾ ತಪ್ಪುಗಳು ಸುಟ್ಟು ಬೂದಿಯಾಗಿವೆ.  ನಾವು ಮತ್ತೆ ಹೊಸದಾಗಿ ನಮ್ಮ ಕಾರ್ಯವನ್ನು  ಉತ್ಸಾಹದಿಂದ ಪ್ರಾರಂಭ ಮಾಡುವ ದಿನ ಈಗ ಬಂದಿದೆ. ಬನ್ನಿ! ಕೆಲಸಕ್ಕೆ ತೊಡಗೋಣ!" ಎಂದು ನಗುನಗುತ್ತಲೇ ಹೇಳಿ ನಿರ್ಮಾಣ ಕಾರ್ಯ ಆರಂಭಿಸಿದರು.

October 12, 2012

ದೊಡ್ಡವರ ದಾರಿ.........5



           ನನ್ನ ಸ್ನೇಹಿತರ  ವೃದ್ಧ ತಂದೆ ತಾಯಿ ೯೦ ಮತ್ತು ೮೫ ರ ಆಸು ಪಾಸಿನವರು.  ತಾತ ಅಜ್ಜಿ ಅಂದ್ರೆ ಮೊಮ್ಮಕ್ಕಳಿಗೆ ಪ್ರಾಣ. ಅಪ್ಪ ಅಮ್ಮ ಅಂದ್ರೆ ನನ್ನ ಸ್ನೇಹಿತರ ಕುಟುಂಬಕ್ಕೂ ಅಷ್ಟೇ ಗೌರವ.
           ಒಮ್ಮೆ ಕಾಲು ಜಾರಿ ಬಿದ್ದ ತಾತ ಹಾಸಿಗೆ ಹಿಡಿದರು. ಅಜ್ಜಿ ಯಾರಿಗೂ ಬಿಡದೆ ತಾತನ ಸೇವೆಯನ್ನು ಮಾಡುತ್ತಿದ್ದರು. ತಾತ ಒಮ್ಮೆಯೂ ನರಳದೆ, ಬಂದವರ ಜೊತೆ ಮಾತನಾಡಿಕೊಂಡು ಎಲ್ಲರನ್ನು ವಿಚಾರಿಸುತ್ತಿದ್ದರು. ಹಾಸ್ಯ ಮಾಡುತ್ತಿದ್ದರು.  ಮನೆ ತುಂಬಾ ನೆಂಟರು ಇದ್ದ ಒಂದು ದಿನ ಇದ್ದಕ್ಕೆ ಇದ್ದಹಾಗೆ ಗಟ್ಟಿಮುಟ್ಟ ಆಗಿದ್ದ ಅಜ್ಜಿ ಬೆಳಗ್ಗೆ ಹಾಸಿಗೆಯಿಂದ ಏಳಲೇ ಇಲ್ಲ.  ಸುಖವಾಗಿ ನಿದ್ದೆಯಲ್ಲೇ ಸಾವನಪ್ಪಿತ್ತು. ಮನೆಯವರಿಗೆಲ್ಲ ಆಘಾತ. ಏನು ಮಾಡಲು ತಿಳಿಯದ ಸ್ನೇಹಿತ ಇರುವ ವಿಚಾರ ತೋಡಿಕೊಂಡು ಗದ್ಗದಿತನಾದ.  ಪಾಪ ತಾತನಿಗೆ ಈ ವಿಚಾರ ಗೊತ್ತಿಲ್ಲ. ಮಲಗಿದ ಜಾಗದಿಂದಲೇ ಅಜ್ಜಿಯ ಬರುವಿಕೆಗಾಗಿ ಕಾಯುತ್ತಿತ್ತು.  ಸುಮಾರು  ಹೊತ್ತಾದರೂ ಅಜ್ಜಿ ಬರದಿರುವುದ ಕಂಡು ಮಗನಲ್ಲಿ ವಿಚಾರಿಸಿತು " ನನ್ನ ಬಿಟ್ಟು ಎಲ್ಲಿ ಹೋದಳು? ಬೆಳಗ್ಗೆಯಿಂದ ಮುಖವೇ ತೋರಿಸಿಲ್ಲ ! "ಅಂತ ಹಲುಬಿದರು. ಮಗನಿಗೆ ಹೇಗೆ ಅಮ್ಮನ ಸಾವಿನ ಸುದ್ದಿ ತಿಳಿಸುವುದು ಅಂತ ಹಿಂಜರಿಕೆಯಾಗಿ ಹಾರಿಕೆ ಉತ್ತರ ಕೊಟ್ಟು ರೂಮಿನಿಂದ ಹೊರಕ್ಕೆ ಬಂದ.
           ಇರುವ ವಿಚಾರ ತಾತನಿಗೆ ತಿಳಿಸುವ ಬಗ್ಗೆ ಎಲ್ಲ ಯೋಚಿಸಿ ನಾವು ತಾತನ ಹತ್ತಿರ ಹೋಗಿ " ತಾತ, ನಿಮಗೊಂದು ವಿಚಾರ ಹೇಳಬೇಕೆಂದು  ಬಂದೆ " ಎಂದು  ಪೀಠಿಕೆ    ಹಾಕಿದೆ.  ಬೆಳಗಿನ ಇಷ್ಟು ಮುಂಚೆ ಬಂದಿರುವ ಬಗ್ಗೆ ವಿಚಾರಿಸಿದರು.  ನಿಧಾನವಾಗಿ ಅವರ  ಮೊಮ್ಮೊಕ್ಕಳು ಬಂದು ಕೂಡಿಕೊಂಡರು. ಎಲ್ಲರ ಮನಸ್ಸು ಬಾಡಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತಾತ " ಏನೋ ಹೇಳಬೇಕೂನ್ದೆ?' ಎಂದು ಪ್ರಶ್ನಿಸಿದರು.  ಗಂಟಲು ಸರಿಮಾಡಿಕೊಂಡು ಅಜ್ಜಿ ವಿಧಿವಶರಾದ ವಿಚಾರ ತಿಳಿಸಿದೆ.  " ಅಯ್ಯೋ  ನನ್ನನ್ನು   ಬಿಟ್ಟು ಹೊರತು ಹೋದಳೆ? " ಎಂದು ಅವರ ಕಣ್ಣಲ್ಲಿ ಎರಡು ಹನಿ ನೀರು ಉದುರಿತು.  ಒಂದೆರಡು ಕ್ಷಣದಲ್ಲಿ  ಸಾವರಿಸಿಕೊಂಡು " ಇನ್ನೇನು ಮಾಡೋಕ್ಕೆ ಆಗುತ್ತೆ?  ಅವಳ ಭಾಗ್ಯ ಅವಳು ತಗೊಂಡು ಹೋದಳು.  ನೀವು ನನಗೆ ಬೇರೊಂದು ಹೆಣ್ಣು ನೋಡಿ, ಮದುವೆಗೆ!!!!!!! " ಎಂದರು, ಅಲ್ಲಿದ್ದವರಿಗೆ ಆಶ್ಚರ್ಯ. ಸಹಜವಾಗಿ ಸಾವನ್ನು ತೆಗೆದುಕೊಂಡ ತಾತ ಮುಖವನ್ನು  ಗೋಡೆ ಕಡೆಗೆ ತಿರುಗಿಸಿದರು.
            ಮಧ್ಯಾನ್ಹದ ಹೊತಿಗೆ ಅಜ್ಜಿಯ ಪಾರ್ಥಿವ ಶರೀರವನ್ನು ತೆಗೆಲಾಯಿತು. ತಾತ ಮೌನವಾಗಿ ಕಣ್ಣೇರು ಹಾಕಿ ವಿದಾಯ ಹೇಳಿದರು.  ಸ್ಮಶಾನದಲ್ಲಿ  ಅಜ್ಜಿಯ  ಅಂತ್ಯ ಸಂಸ್ಕಾರಕ್ಕೆ ವಿಧಿ ನಡೆಸುತ್ತಿರುವಾಗಲೇ, ಮನೆಯಿಂದ ಒಬ್ಬ ಹಿರಿಯರು ಬಂದು ತಾತ ಕೊನೆಯುಸಿರೆಳೆದರೆಂದು ತಿಳಿಸಿದರು.  ನಮಗೆಲ್ಲ ಆಶ್ಚರ್ಯ.   ಅಜ್ಜಿಯ ಪಾರ್ಥಿವ ಶರೀರ ತೆಗೆದುಕೊಂಡು ಹೋರಟ ಐದು ಹತ್ತು ನಿಮಿಷದಲ್ಲೇ ತಾತ ಬಿಕ್ಕಳಿಸಲು ಪ್ರಾರಂಭ ಮಾಡಿ, ಈಗ ಅರ್ಧ ಗಂಟೆಯ ಹಿಂದೆ ಜೀವ ಬಿಟ್ಟರು ಎಂದು ಆ ಹಿರಿಯರು ಹೇಳಿದರು.  ಎಂತಹ ಸುಖವಾದ ಸಾವು!
         ಇದ್ದಾಗಲೂ ಒಂದು ಕ್ಷಣವೂ ಅಜ್ಜಿಯನ್ನು ಬಿಡದ ತಾತ ಸಾವಿನಲ್ಲೂ ಬಿಡಲು ತಯಾರಿರಲಿಲ್ಲ. ಅಜ್ಜಿಯ ಜೊತೆ ಸಾವಿನಲ್ಲೂ ಒಂದಾದರು.  ನಂತರದಲ್ಲಿ ಇಬ್ಬರ ಪಾರ್ಥಿವ ಶರೀರಗಳನ್ನು ಒಟ್ಟಿಗೆ ಸಂಸ್ಕಾರ ಮಾಡಲಾಯಿತು. ಇಂದಿಗೆ ಹತ್ತಾರು ವರ್ಷಗಳೇ ಕಳೆದಿದ್ದರು ಇವರ ಆದರ್ಶ ಜೀವನ ಎಂದಿಗೂ ನಮಗೆ ಮಾದರಿಯೇ!

October 10, 2012

ಬೀ Chi ಯವರ ಅಂದನಾ ತಿಮ್ಮ...........3



ಯಾತ್ರೆಗೆ ಬಂದಿರುವೆ ಧರ್ಮಶಾಲೆಯಲಿರು|
ರಾತ್ರಿ ಮೂರು ಕಳೆ, ಮುಂದು ಸಾಗು | 
ಪಾತ್ರೆ ಪಡುಗ ಕೊಡು, ಧರ್ಮಶಾಲೆಯ ಬಿಡು|
ಯಾತ್ರಿಕ ನೀನಿಲ್ಲಿ , ಅರಿತು ಬಾಳೋ ತಿಂಮ ||

ಎಳೆರವಿಯ ದಿಟ್ಟಿಸುತ ಅಜ್ಜ ಕುಳಿತಿದ್ದ|
ಕೇಳಿದ ಗೀಬ್ರಾನ್ ಏನ ನೋಡುವಿ ತಾತ? |
ಬಾಳು ಎಂದಜ್ಜ ,  ಅಷ್ಟೇನೇ ? ಅಂದ ಗೀಬ್ರಾನ್ |
ಸಾಲದೇ? ಕೇಳಿದನಾ  ಅಜ್ಜಾ , ತಿಳಿಯಿತೇ ತಿಮ್ಮ?||

ಜೀವನದಿ ಬೇಸತ್ತು ಒಮ್ಮೆ ಸಾಯಲು ಹೊರಟೆ|
ಬಾವಿ ಕಂಡೆನು ಒಂದ , ನೀರಿಗಿಳಿದೆ|
ಹಾವು!!!! ಒಂದೇ ಓಟ.....ಸಾವಿಗೆ ಹಾವೇನು?|
ಬಾವೇನು?...ಬಾಳು ಸೋಜಿಗ ತಿಂಮ ||

ಬಾಳು ಗೋಳಾಯಿತೆಂದು ಅಳುವುದು ಹೊಲ್ಲ |
ಗೋಳು ಅಳುವವಗಷ್ಟೇ ಮೀಸಲುಂಟು |
ಬಾಳ ಗುಟ್ಟರಿತು ಬದುಕುವವಗೆ ಆತ್ಮದ ಹಸಿವಿದು |
ಬಾಳು ಹಬ್ಬವೂ ಹೌದು, ಬಾಳು ತಿಂಮ ||

                                                                                        (ಮತ್ತಷ್ಟು ನಾಳೆಗೆ)

October 9, 2012

ದೊಡ್ಡವರ ದಾರಿ..........4





                 ತಾ ರಾ ಸು ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು.  ಇವರು ತಮ್ಮ ಯೌವನದಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಂತೆ.  ಇವರ ಸ್ನೇಹಿತರ ಬಳಗ ದೊಡ್ಡದು. ಇವರ ಅನೇಕ ಸ್ನೇಹಿತರು ಸ್ವತಂತ್ರ ಭಾರತದ ಸರಕಾರದಲ್ಲಿ ಮಂತ್ರಿ ಮಹೋದಯರಾಗಿದ್ದರು.  ತಾ ರಾ ಸು ಬರಹಗಾರರಾಗಿಯೇ ಉಳಿದರು. ಎಂದಿನಂತೆ ಜನಪ್ರಿಯತೆ ಬಂತೆ ಹೊರತು ಇವರ ಬದುಕು ಕಷ್ಟದಲ್ಲಿಯೇ ಇತ್ತು.  ಹಲವಾರು ಪುಸ್ತಕಗಳನ್ನು ಹೊರತಂದರೂ, ಇವರ ಹಣಕಾಸಿನ ಸ್ತಿತಿ ಅಷ್ಟೇನೂ ಸುಧಾರಿಸಲಿಲ್ಲ.  ಆದರೆ, ಇದಾವುದರ ಪರಿವೆಯೂ ಈ ಕವಿಮಾನ್ಯರಿಗೆ  ಇರಲಿಲ್ಲ. 
                 ಒಮ್ಮೆ ತಾ ರಾ ಸು ರವರು ಒಂದು ಸಭೆಗೆ ಆಹ್ವಾನಿತರಾಗಿ ಹೋಗಿದ್ದರು.  ಅಲ್ಲಿಗೆ ಇವರ ಮಿತ್ರರಲ್ಲೊಬ್ಬರಾದ ಮಂತ್ರಿ ಮಹೋದಯರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.  ಕಾರ್ಯಕ್ರಮ ಮುಗಿದ ನಂತರ ಲೋಕಾಭಿರಾಮವಾಗಿ ಮಾತನಾಡುತ್ತ ಸಂಸಾರದ ವಿಚಾರ, ಆರ್ಥಿಕ ಸ್ಥಿತಿ ಗತಿ, ಇತ್ಯಾದಿಗಳು ಬಂದವು.  ಸೂಕ್ಷ್ಮವಾಗಿ ಇವರ ಪರಿಸ್ಥಿತಿ ಗಮನಿಸಿದ ಮಂತ್ರಿ ಮಹೋದಯರು ತಾ ರಾ ಸು ರವರಿಗೆ " ಸ್ವಾಮೀ, ನೀವು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಬಗ್ಗೆ ಒಂದು ಪ್ರಮಾಣಪತ್ರ ಲಗತ್ತಿಸಿ ಒಂದು ಅರ್ಜಿಕೊಡಿ.  ನಿಮಗೆ ಮಂಡ್ಯ ಹತ್ತಿರ ಒಂದೆರಡು ಎಕರೆ ದರಖಾಸ್ತು ಜಮೀನನ್ನು ಉಚಿತವಾಗಿ ಕೊಡಲು ಶಿಫಾರಸ್ಸು ಮಾಡುತ್ತೇನೆ. ನಿಮಗೆ ಖಂಡಿತ ಸಿಗುತ್ತದೆ " ಎಂದು ಹೇಳಿದರು.  ಆಗಲಿ ಎಂದು ಹೇಳಿ ತಾ ರಾ ಸು ಮನೆಗೆ ಬಂದರು.
                 ಒಂದೆರಡು ದಿನ ಕಳೆದ ನಂತರ ಅರ್ಜಿಯನ್ನು ತಯಾರು ಮಾಡಿದರು.  ಈ ಅರ್ಜಿಯನ್ನು ತಾ ರಾ ಸು ರವರ  ಪತ್ನಿ ಅಂಬುಜಮ್ಮ ನವರು ನೋಡಿದರು.  ಈ ಅರ್ಜಿ ಕೊಡೊ ವಿಚಾರ ಈಕೆಗೆ ಏಕೋ ಹಿಡಿಸಲಿಲ್ಲ. ಅವರು ನೇರ ಬಂದು ತಮ್ಮ ಪತಿಯಲ್ಲಿ " ನೀವು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದು ದೇಶಕ್ಕಾಗೋ ಅಥವಾ ಜಮೀನಿಗಾಗೋ? " ಎಂದು ಪ್ರಶ್ನಿಸಿಯೇ ಬಿಟ್ಟರು.      ಈ ಅನಿರೀಕ್ಷಿತ ಪ್ರಶ್ನೆಯಿಂದ ಕ್ಷಣಕಾಲ ತಬ್ಬಿಬ್ಬಾದರೂ ಸಾವರಿಸಿಕೊಂಡು " ದೇಶಕಾಗಿಯೇ " ಎನ್ನುತ್ತಾ   ಆ ಅರ್ಜಿಯನ್ನು ಹರಿದು ಬಿಸಾಕಿದರು.
                 ಇಂತಹ ನಿಸ್ಪೃಹ  ದಂಪತಿಗಳು  ನಮಗೆ ಆದರ್ಶವಲ್ಲವೇ?


ಬೀ Chi ಯವರ ಅಂದನಾ ತಿಮ್ಮ...........2



              ಗಾಯತಾ ಮಾಯುವುದು ಗಾಯಕೌಷಧಿ ಉಂಟು|
              ಮಾಯದದು ಗಾಯದ ಕಪ್ಪು ಕಲೆಯು|
              ಸಾಯುವರು ಮಿತ್ರರು ಕಾಲ ನುಂಗಿತು ದುಃಖ |
              ಹೋಯಿತೇನೋ ನೆನಪು? ಹೇಳು ತಿಂಮ ||

             ಎಲ್ಲದಕು ಕಾರಣವ ಹುಡುಕದಿರು ಮನುಜ|
             ಬೆಲ್ಲವದು ಸಿಹಿ ಇದೆ ನೊಣ ಬಂತು ಅಂದ |
             ಬಲ್ಲವರು ಉಂಟೆ ಪ್ರೀತಿಗೆ ಕಾರಣವನು ?|
             ಇಲ್ಲ ಕಾರಣ, ಇದ್ದರದು ಪ್ರೀತಿಯೇ ಅಲ್ಲ ತಿಂಮ ||

             ಎಲ್ಲ ಕಾಲದಿ ಯಾರು ಚೆನ್ನ ಇದ್ದದ್ದು ಉಂಟು?|
             ಕೆಲಕಾಲ ಚೆನ್ನ, ಕೆಲಕಾಲ ಸಪ್ಪೆ, ಇನ್ನು |
             ಕೆಲಕಾಲ ಬರೀ ಸಿಪ್ಪೆ ಆಗಿಹೆನು |
             ನೆಲವಿರುವವರೆಗೂ ಅಂತೂ ಇರುವೆ, ಕೇಳೋ ತಿಂಮ ||

             ಸರಿ ಅಲ್ಲ ಈ ಜಗವು ಮತಿ ಇಲ್ಲ ಈ ಜನಕೆ|
             ಹಿರಿದು ಆಗಲು ಬೇಕು ನಮ್ಮ ಬಾಳು |
             ಕಿರಿ ಕಿರಿ ದುಸು ಮುಸು ವ್ಯರ್ಥವಾದುದೇ ಇಲ್ಲ|
             ಸಿರಿವಂತ ಆತ್ಮದ ಗೊಣಗಾಟವಿದು ತಿಂಮ || 

                                                                                      (ಮತ್ತಷ್ಟು ನಾಳೆಗೆ)

October 8, 2012

ಬೀ Chi ಯವರ ಅಂದನಾ ತಿಮ್ಮ


            ಈಗ್ಗೆ 40 ವರ್ಷಗಳ ಹಿಂದೆಯೇ ಒಂದು ಅತ್ಯುತ್ತಮ ಕೃತಿಯನ್ನು ರಚಿಸಿ ಅದರಲ್ಲಿ ಜ್ಞಾನ, ಲೋಕಾನುಭವ ಇವೆರಡನ್ನೂ  ಹದವಾಗಿ ಮಿಶ್ರಮಾಡಿ ನಮ್ಮಂತಹವರಿಗೆ ಬಿಟ್ಟು ಹೋಗಿದ್ದಾರೆ.   ಅದೇ ಅಂದನಾ ತಿಮ್ಮ. ಬೀ Chi ಯವರ ಮಾತಿನಲ್ಲೇ   ಹೇಳಬೇಕೆಂದರೆ ಈ ಕೃತಿ  ಇವರ 51 ನೆ   ಅಪರಾಧ!                  ಈ ಪುಸ್ತಕದ ಮುನ್ನುಡಿಯಲ್ಲಿ ಬೀ Chi ಯವರು " ನಡೆಯುವವನಿಗೆ ಕಾಲು ಮತ್ತು ಗುರಿ ಎರಡೇ ಇದ್ದರೆ ಸಾಲದು, ಮುಖ್ಯವಾಗಿ ಇನ್ನೊಂದು ಬೇಕು--ಕಣ್ಣು . ಅಷ್ಟು ದೂರ ಸಾಗಿಬಂದ ನಂತರ ಕೊಂಚ ನಿಂತು, ವಿಶ್ರಮಿಸಿ, ಒಂದು ಬಾರಿ ಹಿಂದೆ  ತಿರುಗಿ ನೋಡುವುದು ಜಾಣ ದಾರಿಹೋಕನ ಲಕ್ಷಣ. ಎಷ್ಟು ದೂರ ನಡೆದಿದ್ದೇನೆ, ನಡೆದು ಬಂದ ದಾರಿ ಸರಿಯೇ ಎಂಬುದು ಹೆಚ್ಚು ಮುಖ್ಯ. ಇದನ್ನರಿಯಬೇಡವೆ ?  ಆತ್ಮವಿಮರ್ಶೆ ಅವಶ್ಯ.  ಒಂದು ಸಮಗ್ರ ಚಿತ್ರ ಕಣ್ ಮುಂದು ಇರಲೆಂದು ಈ ಪ್ರಯತ್ನ."  ಹೇಳಿದ್ದಾರೆ .
           ಇಂತಹ ಸುಂದರ ಕವನಗಳ ಸಾಲಿನ ಆಯ್ದ ಭಾಗಗಳನ್ನು ಸಂಪದ ಓದುಗರೊಂದಿಗೆ ನಿಯಮಿತವಾಗಿ ಹಂಚಿಕೊಳ್ಳಲು ತುಂಬಾ ಸಂತೋಷ ಪಡುತ್ತೇನೆ.

ಸಿಹಿ ಬೇಕು ನಾಲಿಗೆಗೆ, ಕಹಿ ಒಲ್ಲೆನೆಂಬುವುದು |
ಇಹವೆರಡು   ಬಾಳಿನಲಿ ಹಗಲು ರಾತ್ರಿಗಳಂತೆ||
ಕಹಿಉಂಡು ಸಿಹಿ ಉಣ್ಣು,   ಹೇಗಿದೀಗ?|
ಬಹು ಉಪಕಾರಿ ಕಹಿ,  ರುಚಿ ನೋಡು ತಿಂಮ||

ದೊಡ್ಡ ಜೇಬಿದೆ ಇವಗೆ ಹೃದಯ ಬಹುಚಿಕ್ಕದು|
ದೊಡ್ಡ ಹೃದಯದವಗೆ ಚಿಕ್ಕ ಜೇಬು ||
ನೋಡಲ್ಲಿ, ಬರಿ ಜೇಬಿನ ಮುಂದು ಹೃದಯ ಹೀನನು |
ಕೈಯೊಡ್ಡಿ ನಿಂತಿಹನು,  ವಿಧಿವಿಲಾಸವಿದು ಕೇಳೋ ತಿಂಮ ||

                                                                                                           (ಮುಂದಿನ ದಿನಕ್ಕೆ ಇನ್ನಷ್ಟು)

ದೊಡ್ಡವರ ದಾರಿ..........3




          T P ಕೈಲಾಸಂರವರು  ಒಮ್ಮೆ Y C M A  ಗ್ರೌಂಡ್ಸ್ ನಲ್ಲಿ ಅವರ ಗುರುಗಳ ಭಾಷಣ ಕೇಳುತ್ತಿದ್ದರು.  ಅಂದಿನ ದಿನಗಳಲ್ಲಿ ಲೌಡ್ ಸ್ಪೀಕರ್ ಗಳು  ಇರಲಿಲ್ಲವಾದ ಕಾರಣ ಎಲ್ಲರು ನಿಶಬ್ದವಾಗಿ ಭಾಷಣ ಕೇಳುತ್ತಿದ್ದರು. ಇದಕ್ಕೆ ಕೈಲಾಸಂ ಹೇಳುತ್ತಿದ್ದರು " ಲೌಡ್ ಸ್ಪೀಕರ್ ಗಳಿಲ್ಲದೆ ಇದ್ದಾಗ ಜನಗಳ ಸೈಲೆನ್ಸೆ ಆಮ್ಪ್ಲಿಫೈಯರುಗಳು. "   ಎಲ್ಲರು ಭಾಷಣಕಾರರ ಕಡೆಗೆ ಮುಖ ತಿರುಗಿಸಿಕೊಂಡು ಕುಳಿತಿದ್ದರೆ, ಕೈಲಾಸಂ ಮಾತ್ರ ದೂರದಲ್ಲಿನ ಮರದ ಕಾಂಡ ಒಂದಕ್ಕೆ ಕಿವಿ ಇರಿಸಿ ನಿಂತಿದ್ದರು.  ಗುರುವಿನ ವಾಣಿ ಗಾಳಿಯಲ್ಲಿ ತೇಲಿ ಬಂದು ಮರದ ಕಾಂಡಕ್ಕೆ ಅಪ್ಪಳಿಸುವ ಮತ್ತು ಪ್ರತಿಫಲಿಸುವ  ಬಿಂದುವಿಗೆ ಸರಿಯಾಗಿ ಇವರ ಕಿವಿ. 
         ಹೀಗೆ ನಿಂತಿದ್ದನ್ನು ನೋಡಿ ಯಾರೋ ಕೇಳಿದರು " ಏನು ಹೀಗೆ?" 
         ತಕ್ಷಣ ಅವರನ್ನು ಕರೆದು "ನಿಮಗೆ Laws of Reflection ಗೊತ್ತೇ?"  ಎಂದು ಪ್ರಶ್ನಿಸಿದರು.         
         ಅವರು ತಕ್ಷಣ ಬಂದ ಪ್ರಶ್ನೆಯಿಂದ ತಬ್ಬಿಬ್ಬಾದರು ಸಾವರಿಸಿಕೊಂಡು " ಗೊತ್ತಿಲ್ಲದೇ ಏನು?  ಮಕ್ಕಳಿಗೆ ನಿತ್ಯ ಪಾಠ          ಮಾಡಬೇಕಲ್ಲ !"  ಎಂದರು.  
         ತಕ್ಷಣ ಕೈಲಾಸಂರವರು " ಇದು Angle of incidence is equal to the angle of reflection.  ನೀವು ಪ್ರತಿನಿತ್ಯ ಹೇಳಿದ್ದನ್ನ ನಾನು ಪ್ರಾಕ್ಟಿಕಲ್ಲಾಗಿ ಮಾಡಿದೆ ಅಷ್ಟೇ. ಕೇಳಬೇಕು, ಕಲಿಯಬೇಕು ಎಂಬ ಮಾತಿನೊಂದಿಗೆ LAWS ಗಳು LOSS ಆಗದಂತೆ ಕರಗತ ಮಾಡಿಕೊಂಡಿದ್ದೇನೆ ಅಷ್ಟೇ " ಎಂದರು.  ಆ ಮೇಷ್ಟ್ರು ಸುಸ್ತು!!!!!!!!!!!.

                                                           ************************

October 4, 2012

Dedication





I salute him for his love, faith in his daughter, his efforts and perseverance. 
I salute her for her hard work, determination, dedication, faith and love.
Such stories uplift the spirits in all of us.